ನವದೆಹಲಿ: ಆರ್ಥಿಕತೆಯ ಮೇಲೆ ಕೊರೊನಾವೈರಸ್ನಿಂದಾಗಿರುವ ನಕಾರಾತ್ಮಕ ಪರಿಣಾಮ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಕೈಗೊಂಡಿರುವ ನಿರ್ಧಾರ ಸೂಕ್ತವಾಗಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಅತ್ತ ಆರ್ ಬಿಐ ಅಧ್ಯಕ್ಷ ಶಕ್ತಿಕಾಂತ್ ದಾಸ್ ಅವರ ಸುದ್ದಿಗೋಷ್ಠಿ ಮುಕ್ತಾಯದ ಬೆನ್ನಲ್ಲೇ ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಕರೋನಾವೈರಸ್ ಪ್ರಭಾವದಿಂದಾಗಿ ನಮ್ಮ ಆರ್ಥಿಕತೆಯನ್ನು ಕಾಪಾಡಲು ಆರ್ಬಿಐ ದೊಡ್ಡ ಹಾಗೂ ದಿಟ್ಟ ಕ್ರಮಗಳನ್ನು ತೆಗೆದುಕೊಂಡಿದೆ. ಇದು ಹಣದ ಹರಿವನ್ನು ಸುಧಾರಿಸುತ್ತದೆ, ಸಾಲದ ಹೊರೆ ಕಡಿತಗೊಳಿಸುತ್ತೆ, ಮಧ್ಯಮ ವರ್ಗ ಮತ್ತು ವ್ಯವಹಾರಗಳಿಗೆ ಸಹಾಯ ಮಾಡುತ್ತದೆ. ರೆಪೊ ದರವನ್ನು ಕಡಿತಗೊಳಿಸಿರುವುದು (ಆರ್ಬಿಐ ಬ್ಯಾಂಕ್ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ) 'ಮಧ್ಯಮ ವರ್ಗ ಮತ್ತು ವ್ಯವಹಾರಗಳಿಗೆ' ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಇನ್ನು ಇಂದು ಭಾರತೀಯ ರಿಸರ್ವ್ ಬ್ಯಾಂಕ್ನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಸಭೆ ನಡೆಸಿದ್ದ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು, ರಿವರ್ಸ್ ರೆಪೊ ದರ 90 ಅಂಶ ಕಡಿತಗೊಳಿಸಿದ್ದು, ಶೇ 4ರಷ್ಟು ನಿಗದಿ ಪಡಿಸಿರುವುದಾಗಿ ಹೇಳಿದರು. ಅಂತೆಯೇ ತನ್ನ ಹಣಕಾಸು ನೀತಿ ಸಮಿತಿ ಸಭೆಯ ನಂತರ ರೆಪೊ ದರದಲ್ಲಿ 75 ಮೂಲ ಅಂಶಗಳನ್ನು ಕಡಿತಗೊಳಿಸುವ ಮೂಲಕ ಶೇ 4.4 ಕ್ಕೆ ನಿಗಧಿಪಡಿಸಿದೆ. ಇದು ವಾಣಿಜ್ಯ ಬ್ಯಾಂಕುಗಳಿಗೆ ಆರ್ಬಿಐ ಅಲ್ವಾವಧಿಗೆ ನೀಡುವ ಸಾಲದ ಮೇಲಿನ ಬಡ್ಡಿದರವಾಗಿದೆ ಎಂದು ಹೇಳಿದರು. ಈ ನಿರ್ಧಾರಕ್ಕೆ ಹಣಕಾಸು ನೀತಿ ಸಮಿತಿಯ ಆರು ಸದಸ್ಯರಲ್ಲಿ ನಾಲ್ವರು ಬೆಂಬಲಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.
Advertisement