ಗಣೇಶ ವಿಗ್ರಹಗಳು 4 ಅಡಿಗಿಂತ ಎತ್ತರವಾಗಿರಬಾರದು: ಮುಖ್ಯಮಂತ್ರಿ ಉದ್ಧವ್ ಠಾಕ್ರೆ
ಮುಂಬೈ: ಮುಂಬರುವ ಗಣೇಶ ಚತುರ್ಥಿ ವೇಳೆಯಲ್ಲಿ ಗಣೇಶ ಮಂಡಳಿಗಳು ಪ್ರತಿಷ್ಠಾಪಿಸುವ ವಿಗ್ರಹಗಳು ನಾಲ್ಕು ಅಡಿಗಿಂತ ಎತ್ತರವಾಗಿರಬಾರದು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಈ ವರ್ಷ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಿಸದೆ ಸರಳವಾಗಿ ಆಚರಿಸಬೇಕೆಂದು ಸಾರ್ವಜನಿಕರು ಹಾಗೂ ಗಣೇಶ ಮಂಡಳಿಗಳಲ್ಲಿ ಉದ್ಧವ್ ಠಾಕ್ರೆ ಮುಂಚಿತವಾಗಿ ಮನವಿ ಮಾಡಿಕೊಂಡಿದ್ದಾರೆ. ಆಗಸ್ಟ್ 22 ರಂದು ಗಣೇಶ ಚತುರ್ಥಿ ಇದೆ. ಗಣೇಶ ವಿಗ್ರಹಗಳ ಪ್ರತಿಷ್ಠಾಪನೆಯಲ್ಲಿ ಮುಂಬೈ ಹಿಂದಿನಿಂದಲೂ ಪ್ರಸಿದ್ಧಿಯಾಗಿದೆ.
ನಂಬಿಕೆ ಹಾಗೂ ಭಕ್ತಿ ಎತ್ತರದ ವಿಗ್ರಹಗಳಿಗಿಂತಲೂ ಪ್ರಮುಖವಾದವು, ಕೊರೋನಾವೈರಸ್ ಸಂಸ್ಕತಿ ಮತ್ತು ಸಂಪ್ರದಾಯದ ಮೇಲೂ ಪರಿಣಾಮ ಬೀರಿದೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ಜನದಟ್ಟಣೆ ತಡೆಗಟ್ಟಲು ಎಲ್ಲಾ ಪೂಜಾ ಸ್ಥಳಗಳನ್ನು ಮುಚ್ಚಲಾಗಿದೆ. ಪುಣೆಯಲ್ಲಿ ಎತ್ತರದ ಗಣೇಶ ವಿಗ್ರಹ ಪ್ರತಿಷ್ಠಾಪಿಸದೆ ಜನದಟ್ಟಣೆಯಾಗದಂತೆ ನೋಡಿಕೊಳ್ಳಬೇಕಾಗಿದೆ.ಗಣೇಶ ಮಂಡಳಿಗಳ ಜೊತೆ ಮಾತನಾಡಿದ್ದು, ಶಿಸ್ತು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಅವರು ಒಕ್ಕೂರಲಿನಿಂದ ಹೇಳಿದ್ದಾರೆ ಎಂದು ಠಾಕ್ರೆ ತಿಳಿಸಿದ್ದಾರೆ.