ದೆಹಲಿ ಚಲೋ: ರೈತರನ್ನು ಚದುರಿಸಲು ಅಶ್ರುವಾಯು ಬಳಕೆ, ಸ್ಟೇಡಿಯಂ ಗಳನ್ನು ತಾತ್ಕಾಲಿಕ ಜೈಲಾಗಿ ಮಾರ್ಪಡಿಸಲು ಪೊಲೀಸರ ಕೋರಿಕೆ
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪಂಚಾಬ್ ರೈತರು ನಡೆಸುತ್ತಿರುವ ದೆಹಲಿ ಚಲೋ ಪ್ರತಿಭಟನಾ ಮೆರವಣಿಗೆ ತಡೆಯುವ ಪ್ರಯತ್ನಗಳು ನಡೆಯುತ್ತಿದ್ದು, ಪ್ರತಿಭಟನಾ ನಿರತ ರೈತರನ್ನು ಚದುರಿಸಲು ಪೊಲೀಸರು ಅಶ್ರುವಾಯು ಬಳಸಿದ್ದಾರೆ.
Published: 27th November 2020 12:10 PM | Last Updated: 27th November 2020 01:32 PM | A+A A-

ನವದೆಹಲಿಯ ಸಿಂಧು ಗಡಿಯಲ್ಲಿ ಭದ್ರತೆ ಹೆಚ್ಚಿಸಿರುವ ಸರ್ಕಾರ
ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪಂಚಾಬ್ ರೈತರು ನಡೆಸುತ್ತಿರುವ ದೆಹಲಿ ಚಲೋ ಪ್ರತಿಭಟನಾ ಮೆರವಣಿಗೆ ತಡೆಯುವ ಪ್ರಯತ್ನಗಳು ನಡೆಯುತ್ತಿದ್ದು, ಪ್ರತಿಭಟನಾ ನಿರತ ರೈತರನ್ನು ಚದುರಿಸಲು ಪೊಲೀಸರು ಅಶ್ರುವಾಯು ಬಳಸಿದ್ದಾರೆ. ಅಲ್ಲದೆ, ಸ್ಟೇಡಿಯಂನ್ನು ತಾತ್ಕಾಲಿಕ ಜೈಲಾಗಿ ಮಾರ್ಪಡಿಸಲು ದೆಹಲಿ ಪೊಲೀಸರು ಆಡಳಿತಾರೂಢ ಆಮ್ ಆದ್ಮಿ ಸರ್ಕಾರದ ಅನುಮತಿಯನ್ನು ಕೋರಿದ್ದಾರೆಂದು ಶುಕ್ರವಾರ ತಿಳಿದುಬಂದಿದೆ.
ದೆಹಲಿ-ಹರಿಯಾಣ ಗಡಿ ಭಾಗದಲ್ಲಿ ರೈತರನ್ನು ತಡೆಯಲು ಪೊಲೀಸರು ಅಶ್ರುವಾಯು ಬಳಸಿದ್ದಾರೆಂದು ತಿಳಿದುಬಂದಿದೆ. ರೈತರನ್ನು ಚದುರಿಸಲು ಅಶ್ರುವಾಯು ಬಳಸುತ್ತಿದ್ದೇವೆ. ಕೊರೋನಾ ಸಾಂಕ್ರಾಮಿಕ ರೋಗ ಪರಿಣಾಮ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಯಾವುದೇ ರ್ಯಾಲಿ ಹಾಗೂ ಧರಣಿ ನಡೆಸಲು ಅನುಮತಿಯಿಲ್ಲ. ಅನುಮತಿ ನಿರಾಕರಿಸಿದ್ದರೂ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾಕಾರರು ದೆಹಲಿ ಪ್ರವೇಶಿಸಲು ಮರಳಿ ಯತ್ನ ನಡೆಸಿದ್ದೇ ಆದರೆ, ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಈ ನಡುವೆ ದೆಹಲಿ ಹಾಗೂ ಹರಿಯಾಣ ಗಡಿ ಭಾಗಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ರೈತರು ಗಡಿ ಪ್ರವೇಶಿಸಲು ಮುಂದಾಗಿದ್ದೇ ಆದರೆ, ಚದುರಿಸಲು ಜಲಫಿರಂಗಿ ವಾಹನಗಳನ್ನು ಸಿದ್ಧಪಡಿಸಿ ನಿಲ್ಲಿಸಲಾಗಿದೆ,
ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯ 9 ಕ್ರೀಡಾಂಗಣಗಳನ್ನು ಕಾರಾಗೃಹಗಳನ್ನಾಗಿ ಪರಿವರ್ತಿಸಲು ಪೊಲೀಸರು ದೆಹಲಿ ಸರ್ಕಾರದ ಅನುಮತಿ ಕೋರಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದೆ.
ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಸದಸ್ಯರು ಅಮೃತಸರದಿಂದ ದೆಹಲಿಗೆ ಹೊರಡಲು ಶುಕ್ರವಾರ ತಯಾರಿ ನಡೆಸಿದ್ದಾರೆ. 4-5 ತಿಂಗಳಿಗೆ ಸಾಕಾಗುವಷ್ಟು ಆಹಾರ ಸಾಮಗ್ರಿ ಹಾಗೂ ಅಗತ್ಯ ವಸ್ತುಗಳನ್ನು ಟ್ರ್ಯಾಕ್ಟರ್ಗಳಲ್ಲಿ ತುಂಬಿಸಿಕೊಂಡು ನಾವೆಲ್ಲರೂ ದೆಹಲಿ ಕಡೆಗೆ ಹೋಗತ್ತಿದ್ದೇವೆ ಎಂದು ರೈತರು ತಿಳಿಸಿದ್ದಾರೆ.
ಈ ನಡುವೆ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ದೆಹಲಿಯ ಹಲವು ಮೆಟ್ರೊ ರೈಲು ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ.