ಕೊರೋನಾ ಲಾಕ್ ಡೌನ್ 4.0: 'ಆತ್ಮ ನಿರ್ಭರ ಭಾರತ ಅಭಿಯಾನ', 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ ಪ್ರಧಾನಿ ಮೋದಿ

ಕೊರೋನಾ ತಡೆಗೆ ದೇಶಾದ್ಯಂತ 3.O ಲಾಕ್ ಡೌನ್ ಚಾಲ್ತಿಯಲ್ಲಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ್ದು ಆತ್ಮ ನಿರ್ಭರ ಭಾರತ ಅಭಿಯಾನವನ್ನು ಘೋಷಣೆ ಮಾಡಿದ್ದಾರೆ. 
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ಕೊರೋನಾ ತಡೆಗೆ ದೇಶಾದ್ಯಂತ 3.O ಲಾಕ್ ಡೌನ್ ಚಾಲ್ತಿಯಲ್ಲಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ್ದು ಆತ್ಮ ನಿರ್ಭರ ಭಾರತ ಅಭಿಯಾನವನ್ನು ಘೋಷಣೆ ಮಾಡಿದ್ದಾರೆ. 

ಭಾರತ ಆತ್ಮ ನಿರ್ಭರ ದೇಶ ಆಗಬೇಕು. ಸ್ವಾವಲಂಬಿ ಭಾರತ ಎಂಬುದನ್ನು ನಾವು ತೋರಿಸಬೇಕು ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಮಧ್ಯಮ ವರ್ಗಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ 2೦ ಲಕ್ಷ ಕೋಟಿ ರೂಪಾಯಿ  ಆರ್ಥಿಕ ಪ್ಯಾಕೇಜ್ ನ್ನು ಘೋಷಿಸಿದ್ದಾರೆ. 

ಆತ್ಮ ನಿರ್ಭರ ಭಾರತ ನಮ್ಮೆಲ್ಲರ ಧ್ಯೇಯವಾಗಲಿ, ಭಾರತ ಸ್ವಾವಲಂಬಿ ಎಂಬುದನ್ನು ತೋರಿಸಬೇಕಿದೆ ಎಂದು ಹೇಳಿರುವ ಪ್ರಧಾನಿ ಮೋದಿ ಕೋವಿಡ್ ಸಂಕಟ ಶುರುವಾದ ಸಂದರ್ಭದಲ್ಲಿ ಭಾರತದಲ್ಲಿ ಪಿಪಿಇ ಕಿಟ್ ತಯಾರಾಗುತ್ತಿರಲಿಲ್ಲ, ಎನ್ 95 ಮಾಸ್ಕ್ ಗಳು ಕೆಲವು ಸಂಖ್ಯೆಯಲ್ಲಿ ಮಾತ್ರವೇ ಉತ್ಪಾದನೆಯಾಗುತ್ತಿತ್ತು. ಈಗ ಭಾರತದಲ್ಲಿ ದಿನಂಪ್ರತಿ 2 ಲಕ್ಷ ಪಿಪಿಇ ಕಿಟ್ ಹಾಗೂ ಎನ್ 95 ಮಾಸ್ಕ್ ಗಳನ್ನು ತಯಾರಿಸುತ್ತಿದೆ. ವಿಶ್ವವೇ ಒಂದು ಕುಟುಂಬ ಎಂಬುದು ನಮ್ಮ ಸಂಸ್ಕೃತಿಯಾಗಿದ್ದು ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಇದು ಸಾಬೀತುಗೊಂಡಿದೆ. ಎಂದು ಮೋದಿ ಹೇಳಿದ್ದಾರೆ. 

ಆತ್ಮ ನಿರ್ಭರ ಭಾರತ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿರುವ ಆರ್ಥಿಕ ಪ್ಯಾಕೇಜ್ ದೇಶದ ಜಿಡಿಪಿಯ ಶೇ.10 ರಷ್ಟು ಇರಲಿದೆ. 

ಈ ಆರ್ಥಿಕ ಪ್ಯಾಕೇಜ್ ದೇಶದ ಕಾರ್ಮಿಕರು, ದೇಶದ ರೈತರು, ತೆರಿಗೆಯನ್ನು ಪ್ರಾಮಾಣಿಕವಾಗಿ ಪಾವತಿಸಿ, ದೇಶದ ಅಭಿವೃದ್ಧಿಗೆ ಸಹಕರಿಸುವ ಮಧ್ಯಮ ವರ್ಗಕ್ಕಾಗಿ ಘೋಷಿಸಲಾಗಿದೆ ಎಂದು ಮೋದಿ ಹೇಳಿದ್ದಾರೆ. ಇದೇ ವೇಳೆ ಸ್ವಾವಂಬಿ ಭಾರತ ಆಗಬೇಕಾದರೆ ದೇಶದ ಜನತೆ ಖಾದಿ, ಹ್ಯಾಂಡ್ ಲೂಮ್ ರೀತಿಯ ಸ್ಥಳೀಯ ಉತ್ಪನ್ನಗಳನ್ನು ಖರೀದಿಸಿ ಅದನ್ನು ಹೆಚ್ಚು ಪ್ರಚಾರ ಮಾಡುವಂತೆ ದೇಶದ ಜನತೆಗೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

ನಾವು ಕೊರೋನಾ ಜೊತೆಯೇ ಜೀವಿಸುವುದನ್ನು ಕಲಿಯಬೇಕು, ಕೊರೋನಾ ಸವಾಲನ್ನು ನಾವು ಭಾರತವನ್ನು ಹೊಸ ಮನ್ವಂತರದೆಡೆಗೆ ಕರೆದೊಯ್ಯಲು ಬಳಸಿಕೊಳ್ಳಬೇಕು. ಮೇ.18 ರ ನಂತರ ಲಾಕ್ ಡೌನ್ ಹೊಸ ಸ್ವರೂಪದಲ್ಲಿ ಹೊಸ ಮಾರ್ಗಸೂಚಿಗಳೊಂದಿಗೆ ಬರಲಿದೆ. ರಾಜ್ಯಗಳ ಜೊತೆ ಚರ್ಚಿಸಿ ಮಾರ್ಗಸೂಚಿಗಳನ್ನು ಘೋಷಿಸಲಾಗುವುದು ಎಂದು ಮೋದಿ ಇದೇ ವೇಳೆ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com