ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಚೀನಾ ಅತಿಕ್ರಮಣ ಮಾಡಿ ಭಾರತೀಯ ಯೋಧರ ಮೇಲೆ ನಡೆಸಿದ ದಾಳಿಯ ವೇಳೆ ಭಾರತೀಯ ಯೋಧರು ಒಪ್ಪಂದಗಳಿಗೆ ಬದ್ಧರಾಗಿ ಚೀನಾ ಸೈನಿಕರ ಮೇಲೆ ಗುಂಡು ಹಾರಿಸದೇ ಪ್ರಾಣತ್ಯಾಗ ಮಾಡಿದ್ದರು. ಆದರೆ ಭಾರತ ಈಗ ತನ್ನ ನಿಲುವು ಬದಲಾವಣೆ ಮಾಡಿಕೊಳ್ಳಲು ಮುಂದಾಗಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಿವಾಸದಲ್ಲಿ ನಡೆದ ಸೇನಾ ಸಿಬ್ಬಂದಿಗಳ ಮುಖ್ಯಸ್ಥರು, 3 ಸೇನೆಗಳ ಮುಖ್ಯಸ್ಥರೊಂದಿಗೆ ನಡೆದ ಸಭೆಯಲ್ಲಿ ಈ ಬಗ್ಗೆ ಮಹತ್ವದ ಚರ್ಚೆ ನಡೆದಿದ್ದು, ಗಡಿಯಲ್ಲಿ ಚೀನಾ ತಂಟೆಯನ್ನು ನಿಭಾಯಿಸುವುದಕ್ಕೆ ಭಾರತ ತನ್ನ ವಿಧಾನವನ್ನು ಬದಲಾವಣೆ ಮಾಡಿಕೊಳ್ಳಲು ತೀರ್ಮಾನಿಸಿದೆ. ಇದರ ಪರಿಣಾಮ ಚೀನಾ ತಂಟೆಗಳಿಗೆ ಇನ್ನು ಮುಂದೆ ಭಾರತ ಅದರ ಭಾಷೆಯಲ್ಲೇ ಉತ್ತರ ನೀಡಲಿದ್ದು, ಚೀನಿಯರಿಂದ ಅತಿಕ್ರಮಣ ನಡೆದರೆ ಪ್ರಬಲವಾಗಿ ಪ್ರತ್ಯುತ್ತರ ನೀಡಲಿದೆ.
ಮಿತಿಮೀರಿದ ಪರಿಸ್ಥಿತಿಗಳಲ್ಲಿ ಫೀಲ್ಡ್ ಕಮಾಂಡರ್ ಗಳು ಫೈರ್ ಆರ್ಮ್ಸ್ (ಬಂದೂಕುಗಳನ್ನೂ) ಬಳಕೆ ಮಾಡಲು ಅನುಮತಿ ನೀಡಲಾಗಿದೆ. ಈ ಸಭೆಯಲ್ಲಿ ಅರುಣಾಚಲ ಪ್ರದೇಶ, ಸಿಕ್ಕೀಮ್, ಉತ್ತರಾಖಂಡ್, ಹಿಮಾಲ ಪ್ರದೇಶಗಳಲ್ಲಿನ ಎಲ್ಎಸಿಯಲ್ಲನ ಪರಿಸ್ಥಿತಿಗಳನ್ನೂ ರಾಜನಾಥ್ ಸಿಂಗ್ ಪರಿಶೀಲಿಸಿದ್ದಾರೆ. ಚೀನಾ ಗಡಿಯಲ್ಲಿ ಕ್ಯಾತೆ ತೆಗೆದರೆ ಸೇನೆ ಸ್ವಂತ ನಿರ್ಧಾರ ಕೈಗೊಂಡು ಪ್ರಬಲ ಪ್ರತ್ಯುತ್ತರ ನೀಡಲಿದೆ. ಒಪ್ಪಂದಗಳಿಗೆ ಬದ್ಧರಾಗಿ ಶಸ್ತ್ರಾಸ್ತ್ರ ಮುಟ್ಟದ ಭಾರತೀಯ ಯೋಧರ ಶಿಸ್ತು ಹಾಗೂ ಬದ್ಧತೆಯನ್ನು ಚೀನಿ ಸೇನಾ ಸಿಬ್ಬಂದಿಗಳು ದುರುಪಯೋಗಪಡಿಸಿಕೊಂಡಿದ್ದರು.
ಗಡಿಯಲ್ಲಿ ಸಂಘರ್ಷವೇರ್ಪಟ್ಟಾಗ ಶಸ್ತ್ರಾಸ್ತ್ರ ಬಳಕೆ ಮಾಡುವುದಿಲ್ಲ ಎಂಬ ಒಪ್ಪಂದ ಉಭಯ ರಾಷ್ಟ್ರಗಳ ನಡುವೆ ನಡೆದಿದ್ದು, ಇದನ್ನೇ ದಾಳವಾಗಿ ಬಳಸಿಕೊಂಡ ಚೀನಾ ಯೋಧರು ಲಡಾಖ್ ನಲ್ಲಿ ಸಂಘರ್ಷ ಉಂಟಾದಾಗ ಭಾರತೀಯ ಯೋಧರ ಮೇಲೆ ಶಸ್ತ್ರಾಸ್ತ್ರ ಬಳಸದೇ ಕಬ್ಬಿಣದ ರಾಡ್ ಹಾಗೂ ಇನ್ನಿತರ ಮಾರಕಾಸ್ತ್ರಗಳನ್ನು ಬಳಸಿ ಭಾರತದ 20 ಯೋಧರನ್ನು ಹತ್ಯೆ ಮಾಡಿದ್ದರು. ಇದು ಭಾರತೀಯ ಯೋಧರಿಗೆ ಅಘಾತವಾಗಿ ಪರಿಣಮಿಸಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ, ತಾನೂ ಸಹ ಇಷ್ಟು ದಿನ ಪಾಲಿಸಿಕೊಂಡು ಬಂದಿದ್ದ ಶಸ್ತ್ರಾಸ್ತ್ರ ಬಳಕೆ ಮಾಡದೇ ಇರುವ ನೀತಿನ್ನು ಬದಿಗಿರಿಸಿ ಚೀನಾದೊಂದಿಗೆ ವ್ಯವಹರಿಸಲು ನಿರ್ಧರಿಸಿದೆ ಹಾಗೂ ತಾನು ಇನ್ನು ಮುಂದೆ ಈ ಹಿಂದಿನ ನೀತಿಗೇ ಜೋತು ಬೀಳುವುದಿಲ್ಲ ಎಂಬುದನ್ನು ಚೀನಾಗೆ ಮನವರಿಕೆ ಮಾಡಿಕೊಡಲಿದೆ. ಇದಕ್ಕಾಗಿ ಕಮಾಂಡರ್ ಗಳು ಇನ್ನು ಮುಂದಿನ ದಿನಗಳಲ್ಲಿ ಚೀನಾ ಕ್ರಿಯೆಗಳಿಗೆ ನೀಡುವ ಉತ್ತರವನ್ನು ಮತ್ತಷ್ಟು ಬದಲಿಸಿಕೊಳ್ಳಲಿದ್ದಾರೆ ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಅತಿ ಹೆಚ್ಚು ಘರ್ಷಣೆಗಳು ಸಂಭವಿಸುವ ಫಿಂಗರ್-4 ಬಳಿ "ನೀವು ಕೈಕಟ್ಟಿ ಕೂರಬೇಡಿ, ನಿಮ್ಮ ಶಕ್ತಿ ತೋರಿಸಿ ಎಂಬ ಸಂದೇಶ ನಮಗೆ ಬಂದಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಒಟ್ಟಾರೆ ಗಡಿ ಭಾಗದಲ್ಲಿ ಚೀನಾದೊಂದಿಗೆ ವ್ಯವಹರಿಸುವ ಭಾರತದ ನೀತಿ ಇನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣವಾಗಿರಲಿದೆ.
Advertisement