ನವದೆಹಲಿ: ಕರ್ನಾಟಕದ ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ದೇಶದ 10 ರಾಜ್ಯಗಳ ಒಟ್ಟು 54 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದಿದ್ದ ಮತದಾನದ ಫಲಿತಾಂಶ ಇಂದು ಪ್ರಕಟವಾಗುತ್ತಿದ್ದು, ಗುಜರಾತ್, ಮಧ್ಯ ಪ್ರದೇಶ, ಕರ್ನಾಟಕದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೆ ಹರ್ಯಾಣದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
ಗುಜರಾತ್ ನ 8 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ ಪಕ್ಷ ಒಂದೇ ಒಂದು ಕ್ಷೇತ್ರದಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಗುಜರಾತ್ ನ ಅಬ್ದಾಸಾ (ಪ್ರಧುಮಾನ್ ಸಿಂಹ್ ಜಡೇಜಾ), ಲಿಂಬ್ಡಿ (ಕಿರೀಟ್ ಸಿಂಗ್ ರಾಣಾ) ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ನ ಜಯಂತಿಲಾಲ್ ಪಟೇಲ್ ಅವರು ಮಾರ್ಬಿ ಕ್ಷೇತ್ರದಲ್ಲಿ 1500 ಮತಗಳ ಅಂತದ ಮುನ್ನಡೆ ಪಡೆದಿದ್ದಾರೆ. ನವೆಂಬರ್ 3 ರಂದು ಅಬ್ದಾಸಾ (ಕಚ್), ಲಿಂಬಿ (ಸುರೇಂದ್ರನಗರ), ಮೊರ್ಬಿ (ಮೊರ್ಬಿ ಜಿಲ್ಲೆ), ಧಾರಿ (ಅಮ್ರೆಲಿ), ಗಡಾಡಾ (ಬೊಟಾಡ್), ಕಾರ್ಜನ್ (ವಡೋದರಾ), ಡಾಂಗ್ (ಡಂಗ್), ಕಪ್ರಡಾ (ವಲ್ಸಾದ್) ನಲ್ಲಿ ನಡೆದ ಉಪಚುನಾವಣೆ ಮತದಾನದಲ್ಲಿ ಶೇ .60.75 ರಷ್ಟು ಮತದಾನವಾಗಿತ್ತು. ಈ ಎಂಟು ಸ್ಥಾನಗಳಲ್ಲಿ 81 ಅಭ್ಯರ್ಥಿಗಳು ಉಪಚುನಾವಣಾ ಕಣದಲ್ಲಿದ್ದಾರೆ.
ಮಧ್ಯಪ್ರದೇಶದ 28 ಕ್ಷೇತ್ರಗಳಲ್ಲಿ 8ರಲ್ಲಿ ಬಿಜೆಪಿ ಮುನ್ನಡೆ
ಇನ್ನು ಮಧ್ಯಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ 28 ವಿಧಾನಸಭಾ ಕ್ಷೇತ್ರಗಳ ಪೈಕಿ 6 ರಲ್ಲಿ ಮುನ್ನಡೆ ಪಡೆದಿದೆ. ಕಾಂಗ್ರೆಸ್ ಎರಡು ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಬಿಜೆಪಿಯ ತುಳಸಿರಾಮ್ ಸಿಲಾವತ್ ಸ್ಯಾನ್ವರ್ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದು, ರಾಜವರ್ಧನ್ ಸಿಂಗ್ ದಟ್ಟಿಗಾಂವ್ ಬದ್ನವಾರ್ನಲ್ಲಿ, ಮುಂಗೋಲಿಯ ಬ್ರಜೇಂದ್ರ ಸಿಂಗ್ ಯಾದವ್, ಬಯೋರಾದ ನಾರಾಯಣ್ ಸಿಂಗ್ ಪವಾರ್, ಸುವಸಾರಾದ ಹರ್ದೀಪ್ ಸಿಂಗ್ ಡಂಗ್, ಮತ್ತು ಅಶೋಕ್ ನಗರದಿಂದ ಅಜೋಕ್ ನಗರದಿಂದ ಜಜ್ಪಾಲ್ ಸಿಂಗ್ ಜಜ್ಜಿ ತಮ್ಮ ಎದುರಾಳಿಗಳ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ. ಅಗಾರ್ ಮತ್ತು ಹಟ್ಪಿಪಾಲ್ಯಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನ ವಿಪಿನ್ ವಾಂಖೆಡೆ ಮತ್ತು ರಾಜೇಂದ್ರ ಸಿಂಗ್ ಬಘೇಲಾ ಮುನ್ನಡೆ ಸಾಧಿಸಿದ್ದಾರೆ. ಮಧ್ಯ ಪ್ರದೇಶದಲ್ಲಿ ಸರ್ಕಾರ ಉಳಿಸಿಕೊಳ್ಳಲು ಈ ಉಪ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 8 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕಿದೆ. ಮಧ್ಯ ಪ್ರದೇಶದಲ್ಲಿ ಮ್ಯಾಜಿಕ್ ನಂಬರ್ 229 ಆಗಿದೆ. ಪ್ರಸ್ತುತ ಬಿಜೆಪಿ ಬಳಿ 107 ಶಾಸಕರ ಬೆಂಬಲವಿದ್ದು, ಕಾಂಗ್ರೆಸ್ 87 ಶಾಸಕರನ್ನು ಹೊಂದಿದೆ.
ಬರೋಡಾದಲ್ಲಿ ಕಾಂಗ್ರೆಸ್ ಮುನ್ನಡೆ, ಬಿಜೆಪಿಯ ಯೋಗೀಶ್ವರ್ ದತ್ ಹಿನ್ನಡೆ
ಹರ್ಯಾಣದ ಬರಾಡಾದಲ್ಲಿ ಈ ವರೆಗೂ 20 ಸುತ್ತಿನ ಮತಎಣಿಕೆ ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಇಂದು ರಾಜ್ ನರ್ವಾಲ್ ಅವರು ಮುನ್ನಡೆ ಪಡೆದಿದ್ದು, ಬಿಜೆಪಿ ಅಭ್ಯರ್ಥಿ ಯೋಗೀಶ್ವರ್ ದತ್ ಹಿನ್ನಡೆ ಅನುಭವಿಸಿದ್ದಾರೆ. ಇಲ್ಲಿನ ಕಾಂಗ್ರೆಸ್ ಶಾಸಕರಾಗಿದ್ದ ಕಿಶನ್ ಹೂಡಾ ನಿಧನದಿಂದಾಗಿ ಉಪ ಚುನಾವಣೆ ನಡೆಯುತ್ತಿದೆ.
ಕರ್ನಾಟಕ: ಶಿರಾ ಮತ್ತು ಆರ್ ಆರ್ ನಗರದಲ್ಲಿ ಬಿಜೆಪಿ ಮುನ್ನಡೆ
ಇನ್ನು ಕರ್ನಾಟಕದ ಆರ್ ಆರ್ ನಗರ ಮತ್ತು ಶಿರಾ ದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಮುನಿರತ್ನ ಮತ್ತು ಸಿಎಂ ರಾಜೇಶ್ ಗೌಡ ಮುನ್ನಡೆ ಸಾಧಿಸಿದ್ದಾರೆ. ಆರ್ ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಮುನಿರತ್ನ ಅವರು ಮುನ್ನಡೆ ಸಾಧಿಸಿದ್ದು, ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ಹಿನ್ನಡೆ ಸಾಧಿಸಿದ್ದಾರೆ. ಇತ್ತ ಶಿರಾದಲ್ಲೂ ಬಿಜೆಪಿ ಅಭ್ಯರ್ಥಿ ಸಿಎಂ ರಾಜೇಶ್ ಗೌಡ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಟಿಬಿ ಜಯಚಂದ್ರ ಮತ್ತು ಜೆಡಿಎಸ್ ಅಮ್ಮಾಜಮ್ಮ ಹಿನ್ನಡೆಯಲ್ಲಿದ್ದಾರೆ. ಈ ಶಿರಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಯಗಳಿಸಿದ್ದೇ ಆದರೆ ಇಲ್ಲಿ ಮೊದಲ ಬಾರಿಗೆ ಬಿಜೆಪಿ ಜಯಗಳಿಸಿದಂತಾಗುತ್ತದೆ.
ಇದಲ್ಲದೆ, ಒಡಿಶಾ, ಜಾರ್ಖಂಡ್ ನಲ್ಲೂ ಬಿಜೆಪಿ ಮುನ್ನಡೆ ಸಾಧಿಸಿದ್ದು, ಛತ್ತೀಸ್ ಘಡದ ಮಾರ್ಹಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. ನಾಗಾಲ್ಯಾಂಡ್ ನ ದಕ್ಷಿಣ ಅಂಗಾಮಿ ಮತ್ತು ಪುಂಗ್ರೊ ಕಿಫೈರ್ ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.
Advertisement