ಮೋತಿಹಾರ್: ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ, ಜಮ್ಮು ಕಾಶ್ಮೀರದಲ್ಲಿ ಸಂವಿಧಾನ ವಿಧಿ 370ನ್ನು ರದ್ದುಗೊಳಿಸಿರುವುದನ್ನು ವಿರೋಧಿಸಿ ಅದನ್ನು ಮರುಸ್ಥಾಪಿಸಲು ಪ್ರತಿಪಕ್ಷಗಳು ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬಿಹಾರ ವಿಧಾನಸಭೆಯ ಪಶ್ಚಿಮ ಚಂಪರನ್ ಮತ್ತು ಪೂರ್ವ ಚಂಪರನ್ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ಮಾವೋವಾದಿ ಪಕ್ಷ ಸಿಪಿಎಂಎಲ್ ಗೆ ಕಾಂಗ್ರೆಸ್ ರಾಜ್ಯದಲ್ಲಿ ಬೆಂಬಲ ನೀಡುತ್ತಿದ್ದು, ಆ ಪಕ್ಷ ಅಪಾಯಕಾರಿಯಾಗಿದ್ದು ವಿಭಜನೆ ನೀತಿಯನ್ನು ಹೊಂದಿದ್ದು ಟುಕ್ಡೆ, ಟುಕ್ಡೆ ಗ್ಯಾಂಗ್ ಗೆ ಸೇರಿದ್ದಾಗಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಅವರು, ಅಯೋಧ್ಯೆ ಕೇಸಿನಲ್ಲಿ ವಕೀಲರಾಗಿದ್ದರು, ಅವರು ಸುಪ್ರೀಂ ಕೋರ್ಟ್ ಮುಂದೆ ವ್ಯಕ್ತಪಡಿಸಿದ ಆತಂಕವನ್ನು ಅಸಹ್ಯಕರವೆಂದು ನೆನಪಿಸಿಕೊಂಡ ಜೆ ಪಿ ನಡ್ಡಾ, ತೀರ್ಪು ತೀರ್ಮಾನವಾದರೆ ಅದು ಬಿಜೆಪಿಗೆ ಚುನಾವಣೆ ವಿಷಯದಲ್ಲಿ ಲಾಭವಾಗಬಹುದೆಂದು ಹೇಳಿದ್ದನ್ನು ಜೆ ಪಿ ನಡ್ಡಾ ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು.
ಕಾಂಗ್ರೆಸ್ ನ ಇಂತಹ ವರ್ತನೆಗಳಿಂದಾಗಿ, ಜನರು ಲೋಕಸಭೆಯಲ್ಲಿ ಬಿಜೆಪಿಗೆ ಮತ ಹಾಕಿದರು, ನ್ಯಾಯಾಲಯವು ದೇವಾಲಯದ ಪರವಾಗಿ ಸರ್ವಾನುಮತದ ತೀರ್ಪು ನೀಡಿತು. ಲೋಕಸಭೆಯಲ್ಲಿ ನೀಡಿದ್ದ ಬಹುಮತ ತೀರ್ಪಿನಿಂದಾಗಿ ನರೇಂದ್ರ ಮೋದಿಯವರು ಸಂವಿಧಾನ ವಿಧಿ 370ನ್ನು ಕೈಬಿಟ್ಟರು ಎಂದರು.
ಇದನ್ನು ಪಾಕಿಸ್ತಾನ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆ ಆಧರಿಸಿ ಪ್ರಶ್ನಿಸಿತು ಎಂದು ನಡ್ಡಾ ಆಕ್ಷೇಪ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಅವರು ಮಾಜಿ ಸಚಿವ ಪಿ ಚಿದಂಬರಂ ಸಂವಿಧಾನ ವಿಧಿ 370ನ್ನು ಪುನರ್ ಸ್ಥಾಪಿಸಬೇಕೆಂದು ಒತ್ತಾಯಿಸಿದ್ದಕ್ಕೆ ಕೂಡ ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿ ಮತ್ತು ಸಂಸದ ಶಶಿ ತರೂರ್ ಅವರ ದೇಶಭಕ್ತಿಯನ್ನು ಪ್ರಶ್ನಿಸಿದ ನಡ್ಡಾ, ಕೋವಿಡ್-19ನ್ನು ಪಾಕಿಸ್ತಾನ ಚೆನ್ನಾಗಿ ನಿರ್ವಹಿಸಿದೆ ಎಂದು ಹೊಗಳಿರುವುದನ್ನು ನೋಡಿದರೆ ಅವರ ಮನಸ್ಥಿತಿ ಅರ್ಥವಾಗುತ್ತದೆ ಎಂದರು.
Advertisement