ಕೊಟ್ಟಾಯಂ: ನಾಲ್ಕು ಗೋಡೆಗಳ ಮಧ್ಯೆ ಕಾಲ ಕಳೆಯುವುದು ಅತ್ಯಂತ ಕಠಿಣವಾಗಿರುತ್ತದೆ. ಆದರೀಗ ನಾನು ಮತ್ತು ನನ್ನ ಪತ್ನಿ ವೈರಸ್ ನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದೇವೆಂಬ ವಿಚಾರ ಸಾಕಷ್ಟು ಸಂತೋಷವನ್ನ ತಂದಿದೆ. ವೈರಸ್ ನಿಂದ ಆತಂಕ ಪಡುವುದು ಏನೂ ಇಲ್ಲ. ವಿಶ್ರಾಂತಿ ಪಡೆದು, ವೈದ್ಯರ ಸಲಹೆಗಳನ್ನು ಅನುಸರಿಸಿದರಷ್ಟೇ ಸಾಕು ಎಂದು ಮಹಾಮಾರಿ ಕೊರೋನಾ ವೈರಸ್ ನಿಂದ ಪ್ರಾಣಾಪಾಯದಿಂದ ಪಾರಾದ ಕೇರಳ ವ್ಯಕ್ತಿಗಳು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಕೊರೋನಾ ವೈರಸ್ ಗೆ ಒಳಗಾಗಿದ್ದ ಕೊಟ್ಟಾಯಂ ಬಳಿಯಿರುವ ಚೆಂಗಲಮ್ ಮೂಲದ 34 ವರ್ಷದ ವ್ಯಕ್ತಿ ಹಾಗೂ ಅವರ ಪತ್ನಿ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹಲವು ದಿನಗಳಿಂದ ಸುದೀರ್ಘ ಚಿಕಿತ್ಸೆ ಪಡೆದ ಬಳಿಕ ಇದೀಗ ಇಬ್ಬರನ್ನೂ ಪರೀಕ್ಷೆಗೊಳಪಡಿಸಲಾಗಿದ್ದು, ಎರಡು ಬಾರಿ ಪರೀಕ್ಷೆಯಲ್ಲೂ ವೈರಸ್ ಇಲ್ಲದಿರುವುದು ಕಂಡು ಬಂದಿದೆ. ಇದೀಗ ದಂಪತಿಗಳು ಗುಣಮುಖರಾಗಿದ್ದೂ, ವೈದ್ಯಕೀಯ ಮಂಡಳಿ ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಕುರಿತು ನಿರ್ಧಾರ ಕೈಗೊಳ್ಳಲಲಿದೆ
ವೈರಸ್ ನಿಂದ ಬಳಲುತ್ತಿರುವ ಜನರು ಭೀತಿಗೊಳಗಾಗಬೇಕಿಲ್ಲ. ಈ ಹಿಂದೆಂದೂ ನನಗೆ ಆರೋಗ್ಯ ಸಮಸ್ಯೆಗಳೇ ಇರಲಿಲ್ಲ. ಸಣ್ಣಪುಟ್ಟ ಕೆಮ್ಮು ಬರುತ್ತಿತ್ತು. ಆಗ ಮಾತ್ರೆ ತಗೆದುಕೊಳ್ಳುತ್ತಿದ್ದೆ. ನನ್ನ ಪತ್ನಿಗೆ ಕೆಮ್ಮು ಕೂಡ ಇರಲಿಲ್ಲ. ವೈರಸ್ ದೃಢಪಟ್ಟ ಬಳಿಕ ವೈದ್ಯರ ಸಲಹೆಗಳನ್ನು ಚಾಚು ತಪ್ಪದೇ ಪಾಲನೆ ಮಾಡುತ್ತಿದ್ದೆವು. ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯುತ್ತಿದ್ದೆವು. ಆರೋಗ್ಯಕರ ಆಹಾರ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತಿತ್ತು. ಕೇವಲ ಪ್ರತ್ಯೇಕವಾಗಿರುವ ಕೆಲಸವನ್ನಷ್ಟೇ ನಾವು ಮಾಡಬೇಕು. ಇತರರಿಗೆ ವೈರಸ್ ಹರಡದಂತೆ ನೋಡಿಕೊಳ್ಳಬೇಕೆಂದು ಹೇಳಿದ್ದಾರೆ.
ಆಸ್ಪತ್ರೆ ಕೇವಲ ತಾತ್ಕಾಲಿಕ ಮನೆಯಾಗಿರುತ್ತದೆಯಷ್ಟೇ. ಮಾರ್ಚ್ 8ರಿಂದ ನಾವು ಪ್ರತ್ಯೇಕ ಕೊಠಡಿಯಲ್ಲಿದ್ದೆವು. ನಮಗೆ ನಾಲ್ಕೂವರೆ ವರ್ಷದ ಮಗುವಿದೆ. ಆದರೆ, ಮಕ್ಕಳಿಗೆ ಸೋಂಕು ತಗುಲಿಲ್ಲ ಎಂದು ಹೇಳಲಾಗುತ್ತಿದೆ.
ಮಗಳನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಮಗು ಕೂಡ ನಮ್ಮೊಂದಿಗೆ ಪ್ರತ್ಯೇಕ ಕೊಠಡಿಯಲ್ಲಿಯೇ ಇದೆ. ಅಗತ್ಯ ಕ್ರಮಗಳನ್ನು ಕೈಗೊಂಡರೆ, ವೈರಸ್ ಹರಡುವುದಿಲ್ಲ. ನಮ್ಮಿಂದ ಸಾಧ್ಯವಾದಷ್ಟು ರಕ್ಷಣೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ನಾವು ತೆಗೆದುಕೊಂಡಿದ್ದೇವೆ. ಮಗುವಿಗೆ ವೈರಸ್ ಹರಡುವುದನ್ನು ತಪ್ಪಿಸಿದ್ದೇವೆ. ಮಗು ಒಮ್ಮೆ ನನ್ನೊಂದಿಗಿದ್ದರೆ, ಮತ್ತೊಮ್ಮೆ ತಾಯಿಯೊಂದಿಗಿರುತ್ತಿದ್ದಳು. ಕೊಠಡಿಗೆ ಸ್ಯಾನಿಟೈಸರ್ ಸಿಂಪಡಿಸಿದ ಬಳಿಕ ಮಗಳು ನಮ್ಮೊಂದಿಗೆ ಇರುತ್ತಿದ್ದಳು. ಸದಾಕಾಲ ಮಾಸ್ಕ್ ಗಳನ್ನು ಧರಿಸುತ್ತಿದ್ದೆವು. ನಮಗೆ ಚಿಕಿತ್ಸೆ ನೀಡಿದ, ಸಹಾಯ ಮಾಡಿದ ವೈದ್ಯರು, ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಅಧಿಕಾರಿಗಳಿಗೆ ಈ ಮೂಲಕ ಧನ್ಯವಾದಗಳನ್ನು ಹೇಳಲು ಬಯಸುತ್ತೇವೆಂದು ತಿಳಿಸಿದ್ದಾರೆ.
Advertisement