ನಿರ್ಭಯಾ ಹಂತಕರಿಗೆ ಗಲ್ಲು: ಭಾರತದ ಮಾನವ ಹಕ್ಕು ಹೋರಾಟ ಚರಿತ್ರೆ ಮೇಲೆ ಅಳಿಸಲಾಗದ ಕಲೆ ಎಂದ ಅಮ್ನೆಸ್ಟಿ ಇಂಡಿಯಾ

ನಿರ್ಭಯಾ ಹಂತಕರನ್ನು ಗಲ್ಲಿಗೇರಿಸಿದ ಕ್ರಮ ಭಾರತದ ಮಾನವ ಹಕ್ಕು ಹೋರಾಟದ ಮೇಲೆ ಅಳಿಸಲಾಗದ ಕಲೆಯನ್ನುಂಟು ಮಾಡಿದೆ ಎಂದು ಅಮ್ನೆಸ್ಟಿ ಇಂಡಿಯಾ ಸಂಸ್ಥೆ ಅಭಿಪ್ರಾಯಪಟ್ಟಿದೆ.
ನಿರ್ಭಯಾ ಹಂತಕರಿಗೆ ಗಲ್ಲು
ನಿರ್ಭಯಾ ಹಂತಕರಿಗೆ ಗಲ್ಲು

ನವದೆಹಲಿ: ನಿರ್ಭಯಾ ಹಂತಕರನ್ನು ಗಲ್ಲಿಗೇರಿಸಿದ ಕ್ರಮ ಭಾರತದ ಮಾನವ ಹಕ್ಕು ಹೋರಾಟದ ಮೇಲೆ ಅಳಿಸಲಾಗದ ಕಲೆಯನ್ನುಂಟು ಮಾಡಿದೆ ಎಂದು ಅಮ್ನೆಸ್ಟಿ ಇಂಡಿಯಾ ಸಂಸ್ಥೆ ಅಭಿಪ್ರಾಯಪಟ್ಟಿದೆ.

ನಿರ್ಭಯಾ ಹತ್ಯಾಚಾರಿಗಳನ್ನು ಗಲ್ಲಿಗೇರಿಸಿದ್ದನ್ನು ವಿರೋಧಿಸಿರುವ ಅಮ್ನೆಸ್ಟಿ ಇಂಡಿಯಾ ಸಂಸ್ಥೆ, ಮರಣ ದಂಡನೆ ಎಂದೂ ಮಹಿಳೆಯರ ವಿರುದ್ಧದ ದೌರ್ಜನ್ಯಕ್ಕೆ ಪರಿಹಾರವಲ್ಲ ಎಂದು ಹೇಳಿದೆ. ಅಲ್ಲದೆ ನಿರ್ಭಯಾ ಹಂತಕರ ಗಲ್ಲು ಭಾರತದ ಮಾನವ ಹಕ್ಕು ಹೋರಾಟದ ಮೇಲಾದ ಅಳಿಸಲಾಗದ ಕಲೆ ಎಂದು ವಿಷಾಧ ವ್ಯಕ್ತಪಡಿಸಿದೆ.

'2015 ಆಗಸ್ಟ್ ತಿಂಗಳಿನಿಂದ ಇಲ್ಲಿಯವರೆಗೂ ಭಾರತದಲ್ಲಿ ಗಲ್ಲು ಶಿಕ್ಷೆಯಾಗಿರಲಿಲ್ಲ. ಆದರೆ ಇಂದು ಏಕಕಾಲದಲ್ಲೇ ನಾಲ್ಕು ಮಂದಿಯನ್ನು ಗಲ್ಲಿಗೇರಿಸಲಾಗಿದೆ. ಭಾರತದಲ್ಲಿನ ಜನಪ್ರತಿನಿಧಿಗಳು ಅಪರಾಧವನ್ನು ನಿಭಾಯಿಸುವ ಅಥವಾ ನಿಯಂತ್ರಿಸುವುದಕ್ಕಾಗಿ ಮರಣ ದಂಡನೆ ಅಥವಾ ಗಲ್ಲು ಶಿಕ್ಷೆಯನ್ನು ವೈಭವೀಕರಿಸಿದ್ದಾರೆ. ಆದರೆ ಮಹಿಳೆಯ ವಿರುದ್ಧದ ದೌರ್ಜನ್ಯ ತಡೆಗೆ ಮರಣದಂಡನೆ ಎಂದಿಗೂ ಪರಿಹಾರವಲ್ಲ ಎಂದು ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಅವಿನಾಶ್ ಕುಮಾರ್ ಹೇಳಿದ್ದಾರೆ.

ಇದೇ ವೇಳೆ ಲಿಂಗ ಆಧಾರಿತ ಹಿಂಸಾಚಾರವನ್ನು ತಡೆಯಲು ಸಂರಕ್ಷಣಾ ಕಾರ್ಯ ವಿಧಾನಗಳಂತಹ ಪರಿಣಾಮಕಾರಿ, ದೀರ್ಘಕಾಲೀನ ಪರಿಹಾರಗಳನ್ನು ಜಾರಿಗೊಳಿಸಬೇಕಿದೆ. ತನಿಖಾ ವ್ಯವಸ್ಥೆಯನ್ನು ಸುಧಾರಿಸುವುದು, ಕಾನೂನು ಕ್ರಮಗಳನ್ನು ಬಲಪಡಿಸುವುದು ಮತ್ತು ಸಂತ್ರಸ್ಥ ಕುಟುಂಬಗಳಿಗೆ ಬೆಂಬಲ ನೀಡುವುದು ನಿಜಕ್ಕೂ ಅತ್ಯಗತ್ಯವಾಗಿದೆ. ದೂರಗಾಮಿ ಕಾರ್ಯವಿಧಾನ ಮತ್ತು ಸಾಂಸ್ಥಿಕ ಸುಧಾರಣೆ ಅತ್ಯಗತ್ಯ ಎಂದು ಅವರು ಹೇಳಿದ್ದಾರೆ.

ಇಂದು ಬೆಳಗ್ಗೆ ದೆಹಲಿಯ ತಿಹಾರ್ ಜೈಲಿನಲ್ಲಿ ನಿರ್ಭಯಾ ಹತ್ಯಾಚಾರಿಗಳಾದ ಮುಖೇಶ್ ಸಿಂಗ್ (32 ವರ್ಷ), ಪವನ್ ಗುಪ್ತಾ (25 ವರ್ಷ), ವಿನಯ್ ಶರ್ಮಾ (26 ವರ್ಷ) ಮತ್ತು ಅಕ್ಷಯ್ ಕುಮಾರ್ ಸಿಂಗ್ (31 ವರ್ಷ) ರನ್ನು ಇಂದು ಮುಂಜಾನೆ ಗಲ್ಲಿಗೇರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com