'ನಿರ್ಭಯ ಪ್ರಕರಣ: ನನ್ನ ಗೌರವವನ್ನು ಪಣಕ್ಕಿಟ್ಟಿದ್ದ 37 ವರ್ಷದ ವೃತ್ತಿ ಜೀವನದ ಅತ್ಯಂತ ಸವಾಲಿನ ಕೇಸ್!'
ನವದೆಹಲಿ: ನಿರ್ಭಯ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಲಾಗಿದ್ದು, ಈ ಬಗ್ಗೆ ಅತ್ಯಾಚಾರ ಘಟನೆ ನಡೆದಾಗ ದೆಹಲಿ ಪೊಲೀಸ್ ಮುಖ್ಯಸ್ಥರಾಗಿದ್ದ ನೀರಜ್ ಕುಮಾರ್ ಮಾತನಾಡಿದ್ದಾರೆ.
ಅಪರಾಧಿಗಳನ್ನು ಗಲ್ಲಿಗೇರಿಸಿರುವ ಬಗ್ಗೆ ಸಮಾಧಾನ ವ್ಯಕ್ತಪಡಿಸಿರುವ 1976ರ ಬ್ಯಾಚ್ ನ ಐಪಿಎಸ್ ಅಧಿಕಾರಿ ನೀರಜ್ ಕುಮಾರ್, ದೇಶಾದ್ಯಂತ ಸುದ್ದಿ ಮಾಡಿದ್ದ ಈ ಪ್ರಕರಣದಿಂದ ನನ್ನ ವೃತ್ತಿ ಜೀವನದ ಗೌರವದ ಪ್ರಶ್ನೆಯಾಗಿತ್ತು. ನನ್ನ 37 ವರ್ಷಗಳ ವೃತ್ತಿ ಜೀವನದಲ್ಲೇ ಅತ್ಯಂತ ಸವಾಲಿನ ಪ್ರಕರಣ ಇದಾಗಿತ್ತು ಎಂದು ನೀರಜ್ ಕುಮಾರ್ ಹೇಳಿದ್ದಾರೆ.
ಒಂದು ವೇಳೆ ಈ ಪ್ರಕರಣ ತಾರ್ಕಿಕ ಅಂತ್ಯ ಕಾಣದೇ ಇದ್ದಿದ್ದರೆ ನಾನು ವೃತ್ತಿ ಜೀವನದಲ್ಲಿ ಮಾಡಿದ್ದೆಲ್ಲವೂ ನಿರರ್ಥಕವಾಗಿಬಿಡುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಅತ್ಯಂತ ಮಹತ್ವದ ಪ್ರಕರಣಗಳಲ್ಲಿ ಯಶಸ್ಸು ಕಂಡಿದ್ದ ಅಧಿಕಾರಿಯಾಗಿದ್ದ ನೀರಜ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸುವಂತೆ ಮಾಡಿತ್ತು ನಿರ್ಭಯ ಅತ್ಯಾಚಾರ ಪ್ರಕರಣ. ನಿರ್ಭಯ ಅತ್ಯಾಚಾರ ಪ್ರಕರಣದಲ್ಲಿ ಅತ್ಯಂತ ಕೆಟ್ಟ ವಿವರಗಳು ಲಭ್ಯವಾಗುತ್ತಿದ್ದಂತೆಯೇ ಪೊಲೀಸ್ ತನಿಖಾ ತಂಡದಲ್ಲಿದ್ದವರ ಹೃದಯವೂ ಮರುಗಿತ್ತು ಎಂದು ನೀರಜ್ ಕುಮಾರ್ ಹೇಳಿದ್ದಾರೆ.