ನವದೆಹಲಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಸರ್ಕಾರ ಬದಲಾವಣೆಯಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮುಂದಿನ ಸರ್ಕಾರವನ್ನು ನಾವು ರಚನೆ ಮಾಡಲಿದ್ದೇವೆ ಎಂಬ ವಿಶ್ವಾಸವಿರುವುದಾಗಿ ಅಮಿತ್ ಶಾ ಹೇಳಿದ್ದು, ಒಂದು ವೇಳೆ ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿದ್ದೇ ಆದರೆ ರಾಷ್ಟ್ರಪತಿ ಆಡಳಿತ ಹೇರಿ ಎಂಬ ಬೇಡಿಕೆ ಇಡುವುದಕ್ಕೆ ಬಿಜೆಪಿಗೆ ಎಲ್ಲಾ ಅಧಿಕಾರವೂ ಇದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಇದೇ ವೇಳೆ ಬಿಹಾರ ಚುನಾವಣೆಯ ಬಗ್ಗೆಯೂ ಮಾತನಾಡಿರುವ ಅಮಿತ್ ಶಾ, ಎನ್ ಡಿಎ ಬಹುಮತ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜೆಡಿಯುಗಿಂತ ಹೆಚ್ಚು ಸ್ಥಾನ ಗಳಿಸಿದಲ್ಲಿ ಬಿಜೆಪಿ ಬಿಹಾರದಲ್ಲಿ ಮುಖ್ಯಮಂತ್ರಿ ಪದವಿಗೆ ಬೇಡಿಕೆ ಇಡಲಿದೆಯೇ ಎಂಬ ಪ್ರಶ್ನೆಗೂ ಉತ್ತರಿಸಿರುವ ಅಮಿತ್ ಶಾ, ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಈ ಬಗ್ಗೆ ಸಾರ್ವಜನಿಕ ಘೋಷಣೆಯೂ ಆಗಿದ್ದು, ನಾವು ಇದಕ್ಕಾಗಿ ಬದ್ಧರಾಗಿದ್ದೇವೆ ಎಂದು ಶಾ ತಿಳಿಸಿದ್ದಾರೆ.
ಇನ್ನು ಲಡಾಖ್ ನಲ್ಲಿ ಚೀನಾದ ಗಡಿ ಕ್ಯಾತೆ ಬಗ್ಗೆಯೂ ಮಾತನಾಡಿರುವ ಅಮಿತ್ ಶಾ, ಮೋದಿ ಸರ್ಕಾರ ದೇಶದ ಭೂಮಿಯ ಪ್ರತಿ ಇಂಚನ್ನೂ ಸುರಕ್ಷವಾಗಿರುವಂತೆ ನೋಡಿಕೊಳ್ಳುತ್ತಿದೆ, ಯಾರೂ ಸಹ ದೇಶದ ಭೂಮಿಯನ್ನು ಕಸಿಯುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
Advertisement