ನವದೆಹಲಿ: ಏಳು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಾರ್ಡರ್ ರೋಡ್ ಆರ್ಗನೈಸೇಶನ್ (ಬಿಆರ್ಒ) ನಿರ್ಮಿಸಿದ 44 ಸೇತುವೆಗಳನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೋಕಾರ್ಪಣೆಗೊಳಿಸಿದ್ದಾರೆ.
ಬಾರ್ಡರ್ ರೋಡ್ಸ್ ಆರ್ಗನೈಸೇಷನ್ ವತಿಯಿಂದ 7 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸೇತುವೆಗಳನ್ನು ನಿರ್ಮಿಸಲಾಗಿದೆ.
ಜಮ್ಮು ಕಾಶ್ಮೀರದಲ್ಲಿ 10, ಲಡಾಖ್ನಲ್ಲಿ 8, ಹಿಮಾಚಲಪ್ರದೇಶದಲ್ಲಿ 3, ಪಂಜಾಬ್ನಲ್ಲಿ 4, ಉತ್ತರಾಖಂಡ್ನಲ್ಲಿ 8 , ಅರುಣಾಚಲದಲ್ಲಿ 8 ಹಾಗೂ ಸಿಕ್ಕಿಂನಲ್ಲಿ 4 ಸೇತುವೆಗಳು ನಿರ್ಮಾಣಗೊಂಡಿದ್ದು ಅವುಗಳನ್ನು ಸಚಿವರು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ರಾಜನಾಥ್ ಸಿಂಗ್ ಅವರು, ಏಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ 44 ಸೇತುವೆಗಳು ವಿಶೇಷವಾಗಿ ದೇಶದ ದೂರದ ಪ್ರದೇಶಗಳಲ್ಲಿ ಸಂಪರ್ಕ ಮತ್ತು ಅಭಿವೃದ್ಧಿಯ ಹೊಸ ಯುಗಕ್ಕೆ ನಾಂದಿ ಹಾಡುತ್ತವೆ ಎಂದು ಹೇಳಿದ್ದಾರೆ.
ಇದೇ ವೇಳೆ ಬಿಆರ್ಒ ಅಧಿಕಾರಿಗಳ ಕಠಿಣ ಪರಿಶ್ರಮವನ್ನು ಮೆಚ್ಚಿದ ಸಚಿವರು, ಈ ಸೇತುವೆಗಳು ದೇಶದ ಪಶ್ಚಿಮ, ಉತ್ತರ ಮತ್ತು ಈಶಾನ್ಯ ಪ್ರದೇಶಗಳಲ್ಲಿ ಮಿಲಿಟರಿ ಮತ್ತು ನಾಗರಿಕ ಸಾರಿಗೆಯ ವಿಷಯದಲ್ಲಿ ಅಪಾರ ಪ್ರಯೋಜನವನ್ನು ನೀಡುತ್ತವೆ ಎಂದು ತಿಳಿಸಿದ್ದಾರೆ.
ಉತ್ತರ ಮತ್ತು ಪೂರ್ವ ಗಡಿಯಲ್ಲಿ ಸೃಷ್ಟಿಯಾಗಿರುವ ಪರಿಸ್ಥಿತಿ ಎಲ್ಲರಿಗೂ ತಿಳಿದಿದೆ. ಮೊದಲು ಪಾಕಿಸ್ತಾನ, ಇದೀಗ ಚೀನಾ ಗಡಿ ವಿವಾದವನ್ನು ಸೃಷ್ಟಿಸುತ್ತಿದೆ. ಗಡಿವಿವಾದ ಸೃಷ್ಟಿಸುತ್ತಿರುವ ದೇಶಗಳೊಂದಿಗೆ ಭಾರತ ಸುಮಾರು 7,000 ಕಿಮೀ ಗಡಿಯನ್ನು ಹೊಂದಿದೆ. ಪರಿಸ್ಥಿತಿ ಹೀಗೆಯೇ ಇದ್ದರೆ, ಉದ್ವಿಗ್ನತೆ ಮುಂದವರೆಯಲಿದೆ ಎಂದಿದ್ದಾರೆ.
Advertisement