ರಮೇಶ್ ಕುಮಾರ್ ವಿರುದ್ಧ ಹಕ್ಕು ಚ್ಯುತಿ ಮಂಡಿಸಲು ನಿರ್ಧಾರ- ಡಾ. ಕೆ. ಸುಧಾಕರ್
ಬೆಂಗಳೂರು: ತಮ್ಮ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ನಿರ್ಧರಿಸಿದ್ದ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಮಾಜಿ ಸಭಾಧ್ಯಕ್ಷ ರಮೇಶ್ ಕುಮಾರ್ ಅವರಿಂದ ನನ್ನ ಹಕ್ಕಿಗೆ ಚ್ಯುತಿಯಾಗಿದ್ದು, ಅವರ ವಿರುದ್ಧವೇ ಹಕ್ಕುಚ್ಯುತಿ ಮಂಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಇದು ವೈಯಕ್ತಿಕ ಜಟಾಪಟಿ ಅಲ್ಲ. ಕಾಂಗ್ರೆಸ್ ಪಕ್ಷದ ನಾಯಕರು ತಮ್ಮ ಭವಿಷ್ಯದ ಜತೆ ಚೆಲ್ಲಾಟವಾಡಿ, ರಾಜಕೀಯ ಷಡ್ಯಂತ್ರ ರೂಪಿಸಿದ್ದರು ಎಂದು ಆರೋಪಿಸಿದರು.
ಈ ಹಿಂದೆ ನಾವು 17 ಜನ ಶಾಸಕರು ನಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆವು. ಆದರೆ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ನಮ್ಮ ರಾಜೀನಾಮೆ ತಿರಸ್ಕರಿಸಿದ್ದರು. ನಾನು ಅದನ್ನು ಜನರ ಮುಂದೆ ಇಡಲು ಪ್ರಯತ್ನಿಸಿದ್ದೇ. ಅದನ್ನು ತಡೆಯಲು ರಮೇಶ್ ಕುಮಾರ್ ಮುಂದಾಗಿದ್ದರು ಎಂದು ತಿಳಿಸಿದರು.
ಈಗ ನನ್ನ ವಿರುದ್ಧ ಅವಹೇಳನಕಾರಿ ಪದ ಬಳಕೆ ಮಾಡಿದ್ದು, ಇದು ಖಂಡನೀಯ. ಬುಧವಾರ ರಮೇಶ್ ಕುಮಾರ್ ವಿರುದ್ಧ ಹಕ್ಕುಚ್ಯುತಿ ಮಂಡಿಸುತ್ತೇನೆ ಎಂದು ಪ್ರಕಟಿಸಿದರು