ನವದೆಹಲಿ: ಪೂರ್ವ ಲಡಾಕ್ ನಲ್ಲಿ ಗಡಿ ವಾಸ್ತವ ರೇಖೆಯ ಘರ್ಷಣೆಪೀಡಿತ ಪ್ರದೇಶದಿಂದ ಸೇನೆಯನ್ನು ಹಿಂಪಡೆಯಲು ಭಾರತ ಮತ್ತು ಚೀನಾ ಸರ್ಕಾರಗಳು ಒಪ್ಪಿಕೊಂಡಿವೆ ಎಂಬ ಸುದ್ದಿ ಹರಿದಾಡುತ್ತಿರುವುದರ ಮಧ್ಯೆ ಮಾತುಕತೆ ಮುಂದುವರಿದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ಲಡಾಕ್ ಸಂಘರ್ಷದ ಬಗ್ಗೆ, ಬೆಳವಣಿಗೆಗಳ ಬಗ್ಗೆ ಏನಾದರೂ ಹಂಚಿಕೊಳ್ಳಬೇಕು ಎನಿಸಿದರೆ ನಾವು ಹೇಳುತ್ತೇವೆ. ಮಾತುಕತೆ, ಚರ್ಚೆ ಮುಂದುವರಿದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ಅನುರಾಗ್ ಶ್ರೀವಾಸ್ತವ ತಿಳಿಸಿದ್ದಾರೆ.
ಮೊನ್ನೆ ಬುಧವಾರ ಸರ್ಕಾರದ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಸೇನಾಪಡೆಯನ್ನು ಹಿಂಪಡೆಯಲು ಭಾರತ ಮತ್ತು ಚೀನಾ ವಿಸ್ತಾರವಾಗಿ ಮೂರು ಹಂತಗಳ ಪ್ರಕ್ರಿಯೆಗೆ ಒಪ್ಪಿಕೊಂಡಿದ್ದು, ಕಾಲಾನುಕ್ರಮದಲ್ಲಿ ಘರ್ಷಣೆಪೀಡಿತ ಪ್ರದೇಶದಿಂದ ಸಂಪೂರ್ಣವಾಗಿ ಸೇನೆ ಮತ್ತು ಶಸ್ತ್ರಾಸ್ತ್ರಗಳನ್ನು ಹಿಂಪಡೆಯಲು ಮುಂದಾಗಿವೆ.
ಮೊನ್ನೆ ನವೆಂಬರ್ 6ರಂದು ನಡೆದ ಭಾರತ-ಚೀನಾ ಮಧ್ಯೆ 8ನೇ ಸುತ್ತಿನ ಉನ್ನತ ಮಟ್ಟದ ಕಮಾಂಡರ್ ಮಾತುಕತೆಯ ವೇಳೆ ಪ್ರಸ್ತಾವನೆಯನ್ನು ತೀವ್ರವಾಗಿ ಚರ್ಚಿಸಲಾಗಿತ್ತು. ಮೊನ್ನೆಯ ಮಾತುಕತೆ ಚುಶುಲ್ ನಲ್ಲಿ ಗಡಿ ವಾಸ್ತವ ರೇಖೆಯ ಭಾರತದ ಕಡೆಯಲ್ಲಿ ನಡೆದಿತ್ತು.
ಮೊನ್ನೆ ನಡೆದ ಮಾತುಕತೆ ಸಹಜವಾಗಿ ಸಾಗಿತು. ಎರಡೂ ಕಡೆಯಿಂದ ಭಾರತ-ಚೀನಾ ಗಡಿ ಪ್ರದೇಶಗಳ ಪಶ್ಚಿಮ ವಲಯದಲ್ಲಿ ಸೇನೆಯನ್ನು ಹಿಂಪಡೆಯುವ ಬಗ್ಗೆ ಅಭಿಪ್ರಾಯಗಳನ್ನು ಆಳವಾಗಿ ಮತ್ತು ರಚನಾತ್ಮಕವಾಗಿ ಚರ್ಚೆ ನಡೆಸಲಾಯಿತು ಎಂದು ಹೇಳಿದ್ದಾರೆ.
ಪೂರ್ವ ಲಡಾಖ್ನ ವಿವಿಧ ಪರ್ವತ ಪ್ರದೇಶಗಳಲ್ಲಿ ಶೂನ್ಯ ಮಟ್ಟದ ತಾಪಮಾನ ಪರಿಸ್ಥಿತಿಗಳಲ್ಲಿ ಸುಮಾರು 50,000 ಭಾರತೀಯ ಸೇನಾ ಪಡೆಗಳನ್ನು ಪ್ರಸ್ತುತ ಉನ್ನತ ಮಟ್ಟದ ಯುದ್ಧ ಸನ್ನದ್ಧತೆಯಲ್ಲಿ ನಿಯೋಜಿಸಲಾಗಿದೆ. ಚೀನಾ ಕೂಡ ಸಮಾನ ಸಂಖ್ಯೆಯ ಸೈನಿಕರನ್ನು ನಿಯೋಜಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡೂ ದೇಶಗಳ ಸೇನೆಗಳು ಈ ಗಡಿಭಾಗದಲ್ಲಿ ಕಳೆದ ಮೇ ತಿಂಗಳಿನಿಂದ ನಿಯೋಜನೆಗೊಂಡಿವೆ.
Advertisement