ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಏಕೆ ಎಚ್ಚೆತ್ತುಕೊಳ್ಳಲಿಲ್ಲ?: ದೆಹಲಿ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ರಾಷ್ಟ್ರ ರಾಜಧಾನಿಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಮತ್ತೆ ಏರಿಕೆಯಾಗುತ್ತಿದ್ದರೂ ನೀವು ಏಕೆ ಎಚ್ಚೆತ್ತುಕೊಳ್ಳಲಿಲ್ಲ? ಎಂದು ದೆಹಲಿ ಹೈಕೋರ್ಟ್ ಗುರುವಾರ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಮತ್ತೆ ಏರಿಕೆಯಾಗುತ್ತಿದ್ದರೂ ನೀವು ಏಕೆ ಎಚ್ಚೆತ್ತುಕೊಳ್ಳಲಿಲ್ಲ? ಎಂದು ದೆಹಲಿ ಹೈಕೋರ್ಟ್ ಗುರುವಾರ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಕೋವಿಡ್- 19 ಪರೀಕ್ಷೆ ಪ್ರಮಾಣ ಹೆಚ್ಚಿಸಬೇಕು ಎಂದು ಕೋರಿ ವಕೀಲ ರಾಕೇಶ್ ಮಲ್ಹೋತ್ರಾ ಅವರು ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ನ್ಯಾಯಾಮೂರ್ತಿಗಳಾದ ಹಿಮಾ ಕೊಹ್ಲಿ, ಸುಬ್ರಮೋನಿಯಂ ಪ್ರಸಾದ್ ಅವರ ಪೀಠ, ಕಳೆದ 18 ದಿನಗಳಲ್ಲಿ ಕೋವಿಡ್ -19 ನಿಂದ ಪ್ರಾಣ ಕಳೆದುಕೊಂಡವರ ಸಂಬಂಧಕರಿಗೆ ನೀವು ವಿವರಣೆ ನೀಡುತ್ತೀರಾ ಎಂದು ಕೇಜ್ರಿವಾಲ್ ಸರ್ಕಾರವನ್ನು ಪ್ರಶ್ನಿಸಿದೆ.

ಕೋರ್ಟ್ ಮಧ್ಯೆ ಪ್ರವೇಶಿಸುವವರೆಗೂ ನೀವು ಕೋವಿಡ್-19 ಹರಡುವುದನ್ನು ತಡೆಗಟ್ಟಲು ಮದುವೆಗಳಿಗೆ ಹಾಜರಾಗುವವರ ಸಂಖ್ಯೆಯನ್ನು 50ಕ್ಕೆ ಇಳಿಸುವಂತಹ ಕ್ರಮಗಳನ್ನು ಏಕೆ ತೆಗೆದುಕೊಳ್ಳಲಿಲ್ಲ? ಎಂದು ಹೈಕೋರ್ಟ್ ಪ್ರಶ್ನಿಸಿದೆ.

"ನೀವು(ದೆಹಲಿ ಸರ್ಕಾರ) ನವೆಂಬರ್ 1 ರಿಂದ ಯಾವ ರೀತಿಯಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬುದನ್ನು ನೋಡಿದ್ದೀರಿ. ಆದರೆ ನೀವು ಈಗ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತಿದ್ದೀರಿ. ಪ್ರಕರಣಗಳು ಏರಿಕೆಯಾಗುತ್ತಿದ್ದರೂ ನೀವು ಎಚ್ಚರಗೊಳ್ಳಲಿಲ್ಲ. "ನವೆಂಬರ್ 11 ರಂದು ನಾವು ನಿದ್ರೆಯಿಂದ ನಿಮ್ಮನ್ನು ಎಬ್ಬಿಸಬೇಕಾಯಿತು. ನವೆಂಬರ್ 1 ರಿಂದ ನವೆಂಬರ್ 11 ರವರೆಗೆ ನೀವು ಏನು ಮಾಡಿದ್ದೀರಿ? ನಿರ್ಧಾರ ತೆಗೆದುಕೊಳ್ಳಲು ನೀವು 18 ದಿನಗಳ(ನವೆಂಬರ್ 18 ರವರೆಗೆ)ವರೆಗೆ ಏಕೆ ಕಾಯುತ್ತಿದ್ದೀರಿ? ಈ 18 ದಿನಗಳಲ್ಲಿ ಎಷ್ಟು ಮಂದಿ ಜೀವ ಕಳೆದುಕೊಂಡಿದ್ದಾರೆ ಎಂಬುದು ನಿಮಗೆ ತಿಳಿದಿದೆಯೇ? ಜೀವ ಕಳೆದುಕೊಂಡವರ ಸಂಬಂಧಿಗಳಿಗೆ ನೀವು ಇದನ್ನು ವಿವರಿಸಬಹುದೇ?" ಎಂದು ನ್ಯಾಯಪೀಠ ಪ್ರಶ್ನಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com