ನವದೆಹಲಿ; ಕೊರೋನಾ ವೈರಸ್ ನಿಗ್ರಹಿಸುವಲ್ಲಿ ಸರ್ಕಾರ ಸರ್ವಸನ್ನದ್ಧವಾಗಿದ್ದು, ಶಾಶ್ವತವಾದ ಲಾಕ್'ಡೌನ್ ನಲ್ಲಿ ದೆಹಲಿ ಇರುವುದಿಲ್ಲ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಶನಿವಾರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿದೆ. ಇದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ, ಆತಂಕಪಡುವ ಅಗತ್ಯವಿಲ್ಲ. ವೈರಸ್ ಮಟ್ಟಹಾಕಲು ನಾವು ಸರ್ವಸನ್ನದ್ಧವಾಗಿದ್ದೇವೆಂಬ ಭರವಸೆಯನ್ನು ನಾನು ನೀಡುತ್ತೇನೆ. ನಾವು ಶಾಶ್ವತ ಲಾಕ್'ಡೌನ್ ನಲ್ಲಿರುವುದಿಲ್ಲ ಎಂದು ಹೇಳಿದ್ದಾರೆ.
ಪ್ರಸ್ತು ದೆಹಲಿಯಲ್ಲಿ ಪತ್ತೆಯಾಗಿರುವ ಎಲ್ಲಾ ಸೋಂಕಿತ ಪ್ರಕರಣಗಳ ಪೈಕಿ ಕೇವಲ 2100 ಮಂದಿ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಗಳಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರೆಗೂ ಆಸ್ಪತ್ರೆಗಳಲ್ಲಿ 6500 ಹಾಸಿಗೆಗಳು ಸಿದ್ಧವಾಗಿಯೇ ಇವೆ. ಮುಂದಿನ ವಾರ ಮತ್ತಷ್ಟು 9500 ಹಾಸಿಗೆಗಳು ಸಿದ್ಧವಾಗಲಿವೆ. ಇದೊಂದು ಹಿಸಾಸಕ್ತಿಯ ವಿಚಾರವಾಗಿದ್ದು, ಆತಂಕ ಪಡುವುದೇನೂ ಇಲ್ಲ. ಕೊರೋನಾ ನಿಬಾಯಿಸಲು ಸರ್ಕಾರ ನಾಲ್ಕು ಹಂತದ ಕ್ರಮಗಳನ್ನು ಕೈಗೊಂಡಿದೆ.
ಶಾಶ್ವತ ಲಾಕ್'ಡೌನ್ ಸಮಸ್ಯೆಗೆ ಪರಿಹಾರವಲ್ಲ. ಮುಂಜಾಗ್ರತಾ ಕ್ರಮಗಳೊಂದಿಗೆ ನಾವು ಮುಂದಕ್ಕೆ ಸಾಗಬೇಕಿದೆ. ಕೊರೋನಾ ಜೊತೆಗೆ ಬದುಕುವುದನ್ನು ನಾವು ರೂಢಿ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರರಾಜಧಾನಿಯಲ್ಲಿ ಈ ವರೆಗೂ 17,000 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 398 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.
Advertisement