ಕೋಲ್ಕತಾ: ಅಂಫಾನ್ ಚಂಡಮಾರುತದಿಂದ ಪಶ್ಚಿಮ ಬಂಗಾಳಕ್ಕೆ 1 ಲಕ್ಷ ಕೋಟಿ ನಷ್ಟವಾಗಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಚಂಡಮಾರುತ ಪೀಡಿತ ಪ್ರದೇಶದಳಲ್ಲಿ ಇಂದು ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಮಮತಾ ಬ್ಯಾನರ್ಜಿ ಅವರು, ಬಳಿಕ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಬಂಗಾಳಕ್ಕೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಭೆ ನಡೆಸಿದ ಮಮತಾ ಚಂಡಮಾರುತದಿಂದಾಗಿ ಉಂಟಾದ ಸಮಸ್ಯೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಮಮತಾ, ಕೊರೋನಾ ವೈರಸ್ ದಾಳಿಗಿಂತಲೂ ಅಂಫಾನ್ ಚಂಡಮಾರುತದ ದಾಳಿ ಭೀಕರವಾಗಿದೆ. ಚಂಡಮಾರುತದಿಂದ ಪಶ್ಚಿಮ ಬಂಗಾಳಕ್ಕೆ ಸುಮಾರು 1 ಲಕ್ಷ ಕೋಟಿ ರೂಗೂ ಅಧಿಕ ನಷ್ಟವಾಗಿದೆ. ಚಂಡಮಾರುತದಿಂದಾಗಿ ಸಂಭವಿಸಿದ ವಿವಿಧ ಅವಘಡಗಳಲ್ಲಿ ಈ ವರೆಗೂ ಸುಮಾರು 77 ಮಂದಿ ಸಾವನ್ನಪ್ಪಿದ್ದಾರೆ. ಬಹುದೊಡ್ಡ ಸಂಖ್ಯೆ ಸರ್ಕಾರಿ ಮತ್ತು ಖಾಸಗಿ ಆಸ್ತಿ ಪಾಸ್ತಿ ನಷ್ಟವಾಗಿದೆ. ಉತ್ತರ ಮತ್ತು ದಕ್ಷಿಣ 24 ಪರಗಣ, ಈಸ್ಟ್ ಮತ್ತು ವೆಸ್ಟ್ ಮಿಡ್ನಾಪುರ್, ಕೋಲ್ಕತಾ, ಹೌರಾ ಮತ್ತು ಹೂಗ್ಲಿ ಜಿಲ್ಲೆಗಳು ಚಂಡಮಾರುತದಿಂದಾಗಿ ತತ್ತರಿಸಿ ಹೋಗಿವೆ ಎಂದು ಹೇಳಿದರು.
ಇನ್ನು ಇಂದು ವೈಮಾನಿಕ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ಬಂಗಾಳಕ್ಕೆ 1 ಸಾವಿರ ಕೋಟಿ ರೂಗಳ ಆರಂಭಿಕ ನೆರವು ಘೋಷಣೆ ಮಾಡಿದರು.
Advertisement