ತಿರುವನಂತಪುರ: ಕೇರಳ ಪೊಲೀಸ್ ಪಡೆಯ ಥಂಡರ್ ಬೋಲ್ಟ್ ಕಮಾಂಡೋ ನಡೆಸಿದ ಎನ್ ಕೌಂಟರ್ ನಲ್ಲಿ ಒಬ್ಬ ಮಾವೋವಾದಿ ಬಲಿಯಾಗಿದ್ದಾನೆ.
ಕೇರಳದ ವಾಯನಾಡ್ ಜಿಲ್ಲೆಯ ಬಣಾಸುರಮನೆ ಬಳಿಯ ಅರಣ್ಯ ಪ್ರದೇಶದಲ್ಲಿ ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಥಂಡರ್ ಬೋಲ್ಟ್ ಕಮಾಂಡೊಗಳು ಗುಸ್ತು ತಿರುಗುತ್ತಿದ್ದು ಈ ವೇಳೆ ಮೂವರು ಶಂಕಿತ ಮಾವೋವಾದಿಗಳು ಪ್ರತ್ಯಕ್ಷರಾಗಿದ್ದಾರೆ.
ಈ ವೇಳೆ ಕಮಾಂಡೋ ಹಾಗೂ ಮಾವೋವಾದಿಗಳ ನಡುವೆ ಗುಂಡಿನ ಚಕಮಿಕಿ ನಡೆದಿದ್ದು ಇದರಲ್ಲಿ ಓರ್ವ ಮಾವೋವಾದಿ ಹತ್ಯೆಯಾಗಿದ್ದಾನೆ. ಇನ್ನುಳಿದಂತೆ ಇಬ್ಬರು ಮಾವೋವಾದಿಗಳ ಅಲ್ಲಿಂದ ಪರಾರಿಯಾಗಿದ್ದಾರೆ.
ಕಮಾಂಡೋ ಪಡೆಗಳು ಘಟನಾ ಸ್ಥಳದಲ್ಲಿ ಕೆಲ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಮೃತ ಮಾವೋವಾದಿ ಗುರುತು ಪತ್ತೆಯಾಗಿಲ್ಲ.
ಇನ್ನು ಕಳೆದ ವರ್ಷ ವಯನಾಡಿನ ವೈತಿರಿ ಬಳಿಯ ಲಕ್ಕಿಡಿಯ ರೆಸಾರ್ಟ್ ನಲ್ಲಿ ಮಾವೋವಾದಿ ಸ್ಥಳೀಯ ಮುಖಂಡ ಸಿಪಿ ಜಲೀಲ್ ನನ್ನು ಹತ್ಯೆ ಮಾಡಲಾಗಿದ್ದು ಅದು ನಕಲಿ ಎನ ಕೌಂಟರ್ ಎಂದು ಆರೋಪಿಸಲಾಗಿತ್ತು. ಅದಾದ ನಂತರ ಈ ಹೊಸ ಎನ್ ಕೌಂಟರ್ ನಡೆದಿದೆ.
ಎನ್ ಕೌಂಟರ್ ಕುರಿತಂತೆ ಕಾಂಗ್ರೆಸ್ ನಕಲಿ ಎನ್ ಕೌಂಟರ್ ಮೂಲಕ ಪಿಣರಾಯಿ ಸರ್ಕಾರ ಮಾವೋವಾದಿಗಳನ್ನು ಹತ್ಯೆ ಮಾಡಿಸುತ್ತಿದೆ ಎಂದು ಆರೋಪಿಸಿದೆ.
Advertisement