ಜಗನ್ ಮೋಹನ್ ರೆಡ್ಡಿ
ಜಗನ್ ಮೋಹನ್ ರೆಡ್ಡಿ

ವಿಷಾನಿಲ ಸೋರಿಕೆ: ಮೃತರ ಕುಟುಂಬಕ್ಕೆ 1 ಕೋಟಿ ಪರಿಹಾರ ಘೋಷಿಸಿದ ಸಿಎಂ ಜಗನ್ ಮೋಹನ್ ರೆಡ್ಡಿ

ಆಂಧ್ರದ ವಿಶಾಖಪಟ್ಟಣ ಜಿಲ್ಲೆಯ ಎಲ್ ಜಿ ಪಾಲಿಮರ್ಸ್ ಇಂಡಸ್ಟ್ರೀಯಲ್ಲಿ ಸಂಭವಿಸಿದ್ದ ವಿಷಾನಿಲ ಸೋರಿಕೆ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 1 ಕೋಟಿ ರುಪಾಯಿ ಪರಿಹಾರವನ್ನು ಸಿಎಂ ಜಗನ್ ಮೋಹನ್ ರೆಡ್ಡಿ ಘೋಷಿಸಿದ್ದಾರೆ. 

ವಿಶಾಖಪಟ್ಟಣಂ: ಆಂಧ್ರಪ್ರದೇಶದ ಬಂದರು ಪಟ್ಟಣದ ಎಲ್‌ಜಿ ಪಾಲಿಮರ್ ಕಾರ್ಖಾನೆಯಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಅನಿಲ ಸೋರಿಯಿಂದ ಮಗು ಸೇರಿದಂತೆ ಕನಿಷ್ಠ 11 ಜನರು ಸಾವನ್ನಪ್ಪಿದ್ದು, ನೂರಾರು ಜನರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ.

ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಮೃತರ ಕುಟುಂಬಕ್ಕೆ ಗೆ ತಲಾ ಒಂದು ಕೋಟಿ ರೂ. ಪರಿಹಾರವನ್ನು ಘೋಷಿಸಿದ್ದಾರೆ. 

ಕಿಂಗ್ ಜಾರ್ಜ್ ಆಸ್ಪತ್ರೆಯಲ್ಲಿ ದಾಖಲಾದ ಸಂತ್ರಸ್ತರನ್ನು ಭೇಟಿ ಮಾಡಿ ಸಂತೈಸಿದ ಬಳಿಕ ಸುದ್ದಿಗಾರರೊಡನೆ ಮಾತನಾಡಿದ ಅವರು, ಎರಡರಿಂದ ಮೂರು ದಿನ ಚಿಕಿತ್ಸೆಗೆ ಒಳಗಾಗಿರುವವರಿಗೆ ತಲಾ 1 ಲಕ್ಷ ರೂ. ಹಾಗೂ ವೆಂಟಿಲೇಟರ್ ನಲ್ಲಿ ಇರುವವರಿಗೆ 10 ಲಕ್ಷ ರೂ. ಆಸ್ಪತ್ರೆಗಳಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದವರಿಗೆ ತಲಾ 25 ಸಾವಿರ ರೂ. ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.

ನವದೆಹಲಿಯ ಎನ್‌ಡಿಆರ್‌ಎಫ್ ಡಿಜಿ ಎಸ್ ಎನ್ ಪ್ರಧಾನ್ ಮಾತನಾಡಿ, ಈ ಪ್ರದೇಶದ ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಸ್ಥಳೀಯ ಆಡಳಿತಕ್ಕೆ ನೆರವಾಗಲು ಎನ್‌ಡಿಆರ್‌ಎಫ್ ತಂಡ ಅಲ್ಲಿಯೇ ಇರುತ್ತದೆ. ಐದಾರು ಗಂಟೆಯ ಬಳಿಕ ಅನಿಲ ಸೋರಿಕೆಯ ತೀವ್ರತೆ ಕಡಿಮೆಯಾಗುತ್ತಿದೆ. ಆದಾಗ್ಯೂ ಸುಮಾರು ಮೂರು ಕಿ.ಮೀ ವ್ಯಾಪ್ತಿಯಲ್ಲಿ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಹೇಳಿದ್ದಾರೆ.

ಬುಧವಾರ ಮಧ್ಯರಾತ್ರಿ, ಗುರುವಾರ ಬೆಳಗಿನ ಜಾವದ ನಡುವೆ 2.30ಕ್ಕೆ ಅನಿಲ ಸೋರಿಕೆಯಾಗಿದ್ದು, ಸ್ಥಳೀಯ ನಿವಾಸಿಗಳಿಂದ ವಿಷಯ ತಿಳಿದುಬಂದಿದೆ. 

ಬೆಳಿಗ್ಗೆ 5.30 ರ ಸುಮಾರಿಗೆ ಎನ್‌ಡಿಆರ್‌ಎಫ್‌ನ ವಿಶಾಖಪಟ್ಟಣಂ ಆರ್‌ಆರ್‌ಸಿ ಘಟಕವು ಸ್ಥಳವನ್ನು ತಲುಪಿ ಸುಮಾರು 300 ಕುಟುಂಬಗಳನ್ನು ಸ್ಥಳಾಂತರಿಸಲಾಯಿತು.

ಅನಿಲ ಸೋರಿಕೆಯಿಂದ ಬಳಲುತ್ತಿರುವ 200 ಕ್ಕೂ ಹೆಚ್ಚು ಜನರು ಇಲ್ಲಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಅವರಲ್ಲಿ 25-30 ಜನರ ಸ್ಥಿತಿ ಗಂಭೀರವಾಗಿದೆ ಮತ್ತು 80 ಜನರು ವೆಂಟಿಲೇಟರ್‌ನಲ್ಲಿದ್ದಾರೆ ಎಂದು ಪ್ರಧಾನ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಎನ್‌ಡಿಎಂಎ ಸಭೆಯಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ, ಅಗತ್ಯವಿರುವ ಎಲ್ಲ ಸಂಪನ್ಮೂಲಗಳನ್ನು ರಾಜ್ಯದಿಂದ ಮಾತ್ರವಲ್ಲದೆ ಕೇಂದ್ರದಿಂದ ಪಡೆದುಕೊಳ್ಳುವಂತೆ ನಿರ್ದೇಶಿಸಿದ್ದಾರೆ.

ವಿಶಾಖಪಟ್ಟಣಂನಿಂದ 20 ಕಿ.ಮೀ ದೂರದಲ್ಲಿರುವ ಆರ್.ಆರ್.ವೆಂಕಟನಗರದಲ್ಲಿ ಅನಿಲ ಸೋರಿಕೆ ಸಂಭವಿಸಿದ್ದು, ಸ್ಥಾವರದಿಂದ ಸುಮಾರು ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿನ ಆರ್.ಆರ್.ವೆಂಕಟಪುರಂ, ಪದ್ಮಪುರಂ, ಬಿ.ಸಿ. ಕಾಲೋನಿ, ಕಂಪಾರಪಾಲಂ ಸೇರಿದಂತೆ ಕನಿಷ್ಠ ಐದು ಗ್ರಾಮಗಳ ಮೇಲೆ ಪರಿಣಾಮ ಬೀರಿದೆ. 

ಅನಿಲ ಸೋರಿಕೆ ಘಟನೆಯ ತನಿಖೆಗಾಗಿ ವಿಶಾಖಪಟ್ಟಣಂ ಕಲೆಕ್ಟರ್ ಮತ್ತು ಪೊಲೀಸ್ ಕಮಿಷನರ್ ಮತ್ತು ಇತರರೊಂದಿಗೆ ವಿಶೇಷ ಮುಖ್ಯ ಕಾರ್ಯದರ್ಶಿ, ಪರಿಸರ ಮತ್ತು ಅರಣ್ಯಗಳ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಲಾಗಿದೆ. ಸರ್ಕಾರಕ್ಕೆ ವರದಿ ಸಲ್ಲಿಸಿದ ನಂತರ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com