ಕೋಲ್ಕತ್ತಾ: ಕೋಲ್ಕತಾದ ಶಾಹಿದ್ ಮಿನರ್ ಮೈದಾನದಲ್ಲಿ ಭಾನುವಾರ ನಡೆದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರ್ಯಾಲಿಯಲ್ಲಿ ಬಿಜೆಪಿ ಕಾರ್ಯಕರ್ತರು 'ಗೋಲಿ ಮಾರೋ'(ಗುಂಡು ಹೊಡೆಯಿರಿ) ಘೋಷಣೆ ಕೂಗಿರುವ ಘಟನೆ ನಡೆದಿದೆ.
ಇಂದು ಶಾಹಿದ್ ಮಿನರ್ ಮೈದಾನದಲ್ಲಿ ಅಮಿತ್ ಶಾ ಅವರು ಸಿಎಎ ಪರ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ವೇಳೆಯೇ ಕೆಲವು ಕಾರ್ಯಕರ್ತರು 'ಗೋಲಿ ಮಾರೋ' ಘೋಷಣೆ ಕೂಗಿದರು. ಕೂಡಲೇ ಗುಂಪನ್ನು ಚದುರಿಸಿದ ಪೊಲೀಸರು, ಘೋಷಣೆ ಕೂಗದಂತೆ ಎಚ್ಚರಿಕೆ ನೀಡಿದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಬಿಜೆಪಿ ಕಾರ್ಯಕರ್ತರು ಗೋಲಿ ಮಾರೋ ಘೋಷಣೆ ಕೂಗಿದ ಸುದ್ದಿ ನಗರದಾದ್ಯಂತ ಹರಡುತ್ತಿದ್ದಂತೆ ಪ್ರತಿಪಕ್ಷಗಳು ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಘೋಷಣೆ ಕೂಗಿದವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದಕ್ಕೂ ಮೊದಲು ಮಾತನಾಡಿದ ಗೃಹ ಸಚಿವ ಅಮಿತ್ ಶಾ, ಪಶ್ಚಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಿಎಎ ಕುರಿತು ಜನರಲ್ಲಿ ಭೀತಿ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಯಾವುದೇ ಕಾರಣಕ್ಕೂ ಸಿಎಎ ಜಾರಿ ನಿರ್ಣಯದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ಅಮಿತ್ ಶಾ, ಸಿಎಎ ಕುರಿತು ವದಂತಿ ಹಬ್ಬಿಸುವುದನ್ನು ಪ್ರತಿಪಕ್ಷಗಳು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
Advertisement