ಮುಂಬೈ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಶೇ.100ರಷ್ಟು ಕೇಂದ್ರ ಸರ್ಕಾರವೇ ನೇರಹೊಣೆ ಎಂದು ಎನ್'ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಆರೋಪಿಸಿದ್ದಾರೆ.
ಮುಂಬೈನಲ್ಲಿ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಕೇಂದ್ರದ ಬಿಜೆಪಿ ನೇತೃತ್ವದ ಆಡಳಿತಾರೂಢ ಎನ್'ಡಿಎ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ದಹಲಿ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಬಿಜೆಪಿ ಒಡಕು ರಾಜಕೀಯ ಮಾಡುತ್ತಿದೆ. ಸಂವಿಧಾನದ ಪ್ರಕಾರ ಸಾರ್ವಜನಿಕ ಪ್ರತಿನಿಧಿಗಳಾಗಲೀ, ಆಡಳಿತಾರೂಢ ಪಕ್ಷವಾಗಲೀ ದೆಹಲಿಯಲ್ಲಿ ಸೃಷ್ಟಿಯಾದ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಗೆ ಹೊಣೆಯಲ್ಲವ. ಕೇಂದ್ರ ಸರ್ಕಾರದ ಮೇಲೆ ಇದರ ಜವಾಬ್ದಾರಿಯಿದೆ. ದೆಹಲಿಯಲ್ಲಿ ಏನೇ ಆಗಿದ್ದರೂ ಅದಕ್ಕೆ ಕೇಂದ್ರ ಸರ್ಕಾರವೇ ಶೇ.100 ಹೊಣೆಯಾಗಿದೆ ಎಂದು ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ರಾಜಧಾನಿ ದೆಹಲಿ ಹೊತ್ತಿ ಉರಿಯುತ್ತಲೇ ಇದೆ. ಕೇಂದ್ರ ಸರ್ಕಾರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷ ದೆಹಲಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಗದಲಿಲ್ಲ.ಹೀಗಾಗಿ ಕೋಮುವಾದವನ್ನು ಬಿತ್ತುವ ಮೂಲಕ ಸಮಾಜವನ್ನು ಒಡೆಯಲು ಯತ್ನಿಸುತ್ತಿದೆ. ಸಮಾಜದಲ್ಲಿ ಹಾಗೂ ಧಾರ್ಮಿಕ ಶಾಂತಿ ಕದಡಲು ಪ್ರಧಾನಮಂತ್ರಿ, ಗೃಹ ಸಚಿವ ಹಾಗೂ ಕೇಂದ್ರದ ಸಚಿವರೇ ಕಾರಣ. ದೇಶದ ಪ್ರಧಾನಮಂತ್ರಿಗಳು ಎಲ್ಲಾ ಧರ್ಮಕ್ಕೂ ಸೀಮಿತರಾಗಿರಬೇಕು. ಎಲ್ಲಾ ರಾಜ್ಯ, ಎಲ್ಲಾ ರೀತಿಯ ಜನತೆ ಹಾಗೂ ಇಡೀ ದೇಶದ ವ್ಯಕ್ತಿಯಾಗಿರಬೇಕು. ಆದರೆ, ಅಂತಹ ಸ್ಥಾನದಲ್ಲಿರುವ ವ್ಯಕ್ತಿ ಧಾರ್ಮಿಕವಾಗಿ ಮಾತನಾಡುತ್ತಿದ್ದಾರೆ. ಇದೇ ರೀತಿಯಾಗಿಯೇ ಕೇಂದ್ರ ಸಚಿವರು ಹಾಗೂ ಗೃಹ ಸಚಿವರೂ ಮಾತನಾಡುತ್ತಿದ್ದಾರೆ. ಇವುಗಳಿಗೆ ತಮ್ಮ ಶಕ್ತಿ ಪ್ರದರ್ಶನ ಮಾಡುವ ಬದಲು ನಾಯಕರು ಜನತೆಯ ಭದ್ರತೆಯತ್ತ ತಮ್ಮ ಬಲವನ್ನು ಉಪಯೋಗಿಸಬೇಕು. ಗೋಲಿಮಾರೋ ಎಂಬಂತಹ ಹೇಳಿಕೆಗಳನ್ನು ಬಿಜೆಪಿ ಸಚಿವರು ನೀಡುತ್ತಿದ್ದಾರೆ. ಇದು ಅತ್ಯಂತ ಖಂಡನೀಯ ವಿಚಾರ ಎಂದು ತಿಳಿಸಿದ್ದಾರೆ.
ಇದೇ ವೇಳೆ ಟ್ರಂಪ್ ಭೇಟಿ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಅಮೆರಿಕಾ ಅಧ್ಯಕ್ಷರು ಭಾರತಕ್ಕೆ ಬಂದಾಗ ಸಾಕಷ್ಟು ಜನರ ಮೇಲೆ ದಾಳಿ ನಡೆಯಿತು. ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಯನ್ನು ತಂದೊಡ್ಡಲಿದೆ ಎಂದಿದ್ದಾರೆ.
Advertisement