ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ "ಕಳೆದುಹೋದ ವೈಭವ"ವನ್ನು ಪುನಃಸ್ಥಾಪಿಸುವ ಅವಶ್ಯಕತೆಯಿದೆ ಎಂದು ಒತ್ತಿ ಹೇಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯದಲ್ಲಿ ಪ್ರಸ್ತುತ "ಓಲೈಕೆ ರಾಜಕಾರಣದಿಂದ" ರಾಷ್ಟ್ರದ ಆಧ್ಯಾತ್ಮಿಕ ಪ್ರಜ್ಞೆಯನ್ನು ಎತ್ತಿಹಿಡಿಯುವ ತನ್ನ ಹಳೆಯ ಸಂಪ್ರದಾಯಕ್ಕೆ ಧಕ್ಕೆಯಾಗಿದೆ ಎಂದು ಶುಕ್ರವಾರ ಹೇಳಿದ್ದಾರೆ.
ಎರಡು ದಿನಗಳ ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಅಮಿತ್ ಶಾ ಅವರು ಇಂದು ದಕ್ಷಿಣೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಮಿತ್ ಶಾ, "ಇಡೀ ರಾಜ್ಯ, ದೇಶ ಮತ್ತು ಅದರ ಜನರ ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸಿದ್ದೇನೆ. (ಪ್ರಧಾನಿ) ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಜಗತ್ತಿನಲ್ಲಿ ತನ್ನ ವೈಭವದ ಸ್ಥಾನವನ್ನು ಉಳಿಸಿಕೊಳ್ಳಬೇಕೆಂದು ನಾವು ಪ್ರಾರ್ಥಿಸಿದ್ದೇವೆ" ಎಂದರು.
ಇದೇ ವೇಳೆ ಪರೋಕ್ಷವಾಗಿ ಪಶ್ಚಿಮ ಬಂಗಾಳದ ದೀದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅಮಿತ್ ಶಾ, ಓಲೈಕೆ ರಾಜಕಾರಣದಿಂದ ಬಂಗಾಳದ ಅದ್ಭುತ ಸಂಪ್ರದಾಯಕ್ಕೆ ಧಕ್ಕೆಯಾಗಿದೆ. ರಾಜ್ಯದ ವೈಭವವನ್ನು ಮರಳಿ ತರಲು ಬಂಗಾಳದ ಜನರು ಎಚ್ಚೆತ್ತುಕೊಳ್ಳಬೇಕು ಮತ್ತು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲು ನಾನು ಈ ಮೂಲಕ ಕರೆ ನೀಡುತ್ತೇನೆ" ಎಂದರು.
ಬಂಗಾಳವು ಚೈತನ್ಯ ಮಹಾಪ್ರಭು, ಶ್ರೀ ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರಂತಹ ಮಹಾನ್ ವ್ಯಕ್ತಿಗಳು ಜನಿಸಿದ ನಾಡು. ಈ ರಾಜ್ಯ ಇಡೀ ದೇಶದಲ್ಲಿಯೇ ಆಧ್ಯಾತ್ಮಿಕ ಜಾಗೃತಿಯ ಕೇಂದ್ರವಾಗಿತ್ತು. ಅದನ್ನು ಕಾಪಾಡಿಕೊಂಡು ಹೋಗಬೇಕು ಎಂದರು.
ಇನ್ನು ಕೇಂದ್ರ ಗೃಹ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಆಡಳಿತರೂಢ ಟಿಎಂಸಿ, ಅಮಿತ್ ಶಾ ಅವರು ಆದಿವಾಸಿಗಳ ಮನೆ ತೆರಳಿ ಭೋಜನ ಸೇವಿಸಿರುವುದು ಓಲೈಕೆಯ ರಾಜಕಾರಣವೇ ಹೊರತು ಬೇರೇನೂ ಅಲ್ಲ. ನಾವು ಇಲ್ಲಿ ಎಲ್ಲರೂ ಅನ್ಯೋನ್ಯವಾಗಿ ಇದ್ದೇವೆ. ಅವರು ಆರೋಪಿಸಿರುವಂತೆ ಯಾವು ದೌರ್ಜನ್ಯವೂ ನಡೆಯುತ್ತಿಲ್ಲ ಎಂದು ತಿರುಗೇಟು ನೀಡಿದೆ.
Advertisement