ರಾಹುಲ್ ಗಾಂಧಿ
ರಾಹುಲ್ ಗಾಂಧಿ

ಪ್ರಾದೇಶಿಕ ಭಾಷೆ ಕುರಿತ ಪ್ರಶ್ನೆಗಳಿಗೆ ಸ್ಪೀಕರ್ ಅವಕಾಶ ನೀಡದಿರುವುದು ತಮಿಳರಿಗೆ ಮಾಡಿದ ಅವಮಾನ: ರಾಹುಲ್

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸಂಸದರು ಪ್ರಾದೇಶಿಕ ಭಾಷೆಗಳ ಕುರಿತು ಪ್ರಶ್ನೆಗಳನ್ನು ಕೇಳುವುದನ್ನು ಅವಕಾಶ ನೀಡುತ್ತಿಲ್ಲ. ಇದು ತಮಿಳುನಾಡು ಜನತೆಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ನಾಯಕ...

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸಂಸದರು ಪ್ರಾದೇಶಿಕ ಭಾಷೆಗಳ ಕುರಿತು ಪ್ರಶ್ನೆಗಳನ್ನು ಕೇಳುವುದನ್ನು ಅವಕಾಶ ನೀಡುತ್ತಿಲ್ಲ. ಇದು ತಮಿಳುನಾಡು ಜನತೆಗೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಹಿಂದಿಯನ್ನು  ದೇಶದ ಅಧಿಕೃತ ಭಾಷೆ ಎಂದು ಪರಿಗಣಿಸುವ ಸಂಬಂಧ ಪೂರಕ ಪ್ರಶ್ನೆ ಕೇಳಲು ಅವಕಾಶ ನಿರಾಕರಿಸಿದ್ದರ ವಿರುದ್ದ ಲೋಕಸಭೆಯಲ್ಲಿ ಪ್ರತಿಪಕ್ಷಗಳು  ಗದ್ದಲ ಹಾಗೂ ಕೋಲಾಹಲ ಉಂಟುಮಾಡಿ ಸಭಾತ್ಯಾಗ ನಡೆಸಿದ ಘಟನೆ ನಡೆಯಿತು. 

ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಲೋಕಸಭೆಯಲ್ಲಿ ಯಾವುದೇ ಚರ್ಚೆಗಳು ನಡೆಯುತ್ತಿಲ್ಲ. ಲೋಕಸಭೆ ಸರ್ಕಾರದ ಲೌಡ್ ಸ್ಪೀಕರ್ ಆಗಿದೆ ಎಂದು ಆರೋಪಿಸಿದರು.

ಪೂರಕೆ ಪ್ರಶ್ನೆ ಕೇಳಲು ಸ್ಪೀಕರ್ ನನಗೂ ಅವಕಾಶ ನೀಡಲಿಲ್ಲ. ಸ್ಪೀಕರ್ ನನಗೆ ಅವಮಾನ ಮಾಡಿದರೆ ಸರಿ. ಆದರೆ ಇಡೀ ತಮಿಳುನಾಡು ಜನತೆ ತಮ್ಮ ಮಾತೃ ಭಾಷೆ ಬಗ್ಗೆ ಕೇಳಲು ಬಯಸಿದ್ದಾರೆ. ಅದಕ್ಕೂ ಅವಕಾಶ ನೀಡದಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಇಂದು ಪ್ರಶ್ನೋತ್ತರ ಅವಧಿಯಲ್ಲಿ ಹಿಂದಿ ಅಧಿಕೃತ ಭಾಷೆಗೆ ಸಂಬಂಧಿಸಿದಂತೆ ಪೂರಕ ಪ್ರಶ್ನೆ ಕೇಳಲು  ದ್ರಾವಿಡ ಮುನ್ನೇತ್ರ ಕಳಗಂ, ಕಾಂಗ್ರೆಸ್ ಹಾಗೂ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳಿಗೆ ಅವಕಾಶ  ನೀಡದಿದ್ದಾಗ   ಸದಸ್ಯರು ತಮ್ಮ ಆಸನಗಳಿಂದ ಎದ್ದುನಿಂತು  ಗದ್ದಲ  ಕೋಲಾಹಲ ಉಂಟುಮಾಡಿ, ನಂತರ ಸಭಾತ್ಯಾಗ ನಡೆಸಿದರು.  

ಗದ್ದಲದ ನಡುವೆಯೇ ಮಾತನಾಡಿದ ಕಾಂಗ್ರೆಸ್ ಸದಸ್ಯ ರಾಹುಲ್ ಗಾಂಧಿ,  ತಮಿಳುನಾಡಿನ ಪ್ರತಿಯೊಬ್ಬ ವ್ಯಕ್ತಿಯ  ಹೃದಯದಲ್ಲಿ ಈ ಪ್ರಶ್ನೆ ಅಡಗಿದ್ದು, ಹಾಗಾಗಿ  ಪೂರಕ ಪ್ರಶ್ನೆಗಳಿಗೆ ಅವಕಾಶ ನೀಡಬೇಕು ಎಂದು  ಆಗ್ರಹಿಸಿದರು.

ಈ ಹಂತದಲ್ಲಿ ಮಧ್ಯಪ್ರವೆಶಿಸಿದ  ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್,  ಹಿಂದಿಯನ್ನು ದೇಶದ ಬಹುತೇಕ ಭಾಗಗಳಲ್ಲಿ ಮಾತನಾಡಲಾಗುತ್ತಿದೆ. ಆದರೆ, ರಾಜ್ಯಗಳ ಮಾತೃ ಭಾಷೆಗಳಲ್ಲಿ ಯಾವುದೇ  ಬದಲಾವಣೆ ಪ್ರಶ್ನೇಯೇ ಇಲ್ಲ ಎಂದರು.

ಯಾವುದೇ ರಾಜ್ಯದ ಮೇಲೆ ಹಿಂದಿ ಭಾಷೆಯನ್ನು ಹೇರುವುದಿಲ್ಲ. ಹಿಂದಿ ಮಾತನಾಡದ ರಾಜ್ಯಗಳಲ್ಲೂ  ಹಿಂದಿ  ಬಳಸುತ್ತಿರುವುದು ನೋಡಲು ಸಂತೋಷವಾಗುತ್ತಿದೆ ಎಂದು ಹೇಳಿದ ಸಚಿವರು, ಹಿಂದಿಯನ್ನು ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಭಾಗಶಃ ಬಳಸಲಾಗುತ್ತಿದೆ ಎಂದು ಹೇಳುತ್ತಿದ್ದಂತೆಯೇ ಡಿಎಂಕೆ ಹಾಗೂ ಕೆಲ ಕಾಂಗ್ರೆಸ್  ಸದಸ್ಯರು  ಗದ್ದಲ ಹಾಗೂ ಕೋಲಾಹಲ ಸೃಷ್ಟಿಸಿದರು. ಈ ವಿಚಾರವಾಗಿ   ಪೂರಕ ಪ್ರಶ್ನೆಗಳಿಗೆ ಅವಕಾಶ ನೀಡಬೇಕೆಂದು  ಸದಸ್ಯರು  ಒತ್ತಾಯಿಸಿದರು. ಇದಕ್ಕೆ ನಿರಾಕರಿಸಿದಾಗ ಸದಸ್ಯರು ಸಭಾತ್ಯಾಗ ನಡೆಸಿದರು.

Related Stories

No stories found.

Advertisement

X
Kannada Prabha
www.kannadaprabha.com