ರಾಯ್ಪುರ: ರಾಯ್ಪುರದಿಂದ ದಕ್ಷಿಣಕ್ಕೆ 200 ಕಿ.ಮೀ ದೂರದಲ್ಲಿರುವ ಕಂಕರ್ ಜಿಲ್ಲೆಯ ತಡೋಕಿಯಲ್ಲಿ ಭದ್ರತಾ ಪಡೆಗಳೊಂದಿಗೆ ಸೋಮವಾರ ನಡೆದ ಗುಂಡಿನ ಕಾಳಗದಲ್ಲಿ ನಿಷೇಧಿತ ಸಿಪಿಐ(ಮಾವೋವಾದಿ) ಮಹಿಳಾ ಹೋರಾಟಗಾರ್ತಿ ಸೇರಿದಂತೆ ಮೂವರು ನಕ್ಸಲರನ್ನು ಹತ್ಯೆ ಮಾಡಲಾಗಿದೆ.
ಜಿಲ್ಲೆಯಲ್ಲಿ ರೌಘಾಟ್ ಕಬ್ಬಿಣದ ಅದಿರು ಯೋಜನೆಗಾಗಿ ನಡೆಯುತ್ತಿರುವ ರೈಲ್ವೆ ಮಾರ್ಗದ ಕಾಮಗಾರಿಗೆ ಭದ್ರತೆ ನೀಡುತ್ತಿದ್ದ ಸಶಸ್ತ್ರ ಸೀಮಾ ಬಲ(ಎಸ್ಎಸ್ಬಿ) ಜವಾನರು ಎಂದಿನಂತೆ ಗಸ್ತು ತಿರುಗುತ್ತಿದ್ದರು. ಈ ವೇಳೆ ನಕ್ಸಲರು ಭದ್ರತಾ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪ್ರತಿ ದಾಳಿ ನಡೆಸಿದ ಎಸ್ಎಸ್ ಬಿ ಜವಾನರು, ಮೂವರು ಮಾವೋವಾದಿಗಳನ್ನು ಹತ್ಯೆ ಮಾಡಿದ್ದಾರೆ.
ಎನ್ಕೌಂಟರ್ ಸ್ಥಳದಿಂದ ಮಹಿಳಾ ಮಾವೋವಾದಿ ಸೇರಿದಂತೆ ಮೂವರು ದಂಗೆಕೋರರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ಶವಗಳನ್ನು ಗುರುತಿಸುವ ಪ್ರಯತ್ನ ನಡೆಯುದೆ” ಎಂದು ಪೊಲೀಸ್ ಇನ್ಸ್ಪೆಕ್ಟರ್ ಜನರಲ್(ಬಸ್ತರ್ ವಲಯ) ಸುಂದರರಾಜ್ ಪಿ ಅವರು ತಿಳಿಸಿದ್ದಾರೆ.
ಗುಂಡಿನ ಕಾಳಗದಲ್ಲಿ ಒಬ್ಬ ಎಸ್ಎಸ್ಬಿ ಹೆಡ್ ಕಾನ್ಸ್ಟೆಬಲ್ ಅಮನ್ ಕುಮಾರ್ ಅವರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಹೊರಬಂದಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
Advertisement