ನವದೆಹಲಿ: ಮುಸ್ಲಿಮರು ಸಂಭ್ರಮದಿಂದ ಆಚರಿಸುವ ರಂಜಾನ್ ಆಚರಣೆಗೆ ಈ ಬಾರಿ ಲಾಕ್'ಡೌನ್ ಕರಿನೆರಳು ಬಿದ್ದಿದ್ದು, ಎಲ್ಲೆಡೆ ಮಸೀದಿಗಳು ಬಂದ್ ಆಗಿರುವ ಪರಿಣಾಮ ಮುಸ್ಲಿಮರು ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಸಾಮಾನ್ಯವಾಗಿ ಮುಸ್ಲಿಮರು ರಂಜಾನ್ ಹಬ್ಬವನ್ನು ಉತ್ಸಾಹದಿಂದ ಆಚರಿಸಲು ಹಿಂದಿನ ದಿನದಂದು ಖರೀತಿಯಲ್ಲಿ ಮುಳುಗಿರುತ್ತಿದ್ದರು. ಬೆಂಗಳೂರು ನಗರದ ಶಿವಾಜಿನಗರ, ರಸೆಲ್ ಮಾರುಕಟ್ಟೆ, ಕೆ.ಆರ್.ಮಾರುಕಟ್ಟೆ ಹಾಗೂ ಜಯನಗರ ಸೇರಿದಂತೆ ವಿವಿಧೆಡೆ ಭರ್ಜರಿ ವ್ಯಾಪಾರ ವಹಿವಾಟು ನಡೆಯುತ್ತಿದ್ದವು. ಆದರೆ, ನಿನ್ನೆ ಕೊರೋನಾ ತಡೆಗೆ ಜಾರಿಗೊಳಿಸಿದ್ದ ಲಾಕ್'ಡೌನ್ ಪರಿಣಾಮವಾಗಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.
ಇದರೊಂದಿಗೆ ಹೊಸಬಟ್ಟೆ, ಒಣಹಣ್ಣುಗಳು ಖರೀದಿ ಸೇರಿದಂತೆ ಒಟ್ಟಾರೆ ಈದ್ ಉಲ್ ಫಿತ್ರ್ ಹಬ್ಬದ ಖರೀದಿಗೆ ಬ್ರೇಕ್ ಬಿದ್ದಂತಾಗಿದೆ.
ಹಬ್ಬಗಳಲ್ಲಿ ಬರ್ಜಿ ವಹಿವಾಟು ಮಾಡುತ್ತಿದ್ದ ವ್ಯಾಪಾರಸ್ಥರು ಕೂಡ ಖಾಲಿ ಕೈಯಲ್ಲಿ ಕೂರುವಂತಾಗಿದೆ. ಮತ್ತೊಂದೆಡೆ ಪ್ರತಿ ವರ್ಷ ಹಬ್ಬದ ದಿನದಂದು ಬಂಧಬಳಗ, ಸ್ನೇಹಿತರನ್ನು ಮನೆಗಳಿಗೆ ಆಹ್ವಾನಿಸಿ ಭೋಜನ ವ್ಯವಸ್ಥೆ ಮಾಡುತ್ತಿದ್ದರು. ಆದರೆ, ಈ ಬಾರಿ ಸರಳವಾಗಿ ಮನೆಯಲ್ಲಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಹಬ್ಬ ಆಚರಿಸಲು ಮುಸ್ಲಿಮರು ನಿರ್ಧರಿಸಿದ್ದಾರೆ.
ಈ ಬಾರಿ ಕೊರೋನಾ ಸೋಂಕು ಹರಡುವುದನ್ನು ತಡೆಯಲು ಸಾಮೂಹಿಕ ಪ್ರಾರ್ಥನೆ, ಮೆರವಣಿಗೆ ಎಲ್ಲವನ್ನೂ ನಿಷೇದಿರಲಾಗಿದ್ದು, ವಕ್ಶ್ ಮಂಡಳಿ ಈಗಾಗಲೇ ಎಲ್ಲಾ ಮಸೀದಿಗಳ ಮುಖ್ಯಸ್ಥರಿಗೆ ಸೂಚನೆ ನೀಡಿದೆ. ಅಲ್ಲದೆ, ಮುಸ್ಲಿಮರು ಕೂಡ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಅನುಸರಿಸುವುದಾಗಿ ತಿಳಿಸಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯ ಲಜ್ಪತ್ ನಗರ ಮಾರುಕಟ್ಟೆಯ ಮೆಹಂದಿ ಕಲಾವಿದೆಯೊಬ್ಬರು ಮಾತನಾಡಿ, ಲಾಕ್'ಡೌನ್ ಪರಿಣಾಮ ಸಾಕಷ್ಟು ಸಮಸ್ಯೆ ಎದುರಾಗುತ್ತಿದೆ. ಈ ಹಿಂದೆ ಹಬ್ಬದ ಹಿಂದಿನ ದಿನ ಸಾಕಷ್ಟು ಕೆಲಸ ಮಾಡುತ್ತಿದ್ದೆವು. ಗ್ರಾಹಕರೂ ಕೂಡ ಹೆಚ್ಚಾಗಿ ಬರುತ್ತಿದ್ದರು. ಈ ಬಾರಿ ಲಾಕ್ಡೌನ್ ಭಾರೀ ಹೊಡೆತ ನೀಡಿದೆ ಎಂದು ಹೇಳಿದ್ದಾರೆ.
ಈ ನಡುವೆ ರಾಂಚಿಯಲ್ಲಿರುವ ಮುಸ್ಲಿಂ ಬಾಂಧವರು ಮಾತನಾಡಿ, ಕೇಂದ್ರ ಸರ್ಕಾರ ಎಲ್ಲಾ ರೀತಿಯ ಮಾರ್ಗಸೂಚಿಗಳು ಹಾಗೂ ನಿಯಮಗಳಿಗೆ ನಾವು ಬದ್ಧರಾಗಿದ್ದು, ಎಲ್ಲಾ ನಿಯಮಗಳನ್ನು ಅನುಸರಿಸಿ ಹಬ್ಬವನ್ನು ಆಚರಿಸಲಾಗುತ್ತೆದ ಎಂದು ಹೇಳಿದ್ದಾರೆ.
ನಮ್ಮ ನಮ್ಮ ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸುತ್ತೇವೆ. ಈ ವೇಳೆ ಸಾಮಾಜಿಕ ಅಂತರವನ್ನೂ ಗಮನದಲ್ಲಿಟ್ಟುಕೊಂಡಿದ್ದೇವೆ. ಲಾಕ್'ಡೌನ್ ಮಾರ್ಗದರ್ಶನವನ್ನು ಅನುಸರಿಸುತ್ತೇವೆಂದು ತಿಳಿಸಿದ್ದಾರೆ.
Advertisement