ಈ ಒಂದು ಪ್ರದೇಶವನ್ನು ಮುಚ್ಚಿದರೆ, ಭಾರತದ ಶೇ.72ರಷ್ಟು ಕೊರೋನಾ ಪ್ರಕರಣಗಳನ್ನು ತಡೆಯಬಹುದು: ಸಂಶೋಧಕರು

ಭಾರತ ಸರ್ಕಾರ ಈ ಒಂದು ಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಿದರೆ ಸಾಕು, ಶೇ.72ರಷ್ಟು ಕೊರೋನಾ ಸೋಂಕು ಪ್ರಕರಣಗಳನ್ನು ತಡೆಯಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಭಾರತ ಸರ್ಕಾರ ಈ ಒಂದು ಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಿದರೆ ಸಾಕು, ಶೇ.72ರಷ್ಟು ಕೊರೋನಾ ಸೋಂಕು ಪ್ರಕರಣಗಳನ್ನು ತಡೆಯಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಹೌದು.. ಇಷ್ಟಕ್ಕೂ ಯಾವುದು ಆ ಪ್ರದೇಶ ಎಂಬುದಕ್ಕೆ ಉತ್ತರ ಅದೇ ಕೆಂಪು ದೀಪ ಪ್ರದೇಶ.. ಅರ್ಥಾತ್ ರೆಡ್ ಲೈಟ್ ಏರಿಯಾ ಅಥವಾ ಲೈಂಗಿಕ ಕಾರ್ಯಕರ್ತರ ಪ್ರದೇಶ.. ಸಂಶೋಧಕರು ಅಭಿಪ್ರಾಯಪಟ್ಟಿರುವಂತೆ ಈ ಲೈಂಗಿಕ ಕಾರ್ಯಕರ್ತರಿರುವ ರೆಡ್ ಲೈಟ್ ಏರಿಯಾಗಳನ್ನು  ಸಂಪೂರ್ಣವಾಗಿ ಬಂದ್ ಮಾಡಿದರೆ ದೇಶದಲ್ಲಿ ಶೇ,72ರಷ್ಟು ಕೊರೋನಾ ಸೋಂಕು ಪ್ರಕರಣಗಳನ್ನು ತಡೆಯಬಹುದು. ಅಂತೆಯೇ ದೇಶದಲ್ಲಿ ಪ್ರಕರಣಗಳು ಗರಿಷ್ಠ ಮಟ್ಟ ಮುಟ್ಟುವುದು ಕೂಡ ಸದ್ಯದ ಲೆಕ್ಕಾಚಾರಕ್ಕಿಂತ 17 ದಿನಗಳಷ್ಟು ವಿಳಂಬವಾಗಲಿದೆ ಎಂದು ಲೆಕ್ಕಾಚಾರ ಹಾಕಿದ್ದಾರೆ.

ಈ ಕುರಿತಂತೆ ಅಮೆರಿಕದ ಯಾಲೆ ವೈದ್ಯಕೀಯ ಕಾಲೇಜಿನ ಸಂಶೋಧಕರನ್ನು ಒಳಗೊಂಡ ತಂಡ ನಡೆಸಿದ ಅಧ್ಯಯನದಲ್ಲಿ ಈ ಲೆಕ್ಕಾಚಾರ ಹಾಕಲಾಗಿದ್ದು, ರೆಡ್ ಲೈಟ್ ಏರಿಯಾಗಳಿಗೆ ಜನ ಸಂಪರ್ಕವನ್ನು ಸಂಪೂರ್ಣವಾಗಿ ನಿಯಂತ್ರಿಸಿದರೆ ಶೇ.72ರಷ್ಟು ಕೊರೋನಾ ಪ್ರಕರಣಗಳನ್ನು  ತಡೆಯಬಹುದು. ಈ ಬಗ್ಗೆ ಮಾತನಾಡಿರುವ ಯಾಲೆ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಜೆಫೆರಿ ಟೌನ್ಸೆಂಡ್ ಅವರು, ಭಾರತದಲ್ಲಿ ‘ರೆಡ್ ಲೈಟ್ ಏರಿಯಾ ಅಥವಾ ಲೈಂಗಿಕ ಕಾರ್ಯಕರ್ತರ ಪ್ರದೇಶದ ಮೇಲಿನ ಚಟುವಟಿಕೆಗಳ ಮೇಲೆ ನಿಯಂತ್ರಣ ವಿಧಿಸಿದಷ್ಟೂ ಸೋಂಕು ಹರಡುವ  ಭೀತಿ ದೂರವಾಗಲಿದೆ ಎಂದು ಹೇಳಿದ್ದಾರೆ.

ಜಪಾನ್‌ನಲ್ಲಿ ಇಂತಹ ಪ್ರದೇಶದ ಚಟುವಟಿಕೆಗಳ ಮೇಲೆ ನಿಯಂತ್ರಣ ವಿಧಿಸಲಿಲ್ಲ. ಹೀಗಾಗಿ ಅಂತಹ ಪ್ರದೇಶಗಳಿರುವ ನಗರಗಳಲ್ಲಿ ಪ್ರಕರಣಗಳು ಭಾರಿ ಸಂಖ್ಯೆಯಲ್ಲಿ ಹೆಚ್ಚಾಗಿದ್ದವು. ಇದೇ ಕಾರಣಕ್ಕಾಗಿ ಆಸ್ಟ್ರೇಲಿಯಾದಲ್ಲಿ ವೇಶ್ಯಾಗೃಹಗಳನ್ನು ಅನಿರ್ದಿಷ್ಟಾವಧಿಗೆ ಬಂದ್‌ ಮಾಡಿ ಆದೇಶ  ಹೊರಡಿಸಲಾಗಿದೆ. ಜರ್ಮನಿ, ನೆದರ್ಲೆಂಡ್ಸ್‌ನಲ್ಲೂ ವೇಶ್ಯಾಗೃಹಗಳನ್ನು ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಅಲ್ಲಿನ ಸರ್ಕಾರಗಳು ಹೇಳಿವೆ ಎನ್ನಲಾಗಿದೆ.

ವೇಶ್ಯಾ ಗೃಹಕ್ಕೆ ನಿತ್ಯ ಐದು ಲಕ್ಷ ಗ್ರಾಹಕರ ಭೇಟಿ
ರಾಷ್ಟ್ರೀಯ ಏಡ್ಸ್‌ ನಿಯಂತ್ರಣ ಸಂಸ್ಥೆ (ನ್ಯಾಕೊ) ದಾಖಲೆಗಳ ಪ್ರಕಾರ, ದೇಶದಲ್ಲಿ 6,37,500 ಲೈಂಗಿಕ ಕಾರ್ಯಕರ್ತರಿದ್ದು, ಪ್ರತಿದಿನ ಐದು ಲಕ್ಷ ಗ್ರಾಹಕರು ವೇಶ್ಯಾ ಗೃಹಗಳಿಗೆ ಭೇಟಿ ನೀಡುತ್ತಾರೆ. ಒಂದುವೇಳೆ ಈ ಪ್ರದೇಶದ ಚಟುವಟಿಕೆಗಳ ಪುನರಾರಂಭಕ್ಕೆ ಅವಕಾಶ ನೀಡಿದರೆ  ಸೋಂಕು ವೇಗವಾಗಿ ಹರಡುವ ಸಾಧ್ಯತೆ ಹೆಚ್ಚಾಗಿದೆ. ಲೈಂಗಿಕ ಕ್ರಿಯೆಯಲ್ಲಿ ಅಂತರ ಕಾಯ್ದುಕೊಳ್ಳುವುದು ಅಸಾಧ್ಯವಾಗಿರುವ ಕಾರಣ ಸೋಂಕು ಕ್ಷಿಪ್ರವಾಗಿ ಹರಡಲಿದೆ. ಅದರಿಂದ ಸಮುದಾಯಕ್ಕೂ ಕ್ಷಿಪ್ರವಾಗಿ ಹರಡುವ ಅಪಾಯವಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

ಲಾಕ್‌ಡೌನ್‌ ತೆರವುಗೊಳಿಸಿದ ನಂತರದ ಅವಧಿಯಲ್ಲೂ ಇಂತಹ ಲೈಂಗಿಕ ಚಟುವಟಿಕೆ ತಾಣಗಳ ಮೇಲಿನ ನಿರ್ಬಂಧವನ್ನು ಮುಂದುವರಿಸಿದರೆ ಕೊರೋನಾ ವೈರಸ್ ಭವಿಷ್ಯದ ಸಾವಿನ ಪ್ರಮಾಣವು ಶೇ 63ರಷ್ಟು ತಗ್ಗಲಿದೆ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ. ಈ ವರದಿಯನ್ನು ಭಾರತ  ಸರ್ಕಾರ ಮಾತ್ರವಲ್ಲದೆ ಸಂಬಂಧಿತ ರಾಜ್ಯ ಸರ್ಕಾರಗಳ ಜತೆಗೂ ಹಂಚಿಕೊಳ್ಳಲಾಗಿದೆ. ಲಾಕ್‌ಡೌನ್‌ ತೆರವುಗೊಳಿಸಿದ ಬಳಿಕವೂ ‘ಕೆಂಪು ದೀಪ’ ಪ್ರದೇಶದ ಮೇಲಿನ ನಿರ್ಬಂಧವನ್ನು ಮುಂದುವರಿಸಲು ಶಿಫಾರಸು ಮಾಡಲಾಗಿದೆ. ದೇಶದಲ್ಲಿ ಪ್ರಕರಣಗಳು ಗರಿಷ್ಠ ಮಟ್ಟ ಮುಟ್ಟುವುದು  ವಿಳಂಬವಾದಷ್ಟೂ ಸರ್ಕಾರಕ್ಕೆ ಇನ್ನಷ್ಟು ಸಿದ್ಧತೆ ಮಾಡಿಕೊಳ್ಳಲು ಹಾಗೂ ಯೋಜಿತ ಕ್ರಮಗಳನ್ನು ಕೈಗೊಳ್ಳಲು ಹೆಚ್ಚಿನ ಕಾಲಾವಕಾಶ ಸಿಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಅಪಾಯದಲ್ಲಿ ಐದು ನಗರಗಳು
ಭಾರತದ ‘ಕೆಂಪು ದೀಪ’ ಪ್ರದೇಶಗಳಿರುವ ಐದು ನಗರಗಳು ಕೆಂಪು ವಲಯದಲ್ಲಿ ಇರುವುದನ್ನು ಉದಾಹರಿಸಿರುವ ಸಂಶೋಧಕರು, ಆ ನಗರಗಳಲ್ಲಿ ಸೋಂಕು ಕ್ಷಿಪ್ರವಾಗಿ ಹರಡಲು ಈ ಪ್ರದೇಶಗಳ ಕೊಡುಗೆ ಅಪಾರ ಎಂದು ಅಭಿಪ್ರಾಯಪಟ್ಟಿದ್ದಾರೆ. ಲೈಂಗಿಕ ಚಟುವಟಿಕೆಗಳ ತಾಣದ  ಮೇಲಿನ ನಿರ್ಬಂಧ ಮುಂದುವರಿದರೆ ಸೋಂಕಿನ ಪ್ರಕರಣಗಳು ಗರಿಷ್ಠ ಮಟ್ಟ ಮುಟ್ಟಲು ಮುಂಬೈನಲ್ಲಿ 12 ದಿನ, ನವದೆಹಲಿಯಲ್ಲಿ 17 ದಿನ, ಪುಣೆಯಲ್ಲಿ 29 ದಿನ, ನಾಗ್ಪುರದಲ್ಲಿ 30 ದಿನ ಹಾಗೂ ಕೋಲ್ಕತ್ತದಲ್ಲಿ 36 ದಿನಗಳಷ್ಟು ವಿಳಂಬವಾಗಲಿದೆ ಎಂದು ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com