ಕೊರೋನಾಗೆ ಮತ್ತೊಬ್ಬ ಬಲಿ: ಗುಜರಾತ್ ನಲ್ಲಿ ಮತ್ತೆ 11 ಪ್ರಕರಣ ಪತ್ತೆ, ದೇಶಾದ್ಯಂತ ಸೋಂಕಿತರ ಸಂಖ್ಯೆ 422ಕ್ಕೆ ಏರಿಕೆ
ನವದೆಹಲಿ: ಜನತಾ ಕರ್ಫ್ಯೂ ಹಾಗೂ ಲಾಕ್ ಡೌನ್ ಗೂ ಜಗ್ಗದ ಮಹಾಮಾರಿ ಕೋರಾನ ವೈರಸ್ ದೇಶಾದ್ಯಂತ ತೀವ್ರವಾಗಿ ಹರಡುತ್ತಿದ್ದು, ಗುಜರಾತ್ ನಲ್ಲಿ ಮತ್ತೆ ಹೊಸದಾಗಿ 11 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ ಗುಜರಾತ್ ನಲ್ಲಿ 29ಕ್ಕೆ ಹಾಗೂ ದೇಶಾದ್ಯಂತ 422ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಮುಂಬೈನಲ್ಲಿ ಮತ್ತೊಬ್ಬ ವ್ಯಕ್ತಿಯೊಬ್ಬರು ವೈರಸ್'ಗೆ ಬಲಿಯಾಗಿದ್ದಾರೆ. ಈ ಮೂಲಕ ಭಾರತದಲ್ಲಿ ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದ್ದು, ಸೋಂಕು ಪೀಡಿತರ ಸಂಖ್ಯೆ 400ಕ್ಕೆ ಏರಿಕೆಯಾಗಿದೆ.
ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫಿಲಿಪ್ಪೀನ್ಸ್ ಪ್ರಜೆಯೊಬ್ಬರು ಮೃತಪಟ್ಟಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.
ಭಾನುವಾರದ ಜನತಾ ಕರ್ಫ್ಯೂ ನಂತರ ಈಗ ದೇಶಾದ್ಯಂತ ಸೋಂಕಿತ ಜಿಲ್ಲೆಗಳಲ್ಲಿ ಲಾಕ್ ಡೌನ್ ಮಾಡಲಾಗಿದೆ. ಆದರೆ ಲಾಕ್ ಡೌನ್ ಅನ್ನು ಜನ ಗಂಭೀರವಾಗಿ ಪರಿಗಣಿಸುತ್ತಿಲ್ಲ.
ಕೊರೋನಾವೈರಸ್ ನಿಂದಾಗಿ ದೇಶಾದ್ಯಂತ 75 ಜಿಲ್ಲೆಗಳನ್ನು ಲಾಕ್ ಡೌನ್ ಮಾಡಲಾಗಿದೆ. ಕರ್ನಾಟಕ, ದೆಹಲಿ, ಪಂಜಾಬ್, ರಾಜಸ್ಥಾನ, ಮತ್ತು ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಾರ್ವಜನಿಕ ಸಾರಿಗೆ, ಮಾಲ್ ಗಳು, ಶಾಪ್ ಗಳನ್ನು ಈ ಮಾಸಾಂತ್ಯದವರೆಗೂ ಸ್ಥಗಿತಗೊಳಿಸಲಾಗಿದ್ದು, ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ.
ಕೇರಳ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ದೇಶಾದ್ಯಂತ 390 ಕೊರೋನಾವೈರಸ್ ಪ್ರಕರಣಗಳು ವರದಿಯಾಗಿವೆ.