ಗುವಾಹತಿ: ಇತ್ತೀಚೆಗೆ ನಿಧನರಾದ ಅಸ್ಸಾಂನ ಮಾಜಿ ಸಿಎಂ ತರುಣ್ ಗಗೋಯ್ ಅವರ ಅಂತ್ಯ ಕ್ರಿಯೆಯನ್ನು ಗುರುವಾರ ಸಕಲ ಸರ್ಕಾರಿ ಗೌರವವಗಳೊಂದಿಗೆ ನೆರವೇರಿಸಲಾಯಿತು.
ಗುವಾಹತಿಯ ನಭಗ್ರಹ ರುದ್ರಭೂಮಿಯಲ್ಲಿ ತರುಣ್ ಗಗೋಯ್ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಂತ್ಯಕ್ರಿಯೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್, ಆರೋಗ್ಯ ಸಚಿವ ಹಿಮಂತ ಬಿಸ್ವಾ ಶರ್ಮಾ, ಹಿರಿಯ ಕಾಂಗ್ರೆಸ್ ಮುಖಂಡರು, ವಿರೋಧ ಪಕ್ಷಗಳ ಮುಖಂಡರು ಮತ್ತು ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ಜ್ಯೋತಿ ಮಹಂತಾ ಅವರು ಪಾಲ್ಗೊಂಡು, ಅಂತಿಮ ನಮನ ಸಲ್ಲಿಸಿದರು.
ಇದಕ್ಕೂ ಮೊದಲು ನಡೆದ ಪಾರ್ಥೀವ ಶರೀರದ ಅಂತಿಮ ಮೆರವಣಿಗೆಯಲ್ಲಿ ಗಗೋಯ್ ಅವರ ತವರು ಕ್ಷೇತ್ರ ಟಿಟಾಬೋರ್ ನಿಂದ ಆಗಮಿಸಿದ್ದ ಲಕ್ಷಾಂತರ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಗಗೋಯ್ ನಿಧನಕ್ಕೆ ಅಸ್ಸಾಂ ಸರ್ಕಾರ ನಿನ್ನೆ ಅರ್ಧ ದಿನ ರಜೆ ಘೋಷಣೆ ಮಾಡಿತ್ತು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕನ ಅಂತ್ಯಕ್ರಿಯೆಗೆ ಸಾವಿರಕ್ಕೂ ಅಧಿಕ ಮುಖಂಡರು, ರಾಜಕೀಯ ನಾಯಕರು ಪಾಲ್ಗೊಂಡಿದ್ದರು. ಗಗಯೋ ಅಂತಿಮ ಕ್ರಿಯಾ ವಿಧಿ ವಿಧಾನಗಳನ್ನು ಸಾರ್ವಜನಿಕರು ವೀಕ್ಷಿಸಲು ದೊಡ್ಡ ಎಲ್ ಇಡಿ ಪರದೆ ಏರ್ಪಡಿಸಲಾಗಿತ್ತು.
Advertisement