ಪ್ರೇಯಸಿ ಮನೆಗೆ ನುಗ್ಗಿ ಪೋಷಕರ ಎದುರೇ ಯುವತಿಯ ಕತ್ತು ಸೀಳಿದ ಭಗ್ನ ಪ್ರೇಮಿ!

ತನ್ನ ಪ್ರೀತಿ ನಿರಾಕರಿಸಿದ ಯುವತಿಯ ಮನೆಗೇ ನುಗ್ಗಿದ ಪಾಗಲ್ ಪ್ರೇಮಿಯೊಬ್ಬ ಆಕೆಯ ಪೋಷಕರ ಎದುರೇ ಯುವತಿ ಕುತ್ತಿಗೆ ಸೇಳಿ ಕೊಲೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ವಾಣಿಜ್ಯ ರಾಜಧಾನಿ ವಿಜಯವಾಡದಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಿಜಯವಾಡ: ತನ್ನ ಪ್ರೀತಿ ನಿರಾಕರಿಸಿದ ಯುವತಿಯ ಮನೆಗೇ ನುಗ್ಗಿದ ಪಾಗಲ್ ಪ್ರೇಮಿಯೊಬ್ಬ ಆಕೆಯ ಪೋಷಕರ ಎದುರೇ ಯುವತಿ ಕುತ್ತಿಗೆ ಸೇಳಿ ಕೊಲೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ವಾಣಿಜ್ಯ ರಾಜಧಾನಿ ವಿಜಯವಾಡದಲ್ಲಿ ನಡೆದಿದೆ.

ನಾಗೇಂದ್ರ ಅಲಿಯಾಸ್ ಚಿನ್ನಸ್ವಾಮಿ ಎಂಬಾತ ಇಂಜಿನಿಯರಿಂಗ್​ ವ್ಯಾಸಂಗ ಮಾಡುತ್ತಿದ್ದ ವಿಜಯವಾಡದ ಕ್ರೈಸ್ಟ್​ ರಾಜಪುರಂನ ಯುವತಿಯನ್ನು ಕತ್ತು ಸೀಳೆ ಹತ್ಯೆ ಮಾಡಿದ್ದಾನೆ. ಬಳಿಕ ತಾನೂ ಕೂಡ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಸ್ಥಳೀಯರು ಸ್ಥಳಕ್ಕಾಗಮಿಸಿ ರಕ್ತದ  ಮಡುವಿನಲ್ಲಿ ಬಿದ್ದಿದ್ದ ನಾಗೇಂದ್ರ ಮತ್ತು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟು ಹೊತ್ತಿಗಾಗಲೇ ಯುವತಿ ದಿವ್ಯ ತೇಜಸ್ವಿನಿ ಪ್ರಾಣಪಕ್ಷಿ ಹಾರಿಹೋಗಿತ್ತು. ಆದರೆ ಪಾಗಲ್ ಪ್ರೇಮಿಗೆ ಗುಂಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ ವೃತ್ತಿಯಲ್ಲಿ ಪೇಂಟರ್ ಆಗಿದ್ದ ನಾಗೇಂದ್ರ ಯುವತಿ ನಿವಾಸವಿದ್ದ ಕ್ರೈಸ್ಟ್​ ರಾಜಪುರಂನಲ್ಲಿಯೇ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ. ಅದೇ ರಸ್ತೆಯಲ್ಲಿ ನಿತ್ಯ ತಿರುಗಾಡುತ್ತಿದ್ದ ಯುವತಿ ತೇಜಸ್ವಿನಿಯನ್ನು ನೋಡಿ ಆತ ಪ್ರೀತಿಸ ತೊಡಗಿದ್ದ. ಒಂದು ದಿನ ಆಕೆಯ ಬಳಿ ಬಂದಿದ್ದ ನಾಗೇಂದ್ರ  ಆಕೆಯೊಂದಿಗೆ ತನ್ನ ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಆದರೆ ತೇಜಸ್ವಿನಿ ಆತನನ್ನು ನಿರಾಕರಿಸಿದ್ದಳು ಎನ್ನಲಾಗಿದೆ. ಇದರಿಂದ ಕ್ರೋಧಗೊಂಡಿದ್ದ ಆತ ದಿವ್ಯ ತೇಜಸ್ವಿನಿ ಮನೆಗೆ ಹೋಗಿ ಆಕೆಯ ಪೋಷಕರ ಎದರೇ ಆಕೆಯನ್ನು ಇರಿದು ಹತ್ಯೆ ಮಾಡಿದ್ದಾನೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಆಂಧ್ರ ಪ್ರದೇಶ ಮಹಿಳಾ ಆಯೋಗದ ಅಧ್ಯಕ್ಷೆ ವಸಿರೆಡ್ಡಿ ಪದ್ಮಾ ಅವರು ದೌಡಾಯಿಸಿದ್ದು, ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಅಲ್ಲದೆ ಅಗತ್ಯ ಕಾನೂನು ನೆರವು ನೀಡುವುದಾಗಿ ಭರವಸೆ ನೀಡಿರುವ ಅವರು  ತಪ್ಪಿತಸ್ಥನಿಗೆ ಶಿಕ್ಷೆ ಕೊಡಿಸುವುದಾಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com