ಏಳು ಕಾಂಗ್ರೆಸ್ ಸಂಸದರ ಅಮಾನತ್ತು ರದ್ದುಪಡಿಸಿದ ಲೋಕಸಭೆ

ಅಶಿಸ್ತಿನ ವರ್ತನೆ ಪ್ರದರ್ಶಿಸಿದ್ದಕ್ಕಾಗಿ ಇದೇ ಮಾರ್ಚ್ ೫ ರಂದು ಏಳು ಕಾಂಗ್ರೆಸ್ ಸಂಸದರನ್ನು ಬಜೆಟ್  ಅಧಿವೇಶನದ ಉಳಿದ ಕಲಾಪಗಳಿಂದ ಅಮಾನತ್ತುಗೊಳಿಸಲು ಕೈಗೊಂಡಿದ್ದ ತೀರ್ಮಾನವನ್ನು ಲೋಕಸಭೆ ಬುಧವಾರ  ರದ್ದುಪಡಿಸಿದೆ.
ಸ್ಪೀಕರ್ ಓಂ ಬಿರ್ಲಾ
ಸ್ಪೀಕರ್ ಓಂ ಬಿರ್ಲಾ

ನವದೆಹಲಿ: ಅಶಿಸ್ತಿನ ವರ್ತನೆ ಪ್ರದರ್ಶಿಸಿದ್ದಕ್ಕಾಗಿ ಇದೇ ಮಾರ್ಚ್ ೫ ರಂದು ಏಳು ಕಾಂಗ್ರೆಸ್ ಸಂಸದರನ್ನು ಬಜೆಟ್  ಅಧಿವೇಶನದ ಉಳಿದ ಕಲಾಪಗಳಿಂದ ಅಮಾನತ್ತುಗೊಳಿಸಲು ಕೈಗೊಂಡಿದ್ದ ತೀರ್ಮಾನವನ್ನು ಲೋಕಸಭೆ ಬುಧವಾರ  ರದ್ದುಪಡಿಸಿದೆ.

ಕಾಂಗ್ರೆಸ್ ಪಕ್ಷದ ಗುರುಜೀತ್ ಸಿಂಗ್ ಔಜಲಾ, ಬೆಹನಾನ್ ಬೆನ್ನಿ, ಗೌರವ್ ಗೋಗೊಯ್, ಡೀನ್ ಕುರಿಕೋಸ್,  ಟಿ.ಎನ್.  ಪ್ರತಾಪನ್, ಮಾಣಿಕಮ್ ಟ್ಯಾಗೂರ್  ಹಾಗೂ ರಾಜ್ ಮೋಹನ್ ಉನ್ನಿಥಾನ್  ಅವರನ್ನು  ಸಂಸತ್ತಿನ ಬಜೆಟ್ ಅಧಿವೇಶನದ ಉಳಿದ ಅವಧಿಗಾಗಿ ಮಾರ್ಚ್ ೫ ರಂದು ಅಮಾನತ್ತುಗೊಳಿಸಲಾಗಿತ್ತು.

ಇಂದು ಏಳು ಕಾಂಗ್ರೆಸ್ ಸಂಸದರ ಅಮಾನತ್ತು ಕ್ರಮ ರದ್ದುಪಡಿಸುವ ನಿರ್ಣಯವನ್ನು ಲೋಕಸಭೆಯಲ್ಲಿ ಮಂಡಿಸಿದ   ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವ  ಅರ್ಜುನ್ ರಾಮ್ ಮೇಘವಾಲ್ ಅವರು, ಅಮಾನತ್ತುಗೊಳಿಸುವ  ತೀರ್ಮಾನ  ರದ್ದುಪಡಿಸಲು ಸದನ ನಿರ್ಣಯಿಸಿದೆ ಎಂದು ಹೇಳಿದರು.

ನಂತರ ಲೋಕಸಭೆ ನಿರ್ಣಯವನ್ನು ದ್ವನಿಮತದಿಂದ ಅಂಗೀಕರಿಸುವ ಮೂಲಕ ಕಾಂಗ್ರೆಸ್ ಸಂಸದರ ಅಮಾನತ್ತು ರದ್ದುಗೊಳಿಸಲಾಯಿತು.

ಅಮಾನತ್ತು ಹಿಂಪಡೆಯುವುದಕ್ಕೂ ಮುನ್ನ, ಸ್ಪೀಕರ್ ಓಂ ಬಿರ್ಲಾ, ಸದನದಲ್ಲಿ ಅಂದು ನಡೆದ ಬೆಳವಣಿಗೆಗಳು   ವೈಯಕ್ತಿಕವಾಗಿ ತಮಗೆ ತೀವ್ರ ನೋವು ಉಂಟುಮಾಡಿದೆ  ಎಂದು ವಿಷಾದ ವ್ಯಕ್ತಪಡಿಸಿದರು.

ಸದನದ ಘನತೆಯನ್ನು ಪ್ರತಿಯೊಬ್ಬ ಸದಸ್ಯರೂ ಎತ್ತಿ ಹಿಡಿಯಬೇಕು ಎಂದು ಒತ್ತಿ ಹೇಳಿದ ಅವರು, ಪ್ರಜಾಪ್ರಭುತ್ವ ದೇಶದಲ್ಲಿ ಭಿನ್ನಾಭಿಪ್ರಾಯ ಅನಿವಾರ್ಯ, ಆದರೆ ಅದನ್ನು ವ್ಯಕ್ತಪಡಿಸುವಾಗ ಪ್ರತಿಯೊಬ್ಬರೂ ಘನತೆಯಿಂದ ವರ್ತಿಸಬೇಕು ಎಂದರು.

ಇದಕ್ಕೂ ಮುನ್ನ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಏಳು ಕಾಂಗ್ರೆಸ್ ಸಂಸದರ ಅಮಾನತ್ತುಗೊಳಿಸಿರುವ ವಿಷಯ ಸೇರಿದಂತೆ  ಸದನ ಸುಗಮವಾಗಿ ನಡೆಸುವ ಸಂಬಂಧ ಚರ್ಚೆ ನಡೆಯಿತು. 

ಈ ಸದನದ ಮೂಲಕ ಗ್ರಾಮ ಪಂಚಾಯಿತಿಗಳವರೆಗೆ ಸರ್ವರಿಗೂ ಆರೋಗ್ಯಕರ ಸಂದೇಶವನ್ನುರವಾನಿಸಬೇಕಿದೆ ಎಂದು ಸ್ಪೀಕರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com