ಪೋಖ್ರಾನ್: ಯುದ್ಧ ಟ್ಯಾಂಕ್ ಗಳನ್ನು ಹೊಡೆದುರುಳಿಸಬಲ್ಲ ಶಕ್ತಿಶಾಲಿ ಕ್ಷಿಪಣಿ 'ನಾಗ್' ಮಿಸೈಲ್ ನ ಅಂತಿಮ ಪರೀಕ್ಷೆ ಯಶಸ್ವಿಯಾಗಿದ್ದು, ಕ್ಷಿಪಣಿಯು ಸೇನಾ ಬಳಕೆಗೆ ಸರ್ವಸನ್ನದ್ಧವಾಗಿದೆ.
ದೇಶಿಯ ಕ್ಷಿಪಣಿಗಳನ್ನು ಸತತವಾಗಿ ಯಶಸ್ವಿ ಪರೀಕ್ಷೆ ನಡೆಸುತ್ತಿರುವ ಭಾರತ ಇದೀಗ ಮತ್ತೊಂದು ಕ್ಷಿಪಣಿಯನ್ನು ಯಶಸ್ವಿ ಪರೀಕ್ಷೆ ನಡೆಸಿದ್ದು, ಡಿಆರ್ಡಿಒ ಅಭಿವೃದ್ಧಿಪಡಿಸಿದ ಟ್ಯಾಂಕ್ ನಿರೋಧಕ ಗುರಿ ನಿರ್ದೇಶಿತ 'ನಾಗ್' ಕ್ಷಿಪಣಿಯ ಅಂತಿಮ ಪರೀಕ್ಷೆ ಯಶಸ್ವಿಯಾಗಿದೆ.
ದೇಶಿಯ ಕ್ಷಿಪಣಿಗಳನ್ನು ಸತತವಾಗಿ ಯಶಸ್ವಿ ಪರೀಕ್ಷೆ ನಡೆಸುತ್ತಿರುವ ಭಾರತ ಇದೀಗ ಮತ್ತೊಂದು ಕ್ಷಿಪಣಿಯನ್ನು ಯಶಸ್ವಿ ಪರೀಕ್ಷೆ ನಡೆಸಿದೆ. ಹೌದು, ಡಿಆರ್ಡಿಒ ಅಭಿವೃದ್ಧಿಪಡಿಸಿದ ಟ್ಯಾಂಕ್ ನಿರೋಧಕ ಗುರಿ ನಿರ್ದೇಶಿತ 'ನಾಗ್' ಕ್ಷಿಪಣಿಯ ಅಂತಿಮ ಪರೀಕ್ಷೆಯಲ್ಲಿ ಭಾರತ ಯಶಸ್ವಿ ಕಂಡಿದೆ. ಈ ಮೂಲಕ ಭಾರತದ ಸೇನೆಯ ಕ್ಷಿಪಣಿ ಬತ್ತಳಿಕೆಗೆ ಯುದ್ಧ ಟ್ಯಾಂಕ್ ಗಳನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯದ ಮೂರನೇ ತಲೆಮಾರಿನ ಶಕ್ತಿಶಾಲಿ ಕ್ಷಿಪಣಿಯೊಂದು ಸೇರ್ಪಡೆಯಾದಂತಾಗಿದೆ.
ಡಿಆರ್ ಡಿಒ ಮೂಲಗಳ ಪ್ರಕಾರ ಇಂದು ಬೆಳಗ್ಗೆ 6.45 ಕ್ಕೆ ರಾಜಸ್ತಾನದ ಪೋಖ್ರಾನ್ ನ ಫೀಲ್ಡ್ ಫೈರಿಂಗ್ ಶ್ರೇಣಿಗಳಲ್ಲಿ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಯಿತು. ಕ್ಷಿಪಣಿಯು ನಿರ್ದೇಶಿತ ಗುರಿಯನ್ನು ಯಶಸ್ವಿಯಾಗಿ ಮತ್ತು ನಿಖರವಾಗಿ ತಲುಪಿದೆ.
ಇನ್ನು ಡಿಆರ್ಡಿಒ ಅಭಿವೃದ್ಧಿಪಡಿಸಿರುವ ಟ್ಯಾಂಕ್ ನಿರೋಧಕ ಗುರಿ ನಿರ್ದೇಶಿತ 'ನಾಗ್' ಕ್ಷಿಪಣಿ, ಸಂಪೂರ್ಣ ದೇಶೀಯವಾಗಿ ನಿರ್ಮಿಸಲಾಗಿದ್ದು, ಎಲ್ಲಾ ಹವಾಮಾನಗಳಲ್ಲಿ ಕಾರ್ಯಾಚರಿಸುತ್ತದೆ. ನಾಗ್-ಎಟಿಜಿಎಂ ಕ್ಷಿಪಣಿಯನ್ನು ನೆಲದಿಂದ ಮತ್ತು ವಾಯು ನೆಲೆಯಿಂದ ನಿಖರ ಗುರಿಯತ್ತ ಅತ್ಯಂತ ಕರಾರುವಕ್ಕಾಗಿ ಸಿಡಿಸಿ ವೈರಿಗಳ ಸಮರ ಟ್ಯಾಂಕ್ಗಳು ಮತ್ತು ಇತರ ವಾಹನಗಳನ್ನು ಕ್ಷಣಾರ್ಧದಲ್ಲೇ ಧ್ವಂಸ ಮಾಡಬಹುದು. ನಾಗ್ ಕ್ಷಿಪಣಿ ಸಿಡಿತಲೆಗಳನ್ನು ಹೊಂದಿರುವ ಈ ಕ್ಷಿಪಣಿ 8 ಕಿ.ಮೀ ದೂರದಲ್ಲಿರುವ ವೈರಿಗಳ ಟ್ಯಾಂಕ್ಗಳು ಮತ್ತು ಸಶಸ್ತ್ರ ವಾಹನಗಳನ್ನು ಧ್ವಂಸಗೊಳಿಸುವ ಅಗಾಧ ಸಾಮರ್ಥ್ಯ ಹೊಂದಿದೆ. ಹಗಲು ಮತ್ತು ರಾತ್ರಿ ವೇಳೆ ಕಾರ್ಯ ನಿರ್ವಹಿಸುವ ನಾಗ್ ಕ್ಷಿಪಣಿಗೆ ನಿಖರ ಗುರಿ ತಲುಪಲು ಅತ್ಯಾಧುನಿಕ ಮಾರ್ಗದರ್ಶಿ ವ್ಯವಸ್ಥೆ , ಇನ್ಫಾರೆಡ್ ಕಿರಣ ಮತ್ತು ಏರಿಯೋನಿಕ್ಸ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ ಎಂದು ಡಿಆರ್ಡಿಒ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತ ಈವರೆಗೆ ಎರಡನೇ ತಲೆಮಾರಿನ ಮಿಲೆನ್ -2ಟಿ ಮತ್ತು ಕುಂಕುರ್ ಯುದ್ಧ ಟ್ಯಾಂಕ್ ಧ್ವಂಸಕ ಕ್ಷಿಪಣಿಗಳನ್ನು ಮಾತ್ರ ಬಳಸುತ್ತಿದ್ದು, ಈ ಹೊಸ ಅಸ್ತ್ರವು ಭಾರತೀಯ ಭೂ ಸೇನೆಯ ಬಲವನ್ನು ಮತ್ತಷ್ಟು ಹೆಚ್ಚಿಸಿದೆ. ಇಂತಹ ಅತ್ಯಾಧುನಿಕ ಯುದ್ಧ ಟ್ಯಾಂಕ್ ಧ್ವಂಸಕ ಕ್ಷಿಪಣಿ ಅಮೆರಿಕಾ, ರಷ್ಯಾ, ಫ್ರಾನ್ಸ್ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಮಾತ್ರ ಇವೆ. 2018ರಲ್ಲಿ 200 ನಾಗ್ ಎಟಿಜಿಎಂಗಳನ್ನು ಹೊಂದಲು ಕೇಂದ್ರ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿತ್ತು.
ಕ್ಷಿಪಣಿಯ ಅಂತಿಮ ಹಂತದ ಪರೀಕ್ಷೆ ಯಶಸ್ವಿಯಾಗಿರುವ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ ಸಿಂಗ್ ಅಪಾರ ಸಂತಸ ವ್ಯಕ್ತಪಡಿಸಿದ್ದು, ಡಿಆರ್ಡಿಒ ಅಭಿಮಾನಿಗಳನ್ನು ಅಭಿನಂದಿಸಿದ್ದಾರೆ.
Advertisement