ಹೈದರಾಬಾದ್: ದೇಶದ ವಿವಿಧ ಪ್ರದೇಶಗಳಲ್ಲಿರುವ ತನ್ನ ಸ್ಥಿರಾಸ್ತಿಗಳನ್ನು ಹರಾಜು ಮೂಲಕ ಮಾರಾಟ ಮಾಡುವ ತಿರುಪತಿ-ತಿರುಮಲ ದೇವಸ್ಥಾನ ಮಂಡಳಿ(ಟಿಟಿಡಿ) ಪ್ರಸ್ತಾವನೆಯನ್ನು ತೆಲಂಗಾಣ ಬಿಜೆಪಿ ಭಾನುವಾರ ತೀವ್ರವಾಗಿ ಖಂಡಿಸಿದೆ.
ತನ್ನ ಸ್ಥಿರಾಸ್ತಿಗಳನ್ನು ಮಾರಾಟಮಾಡುವ ನಿರ್ಧಾರವನ್ನು ಟಿಟಿಡಿ ಕೂಡಲೇ ಹಿಂಪಡೆಯಬೇಕು ಹಾಗೂ ಟಿಟಿಡಿ ಆಸ್ತಿ ಪಾಸ್ತಿಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಂಡೆ ಸಂಜಯ್ ಕುಮಾರ್ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ. ಸ್ಥಿರಾಸ್ತಿಗಳನ್ನು ಮಾರಾಟ ಮಾಡಲು ನಿರ್ಧಾರ ಕೈಗೊಳ್ಳುವ ಮೂಲಕ ಟಿಟಿಡಿ ತಿರುಪತಿ ತಿಮ್ಮಪ್ಪನ ಭಕ್ತಾಧಿಗಳ ಭಾವನೆಗಳಿಗೆ ನೋವುಂಟುಮಾಡುತ್ತಿದೆಎಂದು ದೂರಿರುವ ಅವರು, ಟಿಟಿಡಿ ಆಸ್ತಿಗಳು ಅಥವಾ ಬೇರೇ ಯಾವುದೇ ಆಸ್ತಿ ಪಾಸ್ತಿಗಳ ಮಾರಾಟದ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು ಎಂದು ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರ ಪ್ರದೇಶ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ತಿರುಪತಿ ತಿಮ್ಮಪ್ಪನ ಭಕ್ತರು ಹಾಗೂ ಹಿಂದೂ ಸಂಘಟನೆಗಳು ರಾಜ್ಯ ಸರ್ಕಾರದ ನಿರ್ಧಾರದ ವಿರುದ್ದ ಜನಾಂದೋಲನ ನಡೆಸಲಿವೆ ಎಂದು ಅವರ ಎಚ್ಚರಿಕೆ ನೀಡಿದರು.
ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ತಮ್ಮ ರಾಜ್ಯಗಳನ್ನು ಅಲ್ಪಸಂಖ್ಯಾತರ ರಾಜ್ಯಗಳನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ
ಹಿಂದೂ ದೇಗುಲಗಳನ್ನು ಇಂತಹ ರಾಜಕಾರಣಿಗಳ ಕಪಿಮುಷ್ಠಿಯಿಂದ ನಾವು ರಕ್ಷಿಸಲು ಮುಂದಾಗಲಿದ್ದೇವೆ. ಕೋಟ್ಯಾಂತರ ಹಿಂದೂ ಜನರ ಭಾವನೆಗಳಿಗೆ ಅಪಮಾನ ಎಸಗುತ್ತಿರುವ ಹಿಂದೂ ವಿರೋಧಿ ರಾಜಕೀಯ ಶಕ್ತಿಗಳ ವಿರುದ್ದ ಬಿಜಿಪಿ ತನ್ನ ಹೋರಾಟ ಮುಂದುವರಿಸಲಿದೆ ಎಂದು ತಿಳಿಸಿದ್ದಾರೆ.
Advertisement