ಬಲ್ಲಿಯಾ ಪ್ರಕರಣ: ತನಿಖೆಯಿಂದ ದೂರ ಉಳಿಯುವಂತೆ ವಿವಾದಾತ್ಮಕ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಗೆ ಜೆಪಿ ನಡ್ಡಾ ಆದೇಶ

ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಾರ್ಟಿಯ ಕೇಂದ್ರ ನಾಯಕರು ಕ್ರಮಕ್ಕೆ ಮುಂದಾಗಿದ್ದು ಶಾಸಕ ಸುರೇಂದ್ರ ಸಿಂಗ್ ಗೆ ತನಿಖೆಯಿಂದ ದೂರ ಇರುವಂತೆ ಹೇಳಿದ್ದಾರೆ.
ಜೆ ಪಿ ನಡ್ಡಾ
ಜೆ ಪಿ ನಡ್ಡಾ

ನವದೆಹಲಿ: ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಾರ್ಟಿಯ ಕೇಂದ್ರ ನಾಯಕರು ಕ್ರಮಕ್ಕೆ ಮುಂದಾಗಿದ್ದು ಶಾಸಕ ಸುರೇಂದ್ರ ಸಿಂಗ್ ಗೆ ತನಿಖೆಯಿಂದ ದೂರ ಇರುವಂತೆ ಹೇಳಿದ್ದಾರೆ.

ಉತ್ತರ ಪ್ರದೇಶದ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರಲ್ಲಿ, ಶಾಸಕರಿಗೆ ತನಿಖೆಯಿಂದ ಅಂತರ ಕಾಯ್ದುಕೊಳ್ಳುವಂತೆ ಹೇಳಲು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಸೂಚಿಸಿದ್ದಾರೆ.ಬಲ್ಲಿಯಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ನೀಡಿದ್ದ ಹೇಳಿಕೆಗೆ ಸಮ್ಮನ್ಸ್ ನೀಡಿದ್ದ ಹಿನ್ನೆಲೆಯಲ್ಲಿ ಲಕ್ನೊದಲ್ಲಿ ನಿನ್ನೆ ಶಾಸಕ ಸುರೇಂದ್ರ ಸಿಂಗ್ ಸ್ವತಂತ್ರ ದೇವ್ ಸಿಂಗ್ ಅವರನ್ನು ಭೇಟಿ ಮಾಡಿದ್ದರು.

ದುರ್ಜಾನ್ ಪುರ್ ಗ್ರಾಮದಲ್ಲಿ ಸರ್ಕಾರಿ ಕೋಟಾದಡಿ ಅಂಗಡಿಯನ್ನು ಹಂಚಿಕೆ ಮಾಡಿದ್ದ ವಿಷಯದಲ್ಲಿ ಘರ್ಷಣೆ ನಡೆದು ಗುಂಡಿನ ದಾಳಿಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ. ಬಲ್ಲಿಯಾ ಘಟನೆ ಕುರಿತು ಶಾಸಕ ಸುರೇಂದ್ರ ಸಿಂಗ್ ನೀಡಿದ್ದ ಹೇಳಿಕೆಗೆ ಜೆ ಪಿ ನಡ್ಡಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ, ತನಿಖೆಯಿಂದ ದೂರ ಉಳಿಯುವಂತೆ ಸುರೇಂದ್ರ ಸಿಂಗ್ ಅವರಿಗೆ ಸೂಚಿಸಬೇಕೆಂದು ಜೆ ಪಿ ನಡ್ಡಾ ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷರಿಗೆ ತಿಳಿಸಿದ್ದಾರೆ ಎಂದು ಬಿಜೆಪಿ ಮೂಲಗಳು ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿವೆ.

ಮೊನ್ನೆ ಅಕ್ಟೋಬರ್ 16ರಂದು, ಬಲ್ಲಿಯಾ ಜಿಲ್ಲೆಯ ಸ್ಥಳೀಯ ಬಿಜೆಪಿ ನಾಯಕ ಧೀರೇಂದ್ರ ಪ್ರತಾಪ್ ಸಿಂಗ್ ವ್ಯಕ್ತಿಯೊಬ್ಬರನ್ನು ಕೊಂದು ಹಾಕಿದ ನಂತರ ಬಿಜೆಪಿ ಶಾಸಕ ಸುರೇಂದ್ರ ಸಿಂಗ್, ಈ ಪ್ರಕರಣದಲ್ಲಿ ಏಕಮುಖವಾಗಿ ತನಿಖೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು.

ಈ ಘಟನೆ ನಿಜಕ್ಕೂ ಶೋಚನೀಯ. ಇದು ನಡೆಯಬಾರದಾಗಿತ್ತು, ಆದರೆ ಅಧಿಕಾರಿಗಳು ಏಕಪಕ್ಷೀಯವಾಗಿ ತನಿಖೆ ಮಾಡುತ್ತಿರುವುದನ್ನು ಖಂಡಿಸುತ್ತೇನೆ, ಘಟನೆಯಲ್ಲಿ ಗಾಯಗೊಂಡ ಆರು ಮಂದಿ ಮಹಿಳೆಯರ ಬಗ್ಗೆ ಯಾರೂ ಯೋಚಿಸುತ್ತಿಲ್ಲ. ದೀರೇಂದ್ರ ಅವರು ತಮ್ಮ ಸ್ವರಕ್ಷಣೆಗಾಗಿ ಗುಂಡು ಹಾರಿಸಿಕೊಂಡರು ಎಂದು ಸುರೇಂದ್ರ ಸಿಂಗ್ ಪ್ರತಿಕ್ರಿಯೆ ಕೊಟ್ಟಿದ್ದರು.

 ಆತ ನನ್ನ ನಿಕಟವರ್ತಿ ಅಲ್ಲ ಎಂಬುದನ್ನು ಹೇಗೆ ನಿರಾಕರಿಸಲು ಸಾಧ್ಯವಿದೆ? ನನಗೆ ಮಾತ್ರವಲ್ಲ, ಬಿಜೆಪಿಗೆ ಸಹ ಬೇಕಾದವರೇ ಅವರು, ಚುನಾವಣೆಗಳಲ್ಲಿ ನಮ್ಮ ಪರ ಕೆಲಸ ಮಾಡಿದ್ದಾರೆ, ನಮಗೆ ಮತ ಹಾಕಿದ ಪ್ರತಿಯೊಬ್ಬರೂ ಕೂಡ ನಿಕಟವರ್ತಿಗಳೇ, ಆದರೆ ನಡೆದ ದುರ್ಘಟನೆಯನ್ನು ನಾನು ಖಂಡಿಸುತ್ತಿದ್ದು ಅಧಿಕಾರಿಗಳು ಏಕಮುಖವಾಗಿ ತನಿಖೆ ನಡೆಸಬಾರದು ಎಂದಿದ್ದಾರೆ.

ಇನ್ನು ಬಲ್ಲಿಯಾ ಘಟನೆಗೆ ಸಂಬಂಧಿಸಿದಂತೆ ಇಂದು ಲಕ್ನೊದಲ್ಲಿ ಪ್ರಮುಖ ಆರೋಪಿ ದೀರೇಂದ್ರ ಪ್ರತಾಪ್ ಅವರನ್ನು ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ ಬಂಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com