ಲೋಕಸಭೆಯಲ್ಲಿ ಕೋಲಾಹಲದ ನಡುವೆ ಖನಿಜ ಕುರಿತ ಮಸೂದೆ ಅಂಗೀಕಾರ: ಉಭಯ ಕಲಾಪ ಮಾರ್ಚ್ 11ಕ್ಕೆ ಮುಂದೂಡಿಕೆ

ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ದೆಹಲಿ ಗಲಭೆ ಮುಂದಿಟ್ಟುಕೊಂಡು ಕಾಂಗ್ರೆಸ್ ಹಾಗೂ ಕೆಲ ಪ್ರತಿಪಕ್ಷಗಳ ಸದಸ್ಯರು ಮುಂದುವರಿಸಿರುವ ಹಿನ್ನೆಲೆಯಲ್ಲಿ ಎರಡೂ ಸದನಗಳ ಕಲಾಪವನ್ನು ಮತ್ತೆ ಮುಂದೂಡಲಾಯಿತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ದೆಹಲಿ ಗಲಭೆ ಮುಂದಿಟ್ಟುಕೊಂಡು ಕಾಂಗ್ರೆಸ್ ಹಾಗೂ ಕೆಲ ಪ್ರತಿಪಕ್ಷಗಳ ಸದಸ್ಯರು ಮುಂದುವರಿಸಿರುವ ಹಿನ್ನೆಲೆಯಲ್ಲಿ ಎರಡೂ ಸದನಗಳ ಕಲಾಪವನ್ನು ಮತ್ತೆ ಮುಂದೂಡಲಾಯಿತು.

ಲೋಕಸಭೆಯಲ್ಲಿ ಶುಕ್ರವಾರ ಕೋಲಾಹಲದ ನಡುವೆ ಖನಿಜ ಕಾನೂನು ಮಸೂದೆ ಅಂಗೀಕಾರಗೊಂಡಿದ್ದು, ಕಲಾಪವನ್ನು ಮಾರ್ಚ್ 11ಕ್ಕೆ ಮುಂದೂಡಲಾಗಿದೆ. ಈ ಮಸೂದೆಯಲ್ಲಿ ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ, 1957 ಮತ್ತು ಕಲ್ಲಿದ್ದಲು ಗಣಿಗಾರಿಕೆ (ವಿಶೇಷ ನಿಬಂಧನೆಗಳು)ಕಾಯ್ದೆಗೆ ತಿದ್ದುಪಡಿಗಳನ್ನು ತರಲಾಗಿದೆ. ಕಲ್ಲಿದ್ದಲು ಗಣಿ ಹರಾಜಿನಲ್ಲಿ ಭಾಗವಹಿಸುವುದಕ್ಕೆ ನಿರ್ಬಂಧಗಳನ್ನು ತೆಗೆದುಹಾಕಲು ಮಸೂದೆ ಪ್ರಸ್ತಾಪಿಸಿದೆ ಮತ್ತು ಇದು ಎಲ್ಲಾ ದೇಶೀಯ ಮತ್ತು ಜಾಗತಿಕ ಕಂಪನಿಗಳಿಗೆ ವಾಣಿಜ್ಯ ಗಣಿಗಾರಿಕೆಗಾಗಿ ಕಲ್ಲಿದ್ದಲು ವಲಯವನ್ನು ಸಂಪೂರ್ಣವಾಗಿ ಮುಕ್ತಗೊಳಿಸುತ್ತದೆ. ಕಬ್ಬಿಣದ ಅದಿರು ಗಣಿಗಾರಿಕೆ ಗುತ್ತಿಗೆ ಈ ತಿಂಗಳ ಅವಧಿ ಮುಗಿಯುವ ಮುನ್ನ ಹರಾಜು ಮಾಡಲು ಮಸೂದೆ ಅನುವು ಮಾಡಿಕೊಡಲಿದೆ. 

ಇದೇ ವೇಳೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದಿವಾಳಿತನ ಮತ್ತು ದಿವಾಳಿತನ ಸಂಹಿತೆ (ಎರಡನೇ ತಿದ್ದುಪಡಿ) ಮಸೂದೆ, 2019ನ್ನು  ಪರಿಗಣನೆಗೆ ಮತ್ತು ಅಂಗೀಕಾರಕ್ಕಾಗಿ ಮಂಡಿಸಿದರು. ದಿವಾಳಿತನ ಮತ್ತು ದಿವಾಳಿತನ ಸಂಹಿತೆ (ಐಬಿಸಿ) 2016 ಅನ್ನು ತಿದ್ದುಪಡಿ ಮಾಡುವ ಸುಗ್ರೀವಾಜ್ಞೆಯನ್ನು ಪ್ರಕಟಿಸುವ ಪ್ರಸ್ತಾಪಕ್ಕೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಈ ತಿದ್ದುಪಡಿಗಳು ಹೊಸ ಮಸೂದೆ ಮೂಲಕ ಐಬಿಸಿ 2016 ರಲ್ಲಿನ ಕೆಲವು ಅಸ್ಪಷ್ಟತೆಗಳನ್ನು ಸರಿಪಡಿಸಲಿವೆ.  ಈ ಕ್ರಮವು ದಿವಾಳಿತನ ಪರಿಹಾರ ಪ್ರಕ್ರಿಯೆಯನ್ನು ಸರಾಗಗೊಳಿಸುವ ಮತ್ತು ವಾಣಿಜ್ಯ ವ್ಯವಹಾರನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ರಾಜ್ಯಸಭೆ ಕಲಾಪ ಮುಂದೂಡಿಕೆ
ರಾಜ್ಯಸಭೆಯಲ್ಲಿ ಪದೇ ಪದೇ ಉಪಸಭಾಪತಿಗಳು ಸದಸ್ಯರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರಾದರೂ ಅದು ಫಲ ನೀಡದ ಹಿನ್ನೆಲೆಯಲ್ಲಿ ಅಲ್ಲೂ ಕೂಡ ಮಧ್ಯಾಹ್ನ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ. ಕಳೆದ ಮಂಗಳವಾರದಿಂದ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ದೆಹಲಿ ಗಲಭೆ ಮಾರ್ದನಿಸುತ್ತಿದ್ದು, ಕಲಾಪ ಮಾತ್ರ ನಡೆದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com