ಕೋಲ್ಕತಾ: ಕೊರೋನಾ ವೈರಸ್ ಲಾಕ್'ಡೌನ್ ನಿಂದಾಗಿ ಕೆಲಸ ಕಳೆದುಕೊಂಡು ತಮ್ಮ ತವರಿಗೆ ಮರಳಿದ್ದ ಪಶ್ಚಿಮ ಬಂಗಾಳ ಹಾಗೂ ಒಡಿಶಾದ ಕಾರ್ಮಿಕರಿಗೆ ಅಂಫಾನ್ ಚಂಡಮಾರುತ ದೊಡ್ಡ ಶಾಕ್'ನ್ನೇ ನೀಡಿದೆ.
ಕೊರೋನಾದಿಂದಾಗಿ ಕೆಲಸ ಕಳೆದುಕೊಂಡಿದ್ದ ಕಾರ್ಮಿಕರು ಇದೀಗ ಚಂಡಮಾರುತದಿಂದಾಗಿ ಮನೆ ಹಾಗೂ ಇದ್ದ ಸಣ್ಣಪುಟ್ಟ ಆಸ್ತಿ, ಪಾಸ್ತಿಗಳನ್ನೂ ಕಳೆದುಕೊಂಡಿದ್ದಾರೆ.
ಬೆಂಗಳೂರಿನಿಂದ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಗೋಸಾಬಾ ಗ್ರಾಮಕ್ಕೆ ತೆರಳಿದ್ದ ವಲಸೆ ಕಾರ್ಮಿಕ ಜಮಾಲ್ ಮೊಂಡಾಲ್ ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಕೊರೋನಾ ಲಾಕ್'ಡೌನಿಂದಾಗಿ ಉದ್ಯಾಗ ಕಳೆದುಕೊಂಡಿದ್ದ ಆದ, ಸೋಮವಾರವಷ್ಟೇ ತನ್ನ ಕುಟುಂಬ ಸದಸ್ಯರನ್ನು ಸೇರಿಕೊಂಡಿದ್ದ. ಈ ವೇಳೆ ಎಲ್ಲಾ ಸಮಸ್ಯೆಗಳೂ ನಿವಾರಣೆಗೊಂಡಿತು ಎಂದು ನಿಟ್ಟುಸಿರು ಬಿಡುವಾಗಲೇ ಬುಧವಾರ ರಾತ್ರಿ ಅಂಫಾನ್ ಚಂಡಮಾರುತ ಜಮಾಲ್ ಸಂತೋಷವನ್ನು ಕಸಿದುಕೊಂಡಿತ್ತು.
ಬಿರುಗಾಳಿ, ಬಾರೀ ಮಳೆಯಿಂದಾಗಿ ಜಮಾಲ್ ಮೊಂಡಲ್ ಮಣ್ಣಿನ ಮನೆ ಕುಸಿದು ಬಿದ್ದಿತ್ತು. ಹೀಗಾಗಿ ಮೊಂಡಲ್ ಕುಟುಂಬಕ್ಕೆ ಇದೀಗ ಅತಂತ್ರ ಸ್ಥಿತಿ ಎದುರಾಗಿದೆ.
ನಾಲ್ವರು ಮಕ್ಕಳು ಮತ್ತು ಪತ್ನಿಯ ಜೊತೆ ಇದೀಗ ಮೊಂಡಲ್ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.
ಸೋಮವಾರ ನಾನು ಮನೆಗೆ ಹೋಗಿ ಮುಟ್ಟಿದಾಗ ನನ್ನ ಕಷ್ಟಗಳೆಲ್ಲವೂ ಮುಗಿದು ಹೋಯಿತೆಂದು ಅಂದುಕೊಂಡಿದ್ದೆ. ಆದರೆ, ಆಗಿದ್ದೇ ಬೇರೆ, ಚಂಡಮಾರುತದಿಂದ ಎಲ್ಲವನ್ನೂ ಕಳೆದುಕೊಂಡಿದ್ದೇನೆ. ಮುಂದೇನು ಮಾಡುವುದು? ಕುಟುಂಬವನ್ನು ಹೇಗೆ ನಿಭಾಯಿಸುವುದು ಎಂಬುದು ನನಗೆ ತೋಚದಂತಾಗಿದೆ ಎಂದು ಮೊಂಡಲ್ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಇದು ಜಮಾಲ್ ಒಬ್ಬರ ಕಥೆಯಷ್ಟೇ ಅಲ್ಲ. ಲಾಕ್ಡೌನ್ ನಿಂದ ಉದ್ಯೋಗ ಕಳೆದುಕೊಂಡು ಪಶ್ಚಿಮಬಂಗಾಳ ಮತ್ತು ಒಡಿಶಾಗೆ ಮರಳಿದ್ದ ನೂರಾರು ವಲಸೆ ಕಾರ್ಮಿಕರ ಧಾರುಣ ಕಥೆಯಾಗಿದೆ.
Advertisement