ನವದೆಹಲಿ: 'ಕಾಶ್ಮೀರ್ ಟೈಮ್ಸ್' ಕಚೇರಿಗಳಿಗೆ ಜಮ್ಮು-ಕಾಶ್ಮೀರ ಆಡಳಿತ ಬೀಗಮುದ್ರೆ ಹಾಕಿರುವ ಕೇಂದ್ರ ಸರ್ಕಾರದ ನಿಲುವನ್ನು ಭಾರತೀಯ ಸಂಪಾದಕರ ಕೂಟ (ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ) ತೀವ್ರವಾಗಿ ಖಂಡಿಸಿದೆ.
ಶ್ರೀನಗರದಲ್ಲಿ 'ಕಾಶ್ಮೀರ್ ಟೈಮ್ಸ್' ಕಚೇರಿಗಳಿಗೆ ಜಮ್ಮು-ಕಾಶ್ಮೀರ ಆಡಳಿತ ಬೀಗಮುದ್ರೆ ಹಾಕಿರುವುದನ್ನು ತೀವ್ರವಾಗಿ ಖಂಡಿಸಿರುವ ಭಾರತೀಯ ಸಂಪಾದಕರ ಕೂಟ (ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ), ಈ ಕ್ರಮದಿಂದ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು-ಕಾಶ್ಮೀರ ಮತ್ತು ಲಡಾಖ್ ನ ಮಾಧ್ಯಮದ ಮೇಲೆ ಗೊಂದಲ ಪರಿಣಾಮ ಬೀರಿದೆ ಎಂದು ಹೇಳಿದೆ.
‘ಕಾಶ್ಮೀರ್ ಟೈಮ್ಸ್ ನ ಶ್ರೀನಗರ ಕಚೇರಿಗಳ ಮೇಲೆ ಏಕಾಏಕಿ ಮತ್ತು ಹಠಾತ್ ಆಗಿ ಬೀಗಮುದ್ರೆ ಹಾಕಿರುವುದು ಖಂಡನೀಯ. ಜಮ್ಮು -ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಮಾಧ್ಯಮಗಳ ಮೇಲೆ ಇದು ಗೊಂದಲದ ಪರಿಣಾಮ ಬೀರಿದೆ.’ ಎಂದು ಗಿಲ್ಡ್ ಇಲ್ಲಿ ಬಿಡುಗಡೆ ಮಾಡಿರುವ ಪ್ರಕಟಣೆ ತಿಳಿಸಿದೆ.
‘ಸರ್ಕಾರದ ಕ್ರಮ ಕಾಶ್ಮೀರ್ ಟೈಮ್ಸ್ಗೆ ಮಾತ್ರವಲ್ಲದೆ ಕೇಂದ್ರಾಡಳಿತ ಪ್ರದೇಶದ ಒಟ್ಟಾರೆ ಮಾಧ್ಯಮಕ್ಕೆ ಪ್ರತೀಕಾರದ ಮತ್ತು ಅಪಾಯಕಾರಿಯೆಂದು ಪರಿಗಣಿಸಬೇಕಾಗುತ್ತದೆ. ಮಾಧ್ಯಮಗಳು ನಿರ್ಭೀತಿಯಿಂದ ಮುಕ್ತವಾಗಿ ಕಾರ್ಯ ನಿರ್ವಹಿಸುವ ವಾತಾವರಣವನ್ನು ಸರ್ಕಾರ ಕಲ್ಪಿಸಬೇಕು.’ ಎಂದು ಗಿಲ್ಡ್ ಹೇಳಿದೆ.
ಅಂತೆಯೇ ಕಣಿವೆ ರಾಜ್ಯದಲ್ಲಿ ಮಾಧ್ಯಮ ಸಂಸ್ಥೆಗಳು ಯಾವುದೇ ಅಡೆತಡೆ ಅಥವಾ ಭಯವಿಲ್ಲದೆ ಕಾರ್ಯನಿರ್ವಹಿಸುವಂತಹ ಸನ್ನಿವೇಶವನ್ನು ಸೃಷ್ಟಿಸಬೇಕು ಎಂದು ಗಿಲ್ಡ್ ಸರ್ಕಾರವನ್ನು ಒತ್ತಾಯಿಸಿದೆ.
Advertisement