3 ಹಂತಗಳಲ್ಲಿ ಉಭಯ ಸೇನಾಪಡೆಗಳ ಹಿಂತೆಗೆತಕ್ಕೆ ಭಾರತ-ಚೀನಾ ಒಪ್ಪಿಗೆ: ಚಟುವಟಿಕೆಗಳ ಮೇಲೆ ಸೂಕ್ಷ್ಮ ನಿಗಾ!

ಮಹತ್ವದ ಬೆಳವಣಿಗೆಯಲ್ಲಿ ಭಾರತ-ಚೀನಾ ಗಡಿ ಕ್ಯಾತೆ ಕೊನೆಯಾಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದ್ದು, ಈಶಾನ್ಯ ಲಡಾಖ್ ಸೆಕ್ಟರ್ ನಿಂದ ಮೂರು ಹಂತಗಳಲ್ಲಿ ವಾಪಸ್ ಸೇನಾ ಪಡೆಗಳ ಹಿಂತೆಗೆಯುವಿಕೆಗೆ ಪರಸ್ಪರ ಒಪ್ಪಿಗೆ ಸೂಚಿಸಲಾಗಿದೆ. 
ಲಡಾಖ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇನಾ ವಾಹನ (ಸಂಗ್ರಹ ಚಿತ್ರ)
ಲಡಾಖ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇನಾ ವಾಹನ (ಸಂಗ್ರಹ ಚಿತ್ರ)

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಭಾರತ-ಚೀನಾ ಗಡಿ ಕ್ಯಾತೆ ಕೊನೆಯಾಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದ್ದು, ಈಶಾನ್ಯ ಲಡಾಖ್ ಸೆಕ್ಟರ್ ನಿಂದ ಮೂರು ಹಂತಗಳಲ್ಲಿ ವಾಪಸ್ ಸೇನಾ ಪಡೆಗಳ ಹಿಂತೆಗೆಯುವಿಕೆಗೆ ಪರಸ್ಪರ ಒಪ್ಪಿಗೆ ಸೂಚಿಸಲಾಗಿದೆ. 

ಈ ವರ್ಷದ ಏಪ್ರಿಲ್-ಮೇ ತಿಂಗಳಗೂ ಮುನ್ನ ಇದ್ದ ಪ್ರದೇಶಗಳಿಗೇ ಉಭಯ ಸೇನಾಪಡೆಗಳನ್ನು ಹಿಂತಿರುಗಿಸಲು ನಿರ್ಧರಿಸಲಾಗಿದೆ.

ನ.06 ರಂದು ಚುಶುಲ್ ನಲ್ಲಿ ನಡೆದ 8 ನೇ ಕಾರ್ಪ್ಸ್ ಕಮಾಂಡರ್ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಮೂರು ಹಂತಗಳಲ್ಲಿ ಸೇನಾ ಪಡೆಗಳ ಹಿಂತೆಗೆತ ಪ್ರಕ್ರಿಯೆ ನಡೆಯಲಿದ್ದು, ಮಾತುಕತೆ ನಡೆದ ಒಂದು ವಾರಗಳ ಅವಧಿಯಲ್ಲಿ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ.

ಉಭಯ ಪಡೆಗಳೂ ಎಲ್ಎಸಿಯಿಂದ ಮುಂದೆ ಬಂದಿದ್ದ ಪ್ರದೇಶಗಳಿಂದ ಶಸ್ತ್ರಸಜ್ಜಿತ ಸಿಬ್ಬಂದಿಗಳು, ಟ್ಯಾಂಕ್ ಗಳು, ಶಸ್ತ್ರಸಜ್ಜಿತ ವಾಹಗಳೊಂದಿಗೇ ಹಿಂತಿರುಗಲು ಭಾರತ-ಚೀನಾ ಪರಸ್ಪರ ನಿರ್ಧರಿಸಿದೆ.

ನ.06 ರಂದು ನಡೆದ ಮಾತುಕತೆಯಲ್ಲಿ ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ನವೀನ್ ಶ್ರೀವಾಸ್ತವ ಹಾಗೂ ಸೇನಾ ಕಾರ್ಯಾಚರಣೆಗಳ ಪ್ರಧಾನ ನಿರ್ದೇಶಕ ಬ್ರಿಗೇಡಿಯ ಘಾಯ್ ಉಪಸ್ಥಿತರಿದ್ದರು, ಈ ವೇಳೆ ರೂಪಿಸಲಾದ ಯೋಜನೆಯ ಪ್ರಕಾರ ಟ್ಯಾಂಕ್ ಗಳು, ಶಸ್ತ್ರ ಸಜ್ಜಿತ ಸಿಬ್ಬಂದಿಗಳು ಒಂದು ದಿನದಲ್ಲಿ ವಾಪಸ್ ತೆರಳಬೇಕಿದೆ.

2 ನೇ ಹಂತದಲ್ಲಿ ಪ್ಯಾಂಗಾಂಗ್ ಸರೋವರದ ಉತ್ತರ ಭಾಗದಲ್ಲಿ ಉಭಯ ಸೇನೆಗಳು ದಿನವೊಂದಕ್ಕೆ ಶೇ.30 ರಷ್ಟು ಸಿಬ್ಬಂದಿಗಳಂತೆ ಒಟ್ಟು ಮೂರು ದಿನಗಳ ಕಾಲ ವಾಪಸ್ ಕರೆಸಿಕೊಳ್ಳಲಿವೆ. ಈ ವೇಳೆ ಭಾರತೀಯ ಪಡೆಗಳು ಧನ್ ಸಿಂಗ್ ಥಾಪ ಪೋಸ್ಟ್ ಗೆ ವಾಪಸ್ಸಾಗಲಿವೆ. ಚೀನಾದ ಪಡೆ ಫಿಂಗರ್ 8 ಕ್ಕೆ ಪೂರ್ವದ ತಮ್ಮ ಹಿಂದಿನ ಸ್ಥಿತಿಗೆ ಮರಳಲಿದ್ದಾರೆ.

ಮೂರನೇ ಹಾಗೂ ಕೊನೆಯ ಪ್ರಕ್ರಿಯೆಯಲ್ಲಿ ಉಭಯ ಪಡೆಗಳು ಪ್ಯಾಂಗಾಂಗ್ ಸರೋವರದ ದಕ್ಷಿಣ ತೀರದಿಂದ ಮುಂದಿನಿಂದ ತಮ್ಮ ಸಿಬ್ಬಂದಿಗಳನ್ನು ಹಿಂದಕ್ಕೆ ಕರೆಸಿಕೊಳ್ಳಲಿದ್ದಾರೆ. ಈ ಪೈಕಿ ಚುಶುಲ್ ಹಾಗೂ ರೆಝಾಂಗ್ ಲಾ ಪ್ರದೇಶವೂ ಸೇರ್ಪಡೆಗೊಳ್ಳಲಿವೆ.

ಸೇನಾ ಪಡೆಗಳ ಹಿಂತೆಗೆತದ ಪ್ರಕ್ರಿಯೆಗಳ ಮೇಲೆ ಸೂಕ್ಷ್ಮವಾಗಿ ನಿಗಾವಹಿಸಲು ಉಭಯ ರಾಷ್ಟ್ರಗಳೂ ಒಪ್ಪಿಗೆ ಸೂಚಿಸಿದ್ದು, ಇದಕ್ಕಾಗಿ ನಿಯೋಗ ಸಭೆಗಳನ್ನು ಹಾಗೂ ಮಾನವ ರಹಿತ ವೈಮಾನಿಕ ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.

ಚೀನಾ ವಿಶ್ವಾಸಘಾತುಕತನಕ್ಕೆ ಖ್ಯಾತಿ ಪಡೆದಿದ್ದು ಭಾರತ ಈ ಬಾರಿ ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದೆ.

ಗಡಿಯಲ್ಲಿ ಚೀನಾದ ಕ್ಯಾತೆಗೆ ಸಮರ್ಥ ಉತ್ತರ ನೀಡಿದ್ದ ಭಾರತೀಯ ಪಡೆಗಳು ಆಯಕಟ್ಟಿನ ಗುಡ್ಡಗಳನ್ನು ವಶಪಡಿಸಿಕೊಂಡು ಚೀನಾಗೆ ಬಲವಾದ ಪೆಟ್ಟು ನೀಡಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com