ಶ್ರೀನಗರ: ದೇಶದಾದ್ಯಂತ ಮಹಾಮಾರಿ ಕೊರೋನಾ ವೈರಸ್ ಭೀತಿ ದಿನದಿಂದ ಹೆಚ್ಚಾಗುತ್ತಲೇ ಇದ್ದು, ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ವ್ಯಕ್ತಿಯೊಬ್ಬರು ವೈರಸ್'ಗೆ ಬಲಿಯಾಗಿದ್ದಾರೆ. ಇದರಂತೆ ದೇಶದಲ್ಲಿ ಈ ವರೆಗೂ ಕೊರೋನಾಗೆ 16 ಮಂದಿ ಸಾವನ್ನಪ್ಪಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.
ಮೃತ ವ್ಯಕ್ತಿ ಶ್ರೀನಗರದ ಹೈದೆರಾಪೋರಾದ ನಿವಾಸಿಯಾಗಿದ್ದು, ವೈರಸ್ ಪರಿಣಾಮ ಹಲವು ದಿನಗಳಿಂದ ಆಸ್ಪತ್ರೆಯೊಂದರಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.
ಈ ಕುರಿತು ಜಮ್ಮು ಮತ್ತು ಕಾಶ್ಮೀರದ ಯೋಜನಾ ಆಯೋಗದ ಅಧಿಕಾರಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.
65 ವರ್ಷದ ವ್ಯಕ್ತಿ ವೈರಸ್'ಗೆ ಬಲಿಯಾಗಿದ್ದು, ಅವರೊಂದಿಗೆ ನಾಲ್ವರು ವ್ಯಕ್ತಿಗಳು ಸಂಪರ್ಕದಲ್ಲಿದ್ದ ಹಿನ್ನೆಲೆಯಲ್ಲಿ ಅವರಲ್ಲಿಯೂ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.
ಸೋಂಕಿತರ ಪತ್ತೆ ಹಚ್ಚಲು ತಡವಾಗಿಲ್ಲ. ಈಗಾಗಲೇ ಅವರೊಂದಿಗೆ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನೂ ಹುಡುಕಲಾಗಿದ್ದು, ಅವರನ್ನೂ ಪ್ರತ್ಯೇಕವಾಗಿರುವಂತೆ ಸೂಚಿಸಲಾಗಿದೆ ಎಂದಿದ್ದಾರೆ.
Advertisement