ಅಂಫನ್ ಸೂಪರ್ ಸೈಕ್ಲೋನ್: ಚಂಡಮಾರುತ ಅಪ್ಪಳಿಸುವ ಮುನ್ನವೇ ಒಡಿಶಾದಲ್ಲಿ ಭಾರೀ ಮಳೆ, ಬಿರುಗಾಳಿ ಆರ್ಭಟ

185 ಕಿಲೋಮೀಟರ್ ವೇಗದಲ್ಲಿ ಬೀಸುತ್ತಿರುವ ಅಂಫನ್ ಸೂಪರ್ ಸೈಕ್ಲೋನ್ ಬುಧವಾರ ಮಧ್ಯಾಹ್ನ ಬಂಗಾಳ ಕರಾವಳಿಗೆ ಅಪ್ಪಳಿಸಲಿದ್ದು, ಈ ನಡುವಲ್ಲೇ ಒಡಿಶಾದ ಹಲವೆಡೆ ಈಗಾಗಲೇ ಭಾರೀ ಮಳೆ ಹಾಗೂ ಬಿರುಗಾಳಿಯ ಆರ್ಭಟ ಆರಂಭವಾಗಿದೆ. 
ಒಡಿಶಾದ ಹಲವೆಡೆ ಭಾರೀ ಮಳೆಯಾಗುತ್ತಿರುವುದು
ಒಡಿಶಾದ ಹಲವೆಡೆ ಭಾರೀ ಮಳೆಯಾಗುತ್ತಿರುವುದು

ನವದೆಹಲಿ: 185 ಕಿಲೋಮೀಟರ್ ವೇಗದಲ್ಲಿ ಬೀಸುತ್ತಿರುವ ಅಂಫನ್ ಸೂಪರ್ ಸೈಕ್ಲೋನ್ ಬುಧವಾರ ಮಧ್ಯಾಹ್ನ ಬಂಗಾಳ ಕರಾವಳಿಗೆ ಅಪ್ಪಳಿಸಲಿದ್ದು, ಈ ನಡುವಲ್ಲೇ ಒಡಿಶಾದ ಹಲವೆಡೆ ಈಗಾಗಲೇ ಭಾರೀ ಮಳೆ ಹಾಗೂ ಬಿರುಗಾಳಿಯ ಆರ್ಭಟ ಆರಂಭವಾಗಿದೆ. 

ಒಡಿಶಾದ ಭದ್ರಕ್, ಪಾರಾದೀಪ್, ಬಾಲಾಸೋರ್, ಚಂಡೀಪುರ್ ಸೇರಿದಂತೆ ಹಲವೆಡೆ ಬೆಳಿಗ್ಗೆ 4 ಗಂಟೆಯಿಂದಲೇ ಮಳೆ ಆರಂಭವಾಗಿದೆ. ಅಂಪನ್ ಚಂಡಮಾರುತದ ಪೂರ್ವಭಾವಿಯಂತೆ ಪ್ರಬಲ ಗಾಳಿಯೂ ಬೀಸುತ್ತಿದೆ. ಸಮುದ್ರದ ಅಲೆಗಳು ಉಕ್ಕೇರುತ್ತಿದೆ. 

ಕೆಲ ಕರಾವಳಿ ಪ್ರದೇಶಗಳಲ್ಲಿ 4-5 ಮೀಟರ್ ಎತ್ತರದ ಸಮುದ್ರದ ಅಲೆಗಳು ನಿರ್ಮಾಣವಾಗುತ್ತಿದ್ದು, ಕೆಲ ಮಟ್ಟದ ಪ್ರದೇಶಗಳಿಗೆ ಸಮುದ್ರದ ನೀರು ಉಕ್ಕೇರಿ ಪ್ರವಹಿಸುವ ಸಂಭವನೀಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. 

ಸೈಕ್ಲೋನ್ ಅಪ್ಪಳಸುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ 1 ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರ ಮಾಡಲಾಗಿದೆ. ಈ ನಡುವೆ ಕೇಂದ್ರ ಸರ್ಕಾರ ಕೂಡ ಅಗತ್ಯ ನೆರವು ನೀಡುವುದಾಗಿ ಎರಡೂ ರಾಜ್ಯಗಳಿಗೆ ಭರವಸೆ ನೀಡಿದೆ. 

ಇಂದು ಅಪ್ಪಳಿಸಲಿರುವ ಅಂಫನ್ ಚಂಡಮಾರುತದ ವೇಗ ಅದೃಷ್ಟವಶಾತ್ ಕೊಂತೆ ಕಡಿಮೆಯಾಗಲಿದ್ದು, ಈಗ ಅದು ಸೂಪರ್ ಸೈಕ್ಲೋನ್ ಬದಲು ಅತ್ಯಂತ ತೀವ್ರ ವೇಗದ ಚಂಡಮಾರುತವಾಗಿ ಬದಲಾಗಲಿದೆ ಅಧಿಕಾರಿಗಳು ತಿಳಿಸಿದ್ದಾರೆ. 

ಗಂಟೆಗೆ 195-200 ಕಿಲೋಮೀಟರ್ ವೇಗದ ಬದಲು ಅಂಫನ್ ಚಂಡಮಾರುತ 155-165 ಕಿಲೋಮೀಟರ್ ವೇಗದಲ್ಲಿ ಬಂಗಾಳ ಹಾಗೂ ಒಡಿಶಾದ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಗಳಿವೆ. ಈಗಾಗಲೇ ಮುಂಜಾಗ್ರತಾ ಕ್ರಮವಾಗಿ 3 ಲಕ್ಷ ಜನರನ್ನು ಸೈಕ್ಲೋನ್ ಶೆಲ್ಟರ್ ಗಳಿಗೆ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 

1999ರಲ್ಲಿ ಒಡಿಶಾಕ್ಕೆ ಅಪ್ಪಳಿಸಿದ ಸೂಪರ್ ಸೈಕ್ಲೋನ್'ಗೆ 10,000ಕ್ಕೂ ಹೆಚ್ಚು ಜನರು ಬಲಿಯಾಗಿದ್ದರು. ಹೀಗಾಗಿ ಆತಂಕ ಹೆಚ್ಚಿತ್ತು. ಮಂಗಳವಾರ ಮಧ್ಯಾಹ್ನದ ವೇಳೆಗೆ ಚಂಡಮಾರುತ ಕೊಂಚ ವೇಗ ಕಳೆದುಕೊಂಡಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಚಂಡಮಾರುತದ ಪರಿಣಾಮ ಉಭಯ ರಾಜ್ಯಗಳ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com