ಲಡಾಖ್: ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಚೀನಾ ಯೋಧರ ಜೊತೆ ಸಂಘರ್ಷ ನಡೆದಾಗಲೂ ಸಹ ಭಾರತೀಯ ಯೋಧರು ಒಪ್ಪಂದಗಳನ್ನು ಮುರಿಯದೇ ಅವುಗಳಿಗೆ ಬದ್ಧರಾಗಿರಲು ತಮ್ಮ ಜೀವವನ್ನೇ ಅರ್ಪಿಸಿದ್ದಾರೆ.
ಚೀನಾ ಯೋಧರು ಕಬ್ಬಿಣದ ರಾಡ್ ಗಳು, ಮೊಳೆಗಳಿಂದಲೇ ತುಂಬಿದ್ದ ಬಡಿಗೆಗಳನ್ನು ತಂದು ಅವುಗಳಿಂದ ಭಾರತೀಯ ಯೋಧರ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದಾರೆ. ಈ ಘರ್ಷಣೆಯಲ್ಲಿ 20 ಯೋಧರು ಸಾವನ್ನಪ್ಪಿದ್ದಾರೆ.
ಚೀನಾ-ಭಾರತದ ನಡುವಿನ ಸಂಘರ್ಷದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್, ಗಲ್ವಾನ್ ಕಣಿವೆಯಲ್ಲಿದ್ದ ಭಾರತೀಯ ಯೋಧರ ಬಳಿ ಶಸ್ತ್ರಾಸ್ತ್ರಗಳಿದ್ದವು ಎಂದು ಎಂದು ಹೇಳಿದ್ದಾರೆ. ಗಡಿಯಲ್ಲಿ ನಿಯೋಜನೆಗೊಂಡ ಯೋಧರ ಕೈಲಿ ಶಸ್ತ್ರಾಸ್ತ್ರಗಳಿರುತ್ತವೆ ಎಂದು ತಿಳಿಸಿದ್ದಾರೆ.
ಆದರೆ 1996-2005 ರಲ್ಲಿ ಭಾರತ-ಚೀನಾ ನಡುವೆ ನಡೆದ ಒಪ್ಪಂದಗಳ ಪೈಕಿ ಉಭಯ ಪಕ್ಷದ ಸೈನಿಕರು ಮುಖಾಮುಖಿಯಾದಾಗ ಫೈರ್ ಆರ್ಮ್ಸ್ ನ್ನು ಬಳಕೆ ಮಾಡುವಂತಿಲ್ಲ ಎಂಬ ನಿಯಮವಿದೆ. ಜೂ.15 ರಂದು ಭಾರತ-ಚೀನಾ ಯೋಧರ ನಡುವೆ ಸಂಘರ್ಷವೇರ್ಪಟ್ಟಾಗ ಈ ನಿಯಮಗಳನ್ನು ಉಲ್ಲಂಘನೆ ಮಾಡದೇ ಭಾರತೀಯ ಯೋಧರು ಚೀನಿಯರೊಂದಿಗೆ ಹೋರಾಡಿ ತಮ್ಮ ಜೀವವನ್ನೇ ತ್ಯಾಗ ಮಾಡಿದ್ದಾರೆ.
Advertisement