ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಟ್ರಾಲ್ ಪ್ರದೇಶವನ್ನು ಹಿಜ್ಬುಲ್ ಮುಜಾಹಿದ್ದೀನ್ ಮುಕ್ತ ಮಾಡಿರುವ ಹೊರಬೀಳುತ್ತಿದ್ದಂತೆಯೇ ಅನಂತ್ ನಾಗ್ ಜಿಲ್ಲೆಯಿಂದ ಹೃದಯವಿದ್ರಾವಕ ಘಟನೆಯೊಂದು ವರದಿಯಾಗಿದೆ. ಅನಂತ್ ನಾಗ್ ಜಿಲ್ಲೆಯಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 8 ವರ್ಷದ ಓರ್ವ ಬಾಲಕ, ಸಿಅರ್ ಪಿಎಫ್ ನ ಯೋಧರೊಬ್ಬರು ಮೃತಪಟ್ಟಿದ್ದಾರೆ.
ಮೃತ ಬಾಲಕನನ್ನು ನಹನ್ ಯವಾರ್ ಎಂದು ಗುರುತಿಸಲಾಗಿದ್ದು ನೆರೆಯ ಜಿಲ್ಲೆ ಕುಲ್ಗಾಮ್ ನ ನಿವಾಸಿಯಾಗಿದ್ದು, ಖಾಸಗಿ ಕೆಲಸದ ನಿಮಿತ್ತ ತನ್ನ ತಂದೆಯ ಜೊತೆ ತೆರಳುತ್ತಿದ್ದಾಗ ಗುಂಡೇಟು ತಗುಲಿ ಪಾದ್ಶಾಹಿ ಬಾಘ್ ಬ್ರಿಡ್ಜ್ ಬನ್ಳಿ ಸಾವನ್ನಪ್ಪಿದ್ದಾನೆ.
ಸಿಆರ್ ಪಿಎಫ್ ನ ರೋಡ್ ಓಪನಿಂಗ್ ಪಾರ್ಟಿಯನ್ನು ಗುರಿಯಾಗಿರಿಸಿಕೊಂಡು ಜಮ್ಮು-ಕಾಶ್ಮೀರ ಇಸ್ಲಾಮಿಕ್ ಸ್ಟೇಟ್ (ಜೆಕೆಐಎಸ್) ನ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ ಓರ್ವ ಯೋಧ ಶಾಮಲ್ ಕುಮಾರ್ ಗೆ ಗುಂಡೇಟು ತಗುಲಿದ್ದು ಹುತಾತ್ಮರಾಗಿದ್ದಾರೆ. ಇಬ್ಬರೂ ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ಕರೆತರಲಾಯಿತಾದರೂ ಬದುಕಿ ಉಳಿಯಲಿಲ್ಲ.
ಸೇನಾ ಸಿಬ್ಬಂದಿಗಳು ದಾಳಿ ನಡೆದ ಪ್ರದೇಶವನ್ನು ಸುತ್ತುವರೆದಿದ್ದು, ದಾಳಿ ನಡೆಸಿದವರಿಗಾಗಿ ಶೋಧಕಾರ್ಯ ನಡೆಸಿದ್ದರು, ಜಮ್ಮು-ಕಾಶ್ಮೀರದ ಪೊಲೀಸರೂ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ದಾಳಿ ನಡೆಸಿದ್ದ ಉಗ್ರ ಸಿಕ್ಕಿಬಿದ್ದಿದ್ದು, ಆತನನ್ನು ಜಮ್ಮು-ಕಾಶ್ಮೀರ ಇಸ್ಲಾಮಿಕ್ ಸ್ಟೇಟ್ ನ ಜಹೀದ್ ದಾಸ್ ಎಂದು ಗುರುತಿಸಲಾಗಿದ್ದು ಎಫ್ಐಆರ್ ದಾಖಲಿಸಲಾಗಿದೆ.
Advertisement