ಪಾಟ್ನಾ: ಬಿಹಾರದ ವಿವಿಧ ಜಿಲ್ಲೆಗಳಲ್ಲಿ ಸಂಭವಿಸಿದ ಸಿಡಿಲಿಗೆ ಸಾವಿಗೀಡಾದವರ ಸಂಖ್ಯೆ 92ಕ್ಕೆ ಏರಿಕೆಯಾಗಿದೆ ಎಂದು ಬಿಹಾರ ಸರ್ಕಾರ ಮಾಹಿತಿ ನೀಡಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಬಿಹಾರದ ವಿಪತ್ತು ನಿರ್ವಹಣಾ ಇಲಾಖೆ (ಡಿಎಂಡಿ), ಸಿಡಿಲಿಗೆ ಬಲಿಯಾದವರ ಸಂಖ್ಯೆ 92ಕ್ಕೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದೆ. ಬಿಹಾರದ ಗೋಪಾಲ್ಗಂಜ್, ಮಧುಬನಿ ಮತ್ತು ನವಾಡಾ, ಬಾಗಲ್ಪುರ, ಸಿವಾನ್, ದರ್ಬಂಗಾ, ಬಂಕಾ, ಪೂರ್ವ ಚಂಪಾರನ್, ಖಗರಿಯಾ, ಔರಂಗಾಬಾದ್, ಪಶ್ಚಿಮ ಚಂಪಾರನ್, ಕಿಶನ್ಗಂಜ್, ಜಮುಯಿ, ಜಹಾನಾಬಾದ್, ಪೂರ್ಣಿಯಾ, ಸುಪಾಲ್, ಬಕ್ಸಾರ್, ಕೈಮೂರ್, ಸಮಸ್ತಿಪುರ, ಶಿವಹಾರ್, ಸರನ್, ಸೀತಮಾರ್ಹಿ ಮತ್ತು ಮಾಧೇಪುರ ಜಿಲ್ಲೆಗಳಲ್ಲಿ ಸಿಡಿಲು ಬಡಿದು ಸಾವುನೋವು ಸಂಭವಿಸಿದೆ ಎಂದು ತಿಳಿದುಬಂದಿದೆ.
ಸಿಡಿಲು ಬಡಿದು ಸಾವನ್ನಪ್ಪಿದವರ ಪೈಕಿ ಹೆಚ್ಚಿನ ಮಂದಿ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರು ಎಂದು ಡಿಎಂಡಿ ಮಾಹಿತಿ ನೀಡಿದೆ. ಗುಡುಗು ಮತ್ತು ಮಿಂಚಿನೊಂದಿಗೆ ಭಾರಿ ಮಳೆಯು ರಾಜ್ಯದಲ್ಲಿ ಮಾನ್ಸೂನ್ ಪ್ರಾರಂಭವಾಗುವ ಮೊದಲೇ ಬಿಹಾರದ ವಿವಿಧ ಭಾಗಗಳಲ್ಲಿ ಸಂಭವಿಸಿದೆ.ಮುಂದಿನ ಕೆಲವು ದಿನಗಳಲ್ಲಿ ರಾಜ್ಯದ ಎಲ್ಲಾ 38 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಪ್ರಕಟಣೆ ತಿಳಿಸಿದೆ.
ಹವಾಮಾನ ಇಲಾಖೆಯು ರಾಜ್ಯದಲ್ಲಿ ಮುಂದಿನ 5 ದಿನಗಳವರೆಗೆ ಮಳೆಯಾಗುವ ಮುನ್ಸೂಚನೆ ನೀಡಿದೆ. ಇಂದು ಮತ್ತು ನಾಳೆ ಕಿಶನ್ಗಂಜ್, ಅರೇರಿಯಾ, ಕಟಿಹಾರ್, ಪೂರ್ಣಿಯಾ, ಸುಪಾಲ್ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಶುಕ್ರವಾರದವರೆಗೆ, ಸುಮಾರು 10 ಜಿಲ್ಲೆಗಳು ಕೆಂಪು ವಲಯದಲ್ಲಿವೆ. ಈ ಪೈಕಿ ಪೂರ್ವ ಚಂಪಾರನ್, ಪಶ್ಚಿಮ ಚಂಪಾರನ್, ಗೋಪಾಲಗಂಜ್, ಸೀತಮಾರ್ಹಿ, ಮಧುಬಾನಿ, ಸುಪಾಲ್, ಅರೇರಿಯಾ, ಕಿಶಂಗಂಜ್, ಪೂರ್ಣಿಯಾ, ಸಹರ್ಸಾ, ಮತ್ತು ಮಾಧೇಪುರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ.
4 ಲಕ್ಷ ರೂ ಪರಿಹಾರ ಘೋಷಿಸಿದ ಬಿಹಾರ ಸರ್ಕಾರ
ಇನ್ನು ಸಿಡಿಲು ಬಡಿದ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಲಾ 4 ಲಕ್ಷ ರೂ ಘೋಷಿಸಿದ್ದಾರೆ.
10 ಲಕ್ಷ ರೂ ಪರಿಹಾರಕ್ಕೆ ಆಗ್ರಹಿಸಿದ ಆರ್ ಜೆಡಿ
ಇನ್ನು ಸರ್ಕಾರ ನೀಡಿರುವ 4ಲಕ್ಷ ರೂಗಳ ಪರಿಹಾರಕ್ಕೆ ಆರ್ ಜೆಡಿ ವಿರೋಧ ವ್ಯಕ್ತಪಡಿಸಿದ್ದು, ಸಂತ್ರಸ್ಥರೆಲ್ಲರೂ ಕೂಲಿ ಕಾರ್ಮಿಕರಾಗಿದ್ದು, ಅವರಿಲ್ಲರಿಗೂ ಕನಿಷ್ಠ 10 ಲಕ್ಷ ರೂ ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಮಾತನಾಡಿರು ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಅವರು, ಸಂತ್ರಸ್ಥರೆಲ್ಲರೂ ರೈತಾಪಿ ವರ್ಗಕ್ಕೆ ಸೇರಿದವರಾಗಿದ್ದು, ಮೃತ ಕುಟುಂಬಕ್ಕೆ ಶಾಂತಿ ಸಿಗಲಿ. ಸರ್ಕಾರ ಈ ಕೂಡಲೇ ಸಂತ್ರಸ್ಥರ ಕುಟುಂಬಕ್ಕೆ ನೆರವಾಗಬೇಕು. ಅಂತೆಯೇ ತಲಾ 10 ಲಕ್ಷ ರೂಗಳನ್ನು ಪರಿಹಾರವಾಗಿ ನೀಡಬೇಕು ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಸಂತಾಪ
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ದುರಂತಕ್ಕೆ ಆಘಾತ ವ್ಯಕ್ತಪಡಿಸಿದ್ದು, ಸಂತ್ರಸ್ಥ ಕುಟುಂಬಳಿಗೆ ಸಾಂತ್ವನ ಹೇಳಿದ್ದಾರೆ.
Advertisement