ರಾಜಧಾನಿ ದೆಹಲಿಯಲ್ಲಿ ಮತ್ತಿಬ್ಬರು ಜೈಷ್ ಉಗ್ರರ ಬಂಧನ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಇಬ್ಬರು ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ.
ಶಂಕಿತ ಉಗ್ರರರ ಬಂಧಿಸಿದ ಪೊಲೀಸರು
ಶಂಕಿತ ಉಗ್ರರರ ಬಂಧಿಸಿದ ಪೊಲೀಸರು

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಇಬ್ಬರು ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ.

ದೆಹಲಿ ವಿಶೇಷ ಪೊಲೀಸ್ ಪಡೆ ಕಾರ್ಯಾಚರಣೆ ನಡೆಸಿ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದೆ. ದೆಹಲಿಯ ಸಾರೈ ಕೇಲ್ ಖಾನ್ ಬಳಿ ಸಿಕ್ಕಿಬಿದ್ದಿರುವ ಇಬ್ಬರು ಶಂಕಿತ ಉಗ್ರರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಈ ಕುರಿತು ದೆಹಲಿ ಪೊಲೀಸರು ಮಾಹಿತಿ ನೀಡಿದ್ದು, ಸಾರೈ  ಕೇಲ್ ಖಾನ್‍ನ ಮಿಲೇನಿಯಂ ಪಾರ್ಕ್ ಬಳಿ ಸೋಮವಾರ ರಾತ್ರಿ 10.15ರ ಸುಮಾರಿಗೆ ಬಂಧಿಸಲಾಗಿದೆ. ಇಬ್ಬರು ಉಗ್ರರು ಜಮ್ಮು ಕಾಶ್ಮೀರದ ಮೂಲದವರಾಗಿದ್ದು, ಬಂಧಿತರಿಂದ 2 ಸೆಮಿ-ಆಟೋಮೆಟಿಕ್ ಪಿಸ್ತೂಲು ಹಾಗೂ 10 ಜೀವಂತ ಕಾರ್ಟ್‍ರಿಡ್ಜ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಶಂಕಿತರು ಜಮ್ಮು ಖಾಶ್ಮೀರದ ನಿವಾಸಿಗಳಾಗಿದ್ದು, ಬರಾಮುಲ್ಲಾದ ಪಾಲ ಮೊಹಲ್ಲಾ ನಿವಾಸಿ ಸನಾವುಲ್ಲಾ ಮಿರ್ ಪುತ್ರ 22 ವರ್ಷದ ಅಬ್ದುಲ್ ಲತಿಫ್, ಕುಪ್ವಾರಾದ ಹಾತ್‍ಮುಲ್ಲಾ ಗ್ರಾಮದ ಬಷೀರ್ ಅಹ್ಮದ್ ಪುತ್ರ ಅಶ್ರಫ್ ಖತನಾ(20) ಎಂದು ಗುರುತಿಸಲಾಗಿದೆ. ಇಬ್ಬರು ಉಗ್ರರು ಈ ಹಿಂದೆ ಪಾಕಿಸ್ತಾನ ಆಕ್ರಮಿತ  ಕಾಶ್ಮೀರಕ್ಕೆ ತೆರಳಲು ಯತ್ನಿಸಿದ್ದರು. ಇದನ್ನು ಭಾರತೀಯ ಸೇನೆ ವಿಫಲಗೊಳಿಸಿತ್ತು. ಹೀಗಾಗಿ ದೆಹಲಿಯಲ್ಲಿ ದಾಳಿ ನಡೆಸಿದ ಬಳಿಕ ನೇಪಾಳ ಮಾರ್ಗವಾಗಿ ಪಿಒಕೆಗೆ ತೆರಳಲು ಸಂಚು ರೂಪಿಸಿದ್ದರು. ಈ ನಡುವೆ ಆಗಸ್ಟ್‍ನಲ್ಲಿ ದೆಹಲಿ ಪೊಲೀಸರು ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು ಬಂಧಿಸುವ ಮೂಲಕ ಇಂತಹದ್ದೇ  ಭಯೋತ್ಪಾದಕ ದಾಳಿಯನ್ನು ವಿಫಲಗೊಳಿಸಿದ್ದರು. ಈ ವೇಳೆ ಧೌಲಾ ಕುವಾನ್ ಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಿದ್ದರು. ಬಂಧನದ ಬಳಿಕ 15 ಕೆ.ಜಿ. ಐಇಡಿಯನ್ನು ವಶಪಡಿಸಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com