ನವದೆಹಲಿ: ವಿಶ್ವದ ಅನೇಕ ಅಭಿವೃದ್ಧಿ ಹೊಂದಿದ ದೇಶಗಳಂತೆ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ನಿರೀಕ್ಷೆ ಮಾಡುತ್ತಿಲ್ಲ. ಆದರೂ, ಕೆಟ್ಟ ಪರಿಸ್ಥಿತಿ ಎದುರಿಸಲು ಭಾರತ ಸಿದ್ಧವಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಶನಿವಾರ ಹೇಳಿದ್ದಾರೆ.
ಕೊರೋನಾ ಪರಿಸ್ಥಿತಿ ಕುರಿತು ಈಶಾನ್ಯ ರಾಜ್ಯಗಳ ಹಿರಿಯ ಅಧಿಕಾರಿಗಳು ಹಾಗೂ ಆರೋಗ್ಯ ಸಚಿವರುಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿರುವ ಅವರು, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಂತೆ ನಮ್ಮ ರಾಷ್ಟ್ರ ಕೆಟ್ಟ ಪರಿಸ್ಥಿತಿಯನ್ನು ನಿರೀಕ್ಷೆ ಮಾಡುತ್ತಿಲ್ಲ. ಆದರೆ, ಕೆಟ್ಟ ಪರಿಸ್ಥಿತಿ ಎದುರಾದರೂ ಅದನ್ನು ಎದುರಿಸಲು ಸಿದ್ಧವಿದೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಕೊರೋನಾ ಸಾವಿನ ಪ್ರಮಾಣ ಶೇ.3.3ರಷ್ಟಿದ್ದು, ಗುಣಮುಖರಾಗುತ್ತಿರುವವರ ಪ್ರಮಾಣ ಶೇ.29.9ಕ್ಕೆ ಏರಿಕೆಯಾಗಿದೆ. ಹಾಗೆಯೇ ಕೋರೊನಾ ಸೋಂಕು ಪ್ರಕರಣಗಳ ದ್ವಿಗುಣಗೊಳ್ಳುತ್ತಿರುವ ಪ್ರಮಾಣ ಕೂಡ ಕಲೆದ ಮೂರು ದಿನಗಳಲ್ಲಿ 11 ಆಗಿದ್ದು, ಕಳೆದೊಂದು ವಾರದಲ್ಲಿ 9.9 ಆಗಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ದೇಶದಲ್ಲಿ 843 ಆಸ್ಪತ್ರೆಗಳನ್ನು ಕೊರೋನಾ ಚಿಕಿತ್ಸೆಗಾಗಿ ಮೀಸಲಿಡಲಾಗಿದೆ. ಇದರಲ್ಲಿ ಒಟ್ಟಾರೆಯಾಗಿ 1,65,991 ಹಾಸಿಗೆಗಳಿವೆ. ಹಾಗೆಯೇ 1991 ಆರೋಗ್ಯ ಕೇಂದ್ರಗಳಲ್ಲಿ 1,35,643 ಹಾಸಿಗೆಗಳಿವೆ. ಇವುಗಳಲ್ಲಿ ಐಸೋಲೇಷನ್ ಹಾಗೂ ಐಸಿಯೂ ಬೆಡ್ ಗಳೂ ಸೇರಿವೆ ಎಂದು ವಿವರಿಸಿದ್ದಾರೆ.
ದಶದಲ್ಲಿ 7645 ಕ್ವಾರಂಟೈನ್ ಕೇಂದ್ರಗಳಿದ್ದು, ಇದೂವರೆಗೆ 69 ಲಕ್ಷ ಎನ್95 ಮಾಸ್ಕ್ ಗಳನ್ನು ವಿವಿಧ ರಾಜ್ಯಗಳಿಗೆ ವಿತರಿಸಲಾಗಿದೆ. ಹಾಗೆಯೇ 32.76 ಲಕ್ಷ ಪಿಪಿಇ ಕಿಟ್ ಗಳನ್ನು ರಾಜ್ಯಗಳಿಗೆ ರವಾನಿಸಲಾಗಿದೆ. ಹಾಗೆಯೇ ಪುಣೆಯಲ್ಲಿ 1ರಿಂದ ಆರಂಭವಾದ ಲ್ಯಾಬ್ ಗಳ ಸಂಖ್ಯೆ 453ಕ್ಕೆ ಏರಿಕೆಯಾಗಿದೆ. ನಿನ್ನೆ ಸಂಜೆಯಷ್ಟೇ ವಿವಿಧ ರಾಜ್ಯಗಳಿಂದ ಮಾಹಿತಿಯನ್ನು ಸಂಗ್ರಹಿಸಲಾಗಿದ್ದು, ಶೇ.0.38 ರಷ್ಟು ರೋಗಿಗಳು ವೆಂಟಿಲೇಟರ್ ಸಪೋರ್ಟ್ ನಲ್ಲಿದ್ದಾರೆ. 1.88ರಷ್ಟು ರೋಗಿಗಳು ಆಕ್ಸಿಜನ್ ಸಪೋರ್ಟ್ ನಲ್ಲಿದ್ದಾರೆ. 2.21ರಷ್ಟು ರೋಗಿಗಳು ಐಸಿಯುನಲ್ಲಿದ್ದಾರೆಂದು ಮಾಹಿತಿ ನೀಡಿದ್ದಾರೆ.
Advertisement