ಭೂಪಾಲ್: ಕಾಂಗ್ರೆಸ್ ಆಡಳಿತವಿರುವ ಮಧ್ಯ ಪ್ರದೇಶದಲ್ಲಿ ರಾಜಕೀಯದ ಓಕುಳಿಯಾಟ ಶುರುವಾಗಿದೆ. ಮುಖ್ಯಮಂತ್ರಿ ಕಮಲ್ ನಾಥ್ ವಿರುದ್ಧ ಬಂಡಾಯ ಸಾರಿರುವ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದಾರೆ. ಜೊತೆಗೆ ಸಿಂಧಿಯಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿಂಧಿಯಾ ಬೆಂಬಲಿಗ ಶಾಸಕರು ಮಧ್ಯ ಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ಅವರ ಆಡಳಿತ ವೈಖರಿಗೆ ಬೇಸತ್ತು ಬಂಡಾಯ ಸಾರಿದ್ದಾರೆ. ಕಮಲ್ ನಾಥ್ ಸರ್ಕಾರ ಕೆಡವಲು ಅವರು ಪಕ್ಷ ತೊರೆಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕಮಲ್ ನಾಥ್ ನೇತೃತ್ವದ ರಾಜ್ಯ ಸರ್ಕಾರ ಬಿಕ್ಕಟ್ಟಿನಲ್ಲಿ ಸಿಲುಕಿದ ಒಂದು ದಿನದ ನಂತರ, ಸಿಂಧಿಯಾ ಅವರ ಆಪ್ತ ಎನ್ನಲಾದ ಹದಿನೇಳು ಶಾಸಕರು ಮುಂಬರುವ ರಾಜ್ಯಸಭಾ ಚುನಾವಣೆ ಹಿನ್ನಲೆಯಲ್ಲಿ ಸಂಪರ್ಕಕ್ಕೆ ಸಿಗದಂತಾಗಿದ್ದಾರೆ.
ಸಿಂಧಿಯಾ ಅವರಿಗೆ ಹಂದಿಜ್ವರ ಬಂದಿದೆ ಹೀಗಾಗಿ ಅವರು ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಹೇಳಿಕೆ ನೀಡಿ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದರು. ಹೀಗಾಗಿ ಎಲ್ಲರ ಕಣ್ಣು ಸಿಂಧಿಯಾ ಮುಂದಿನ ನಡೆ ಮೇಲೆ ನೆಟ್ಟಿದೆ.
ಇಂದು ಅಂದರೆ ಮಂಗಳವಾರ ಮಾಧವರಾವ್ ಸಿಂಧಿಯಾ ಅವರ ಜನ್ಮ ದಿನಾಚರಣೆಯಿದ್ದು, ಅದರ ಅಂಗವಾಗಿ ಅವರ ಪುತ್ರ ಜ್ಯೋತಿರಾದಿತ್ಯ ಸಿಂಧಿಯಾ ಮಹತ್ವದ ಘೋಷಣೆ ಮಾಡುವ ಸಾಧ್ಯತೆಯಿದೆ. ಬಿಜೆಪಿ ಸೇರುವ ಬಗ್ಗೆ ಪ್ರಕಟಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಸದ್ಯ ಸಿಂಧಿಯಾ ಮುಂದೆ ಮೂರು ಆಯ್ಕೆಗಳಿವೆ, ಕಾಂಗ್ರೆಸ್ ಪಕ್ಷದಲ್ಲೇ ಉಳಿಯುವುದು, ಇಲ್ಲ ತಮ್ಮ ತಂದೆಯ ರೀತಿ ಬೇರೆ ಪಕ್ಷ ಕಟ್ಟುವುದು ಅಥವಾ ಬಿಜೆಪಿ ಸೇರುವುದು.
ಜ್ಯೋತಿರಾದಿತ್ಯ ಸಿಂಧಿಯಾ ಬಹುದೊಡ್ಡ ನಾಯಕರು ಅವರು ನಮ್ಮ ಪಕ್ಷ ಸೇರಿದರೇ ಹೃದಯ ಪೂರ್ವಕವಾಗಿ ಸ್ವಾಗತಿಸುತ್ತೇವೆ ಎಂದು ಬಿಜೆಪಿ ಶಾಸಕ ನರೋತ್ತಮ್ ಮಿಶ್ರಾ ಹೇಳಿದ್ದಾರೆ.
Advertisement