ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಬಲ್ವಿಂದರ್‌ ಸಿಂಗ್ ಅಂತ್ಯಕ್ರಿಯೆ ನಡೆಸಲು ಕುಟುಂಬ ನಕಾರ

ಭಯೋತ್ಪಾದನೆ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿದ್ದ ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಬಲ್ವಿಂದರ್‌ ಸಿಂಗ್‌ ಸಂಧು ಅವರನ್ನು ಹತ್ಯೆ ಮಾಡಲಾಗಿದ್ದು, ದುಷ್ಕರ್ಮಿಗಳನ್ನು ಬಂಧಿಸುವವರೆಗೆ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಬಲ್ವಿಂದರ್ ಸಿಂಗ್ ಕುಟುಂಬ ಪಟ್ಟು ಹಿಡಿದಿದೆ.
ಬಲ್ವಿಂದರ್ ಸಿಂಗ್ ಪತ್ನಿ
ಬಲ್ವಿಂದರ್ ಸಿಂಗ್ ಪತ್ನಿ

ಅಮೃತಸರ: ಭಯೋತ್ಪಾದನೆ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿದ್ದ ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಬಲ್ವಿಂದರ್‌ ಸಿಂಗ್‌ ಸಂಧು ಅವರನ್ನು ಹತ್ಯೆ ಮಾಡಲಾಗಿದ್ದು, ದುಷ್ಕರ್ಮಿಗಳನ್ನು ಬಂಧಿಸುವವರೆಗೆ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಬಲ್ವಿಂದರ್ ಸಿಂಗ್ ಕುಟುಂಬ ಪಟ್ಟು ಹಿಡಿದಿದೆ.

ಬಲ್ವಿಂದರ್‌ ಸಿಂಗ್‌ (62 ವರ್ಷ) ಅವರನ್ನು ಅಪರಿಚಿತ ದುಷ್ಕರ್ಮಿಗಳು ಶುಕ್ರವಾರ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ತರನ್‌ ತಾರನ್‌ ಭಿಖಿವಿಂಡ್‌ ಗ್ರಾಮದಲ್ಲಿ ತಮ್ಮ ಮನೆಗೆ ಹೊಂದಿಕೊಂಡಿರುವ ಕಚೇರಿಯಲ್ಲಿದ್ದ ಸಿಂಗ್‌ ಅವರ ಮೇಲೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ದಾಳಿಯಲ್ಲಿ ಬಲ್ವಿಂದರ್ ಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪಂಜಾಬ್ ಸಿಂಗ್ ಬಲ್ವಿಂದರ್ ಸಿಂಗ್ ಅವರಿಗೆ ನೀಡಿದ್ದ ಭದ್ರತೆ ಹಿಂಪಡೆದ ಕೆಲವೇ ತಿಂಗಳಲ್ಲಿ ಹತ್ಯೆ ನಡೆದಿದ್ದು, ಹಂತಕರನ್ನು ಬಂಧಿಸುವವರೆಗೆ ನಾವು ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಸಿಂಗ್ ಪತ್ನಿ ಜಗದೀಶ್ ಕೌರ್ ಅವರು ವರದಿಗಾರರಿಗೆ ತಿಳಿಸಿದ್ದಾರೆ. ಅಲ್ಲದೆ ತಮ್ಮ ಕುಟುಂಬಕ್ಕೆ ಸರ್ಕಾರ ಸೂಕ್ತ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯ ಮತ್ತು ಕೇಂದ್ರ ಸರ್ಕಾರದ ಗುಪ್ತಚರ ವೈಫಲ್ಯ ಉಗ್ರರು ನನ್ನ ಪತಿಯನ್ನು ಹತ್ಯೆ ಮಾಡಲು ಕಾರಣವಾಗಿದೆ. ಇದಕ್ಕೆ ಎರಡೂ ಸರ್ಕಾರಗಳು ಹೊಣೆ ಎಂದು ಸಿಂಗ್ ಪತ್ನಿ ಹೇಳಿದ್ದಾರೆ.

'ನಮ್ಮ ಇಡೀ ಕುಟುಂಬ ಭಯೋತ್ಪಾದಕರ ಹಿಟ್‌ ಲಿಸ್ಟ್‌ನಲ್ಲಿದೆ. ಹೀಗಾಗಿ ಸರ್ಕಾರ ತಮಗೆ ಹಾಗೂ ಕುಟುಂಬಕ್ಕೆ ಭದ್ರತೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ. 

ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದ್ದ ಬಲ್ವಿಂದರ್ ಸಿಂಗ್ ಅವರ ಧೈರ್ಯವನ್ನು ಮೆಚ್ಚಿ ಕೇಂದ್ರ ರಕ್ಷಣಾ ಸಚಿವಾಲಯ 1993ರಲ್ಲಿ ‘ಶೌರ್ಯ ಚಕ್ರ’ ಪ್ರಶಸ್ತಿ ನೀಡಿ ಗೌರವಿಸಿತ್ತು. ಸಿಂಗ್ ಅವರ ಧೈರ್ಯ ಮತ್ತು ಸಾಹಸದ ಚಟುವಟಿಕೆಗಳ ಕುರಿತು ಅನೇಕ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com