ನವದೆಹಲಿ: ಕೊರೋನಾ ವೈರಸ್ ನಗರ ಪ್ರದೇಶಗಳ ಜನರಲ್ಲಿ ಹೆಚ್ಚು ಆತಂಕ ತಂದೊಡ್ಡಿದೆ. ನಿರುದ್ಯೋಗ, ಬಡತನ, ಅಸಮಾನತೆ ಗಳು ಹೆಚ್ಚಾಗಲಿವೆ ಎಂದು ಜಾಗತಿಕ ಮಟ್ಟದ ಸಮೀಕ್ಷೆಯೊಂದು ಹೇಳಿದೆ.
ಆದರೆ ಭಾರತ ದೇಶ ಸರಿಯಾದ ದಿಕ್ಕಿನತ್ತ ಸಾಗುತ್ತಿದೆ ಎಂದು ಸಮೀಕ್ಷೆ ಹೇಳಿದೆ. ಇಪ್ಸೊಸ್ ನಡೆಸಿದ ವಾಟ್ ವರೀಸ್ ದ ವರ್ಲ್ಡ್ ಎಂಬ ಸಮೀಕ್ಷೆಯಲ್ಲಿ ಜಾಗತಿಕ ಮಟ್ಟದಲ್ಲಿ ಜನರಿಗೆ ಕೋವಿಡ್-19 ಆತಂಕ ತಂದೊಡ್ಡಿದ್ದು ಶೇಕಡಾ 61ರಷ್ಟು ಮಂದಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಹೇಳಿದೆ.
ತಮ್ಮ ಜೀವನದಲ್ಲಿ ಆತಂಕಕ್ಕೆ ಏನು ಕಾರಣಗಳು ಎಂದು ಕೇಳಿದಾಗ ಶೇಕಡಾ 62ರಷ್ಟು ಮಂದಿ ಕೋವಿಡ್-19 ಎಂದರೆ, ಶೇಕಡಾ 38ರಷ್ಟು ಮಂದಿ ನಿರುದ್ಯೋಗ ಸಮಸ್ಯೆ, ಶೇಕಡಾ 24ರಷ್ಟು ಮಂದಿ ಅಪರಾಧ ಮತ್ತು ಹಿಂಸಾಚಾರ ಮತ್ತು ಶೇಕಡಾ 21ರಷ್ಟು ಮಂದಿ ಬಡತನ ಮತ್ತು ಸಾಮಾಜಿಕ ಅಸಮಾನತೆ ಎಂದಿದ್ದಾರೆ.
ಭಾರತದಲ್ಲಿ ಮಾತ್ರ ಶೇಕಡಾ 65ರಷ್ಟು ಮಂದಿ ದೇಶ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದಿದ್ದಾರೆ. 28 ದೇಶಗಳಲ್ಲಿ ಇಪ್ಸೋಸಿಸ್ ಆನ್ ಲೈನ್ ತಂಡ ವ್ಯವಸ್ಥೆ ಮೂಲಕ ಸಮೀಕ್ಷೆ ನಡೆಸಲಾಗಿದೆ.
ಅರ್ಜೆಂಟೈನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಗ್ರೇಟ್ ಬ್ರಿಟನ್, ಜರ್ಮನಿ, ಭಾರತ, ಇಸ್ರೇಲ್, ಇಟಲಿ, ಜಪಾನ್, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಕೊರಿಯಾ, ಸ್ಪೈನ್, ಸ್ವೀಡನ್, ಟರ್ಕಿ ಮತ್ತು ಅಮೆರಿಕ ದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿದೆ.
ಒಟ್ಟು 19 ಸಾವಿರದ 505 ಸಂದರ್ಶನಗಳನ್ನು ಮಾರ್ಚ್ 20ರಿಂದ ಏಪ್ರಿಲ್ 3ರ ನಡುವೆ ನಡೆಸಲಾಗಿದ್ದು 18ರಿಂದ 74 ವರ್ಷದೊಳಗಿನವರು ಅಮೆರಿಕ, ದಕ್ಷಿಣ ಆಫ್ರಿಕಾ, ಟರ್ಕಿ, ಇಸ್ರೇಲ್ ಮತ್ತು ಕೆನಡ ಮತ್ತು ಇತರ ದೇಶಗಳಲ್ಲಿ 16ರಿಂದ 74 ವರ್ಷದೊಳಗಿನವರು ಭಾಗವಹಿಸಿದ್ದಾರೆ.
Advertisement