ನವದೆಹಲಿ: ಮುಂದಿನ 10 ದಿನಗಳಲ್ಲಿ 36 ಲಕ್ಷ ವಲಸಿಗ ಕಾರ್ಮಿಕರನ್ನು ಶ್ರಮಿಕ್ ವಿಶೇಷ ರೈಲುಗಳ ಮೂಲಕ ಅವರ ಊರುಗಳಿಗೆ ಕಳುಹಿಸಲಾಗುವುದು,ಇನ್ನೂ 200 ಪ್ರಯಾಣಿಕ ರೈಲುಗಳು ಸಂಚರಿಸಲಿವೆ ಎಂದು ಭಾರತೀಯ ರೈಲ್ವೆ ಶನಿವಾರ ಘೋಷಿಸಿದೆ.
ಶ್ರಮಿಕ್ ವಿಶೇಷ ರೈಲುಗಳ ಮೂಲಕ ಎಲ್ಲಾ ವಲಸೆ ಕಾರ್ಮಿಕರು ಅವರವರ ಊರುಗಳಿಗೆ ತಲುಪಿಸುತ್ತಿರುವ ಸರ್ಕಾರದ ಪ್ರಯತ್ನವನ್ನು ರೈಲ್ವೆ ಸಚಿವಾಲಯ ಮತ್ತು ಗೃಹ ಸಚಿವಾಲಯ ತಿಳಿಸಿವೆ.
ಉತ್ತರ ಪ್ರದೇಶ ಹಾಗೂ ಬಿಹಾರದ ವಲಸೆ ಕಾರ್ಮಿಕರು ಈವರೆಗೂ ಶೇ. 80ರಷ್ಟು ಪ್ರಯಾಣವನ್ನು ಕೈಗೊಂಡಿದ್ದಾರೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ. ಅಂಫಾನ್ ಚಂಡಮಾರುತದ ಹಿನ್ನೆಲೆಯಲ್ಲಿ ಮೇ 26ರವರೆಗೂ ಶ್ರಮಿಕ್ ವಿಶೇಷ ರೈಲುಗಳನ್ನು ತಮ್ಮ ರಾಜ್ಯಕ್ಕೆ ಕಳುಹಿಸದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಭಾರತೀಯ ರೈಲ್ವೆ ಇಲಾಖೆ ನೀಡಿರುವ ಪ್ರಮುಖ ಮಾಹಿತಿಗಳು ಇಂತಿವೆ.
* ಮುಂದಿನ 10 ದಿನಗಳಲ್ಲಿ 36 ಲಕ್ಷ ವಲಸಿಗ ಕಾರ್ಮಿಕರು ಶ್ರಮಿಕ್ ವಿಶೇಷ ರೈಲುಗಳಲ್ಲಿ ಪ್ರಯಾಣ
* ಕಳೆದ ನಾಲ್ಕು ದಿನಗಳಿಂದ 260 ಶ್ರಮಿಕ್ ವಿಶೇಷ ರೈಲುಗಳಲ್ಲಿ ಪ್ರತಿದಿನ ಸುಮಾರು 3 ಲಕ್ಷ ಪ್ರಯಾಣಿಕರು ಪ್ರಯಾಣ
* ಮೇ 1ರಿಂದ 2600 ಶ್ರಮಿಕ್ ವಿಶೇಷ ರೈಲುಗಳು ಸಂಚರಿಸುತ್ತಿದ್ದು, ಸುಮಾರು 35 ಲಕ್ಷ ಪ್ರಯಾಣಿಕರನ್ನು ಅವರವರ ಊರುಗಳಿಗೆ ತಲುಪಿಸಿವೆ
* 17 ರೈಲ್ವೆ ಆಸ್ಪತ್ರೆಗಳನ್ನು ಕೋವಿಡ್-19 ಆಸ್ಪತ್ರೆಗಳಾಗಿ ಪರಿವರ್ತನೆ
* 80 ಸಾವಿರ ಬೆಡ್ ಗಳೊಂದಿಗೆ 5 ಸಾವಿರ ಬೋಗಿಗಳು ಕೋವಿಡ್-19 ಕೇಂದ್ರಗಳಾಗಿ ಪರಿವರ್ತನೆ
* ಶ್ರಮಿಕ್ ವಿಶೇಷ ರೈಲುಗಳಲ್ಲಿ ಸಂಚರಿಸುವ ವಲಸೆ ಕಾರ್ಮಿಕರ ಪ್ರಯಾಣ ವೆಚ್ಚದಲ್ಲಿ ಶೇ. 85 ರಷ್ಟನ್ನು ಕೇಂದ್ರಸರ್ಕಾರ ಭರಿಸಲಿದ್ದು, ರಾಜ್ಯಗಳು ಶೇ. 15 ರಷ್ಟನ್ನು ಭರಿಸಲಿವೆ.
Advertisement