ಡೆಹ್ರಾಡೂನ್:ಅದು 2012ರ ಡಿಸೆಂಬರ್ 16-17ರ ಮಧ್ಯರಾತ್ರಿಗೆ ವೈದ್ಯ ಡಾ ವಿಪುಲ್ ಖಂಡವಾಲ್ ಅವರ ನೆನಪು ಜಾರಿಹೋಯಿತು. ಅತ್ಯಾಚಾರಗೊಂಡು ತೀವ್ರ ಜರ್ಝರಿತರಾಗಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ನಿರ್ಭಯಾಗೆ ಚಿಕಿತ್ಸೆ ನೀಡಿದ ವೈದ್ಯರ ಜೀವನವೇ ಈ ಘಟನೆ ನಂತರ ಬದಲಾಯಿತು.
ಡಾ ಖಂಡವಾಲ ಕರುಳುಬೇನೆ ತಜ್ಞರು. ದೆಹಲಿಯ ಸಪ್ಧರ್ಜಂಗ್ ಆಸ್ಪತ್ರೆಯಲ್ಲಿ ಅಂದು ನಿರ್ಭಯಾಳನ್ನು ಉಳಿಸಲು ಕೊನೆಯ ಕ್ಷಣದವರೆಗೂ ಹೋರಾಟ ನಡೆಸಿದ್ದ ವೈದ್ಯರ ತಂಡದಲ್ಲಿ ಇದ್ದರು. ಅಂದು ಚಿಕಿತ್ಸೆ ನೀಡಿದ ನಂತರ ಕೆಲ ದಿನಗಳವರೆಗೆ ಡಾ ಖಂಡವಾಲ್ ಅವರಿಗೆ ಸರಿಯಾಗಿ ರಾತ್ರಿ ನಿದ್ದೆ ಬರುತ್ತಿರಲಿಲ್ಲವಂತೆ, ಊಟ-ತಿಂಡಿ ರುಚಿಸುತ್ತಿರಲಿಲ್ಲ.ತಮ್ಮ ದಿನಚರಿಯನ್ನು ಸರಿಯಾಗಿ ಮಾಡಲು ಸಾಧ್ಯವಾಗುತ್ತಿರಲಿಲ್ಲ.
ಸಾಮಾನ್ಯವಾಗಿ ಡಾ ಖಂಡವಾಲ್ ತುಂಬ ತಮಾಷೆಯ, ಸೀದಾ, ಸೌಮ್ಯ ಸ್ವಭಾವದ ವ್ಯಕ್ತಿ, ಕಠಿಣ ಪರಿಶ್ರಮಿ ಕೂಡ. ಆದರೆ ನಿರ್ಭಯಾ ಘಟನೆ ಅವರ ಸ್ವಭಾವ ಮತ್ತು ಬದುಕನ್ನೇ ಬದಲಿಸಿತು. ನಂತರ ಅವರು ದೆಹಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡರು. ಅಲ್ಲಿಂದ ಡೆಹ್ರಾಡೂನ್ ಗೆ ಹೋಗಿ ಸರ್ಕಾರಿ ವೈದ್ಯಕೀಯ ಆಸ್ಪತ್ರೆಯಲ್ಲಿ ಸೇವೆ ಮಾಡಿದ ನಂತರ ತಮ್ಮದೇ ಆಸ್ಪತ್ರೆ ತೆರೆದರು.
ಈ ಮಹಿಳೆಯನ್ನು ಬದುಕಿಸಲು ಸಾಧ್ಯವಾಗಲಿಲ್ಲವಲ್ಲಾ ಎಂದು ಅವರಿಗೆ ಬೇಸರವಾಗಿರಬೇಕು. ಅದು ಅವರ ಜೀವನದಲ್ಲಿ ತುಂಬಾ ನೋವು ನೀಡಿರಬೇಕು. ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ವಿಧಿಸಿದ್ದು ಅವರಿಗೆ ಸ್ವಲ್ಪ ನಿರಾಳವಾಗಿರಬಹುದು ಎನ್ನುತ್ತಾರೆ ಆಸ್ಪತ್ರೆಯ ಉದ್ಯೋಗಿಯೊಬ್ಬರು.
ಅತ್ಯಾಚಾರಕ್ಕೊಳಗಾಗಿ ನರಳುತ್ತಿದ್ದ ನಿರ್ಭಯಾಳನ್ನು ದೆಹಲಿ ಆಸ್ಪತ್ರೆಗೆ ಕರೆತಂದಾಗ ಅವಳ ಚಿಕಿತ್ಸೆಗೆ ನಿಂತವರಲ್ಲಿ ಮೊದಲ ವೈದ್ಯರೇ ಡಾ ಖಂಡವಾಲ. ಅಲ್ಲಿ ಚಿಕಿತ್ಸೆ ಸಾಧ್ಯವಾಗುವುದಿಲ್ಲ ಎಂದು ಖಾತ್ರಿಯಾದ ನಂತರ ಸಿಂಗಾಪುರಕ್ಕೆ ಕರೆದುಕೊಂಡು ಹೋಗಲಾಯಿತು.
ನಿರ್ಭಯಾಳಲ್ಲಿ ಹೋರಾಟದ ಛಲ, ಮನೋಭಾವ ಕೊನೆಯ ಕ್ಷಣದವರೆಗೂ ಇತ್ತು, ಅವಳ ಆತ್ಮಕ್ಕೆ ಇಂದು ಶಾಂತಿ ಸಿಕ್ಕಿರಬಹುದು ಎನ್ನುತ್ತಾರೆ ಡಾ ಖಂಡವಾಲ್.
Advertisement