ನವದೆಹಲಿ: ಭಾರತ ಯಾವತ್ತಿಗೂ ತನ್ನ ನೆರೆಯ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತದೆ, ಆದರೆ ಕಾಲ ಕಾಲಕ್ಕೆ ತನ್ನ ದೇಶದ ಸಾರ್ವಭೌಮತ್ಯ ಮತ್ತು ಪ್ರಾಂತೀಯ ಐಕ್ಯತೆಯನ್ನು ಕಾಪಾಡಲು ಸರ್ವಶ್ರೇಷ್ಟ ತ್ಯಾಗಗಳನ್ನು ಸೇನೆಯ ಯೋಧರು ಮಾಡುವ ಪರಿಸ್ಥಿತಿ ಬರುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಡಾರ್ಜಿಲಿಂಗ್ ಜಿಲ್ಲೆಯ ಸುಕ್ನಾದಲ್ಲಿ ಭಾರತೀಯ ಸೇನೆಯ 33 ಕಾರ್ಪ್ಸ್ ನ ಸೈನಿಕರನ್ನುದ್ದೇಶಿಸಿ ಅವರು ನಿನ್ನೆ ಮಾತನಾಡಿದರು. ಅದಕ್ಕೂ ಮುನ್ನ ಅವರು, ಸಿಕ್ಕಿಮ್ ವಲಯದಲ್ಲಿ ಗಡಿ ವಾಸ್ತವ ರೇಖೆಯಲ್ಲಿ ಮಿಲಿಟರಿ ನೆಲೆ ಕಾವಲು ಕಾಯುತ್ತಿರುವ, ಸೇನೆ ನಡೆಸುತ್ತಿರುವ ತಯಾರಿ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿದರು.
ನಂತರ ಸೈನಿಕರನ್ನುದ್ದೇಶಿಸಿ ಮಾತನಾಡಿ, ಜೂನ್ 15ರಂದು ಗಲ್ವಾನ್ ಕಣಿವೆ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾದದ್ದನ್ನು ಸ್ಮರಿಸಿಕೊಂಡರು. ಭಾರತ ಯಾವತ್ತಿಗೂ ನೆರೆ ದೇಶಗಳೊಂದಿಗೆ ಯುದ್ಧ, ಸಂಘರ್ಷವನ್ನು ಬಯಸುವುದಿಲ್ಲ. ನೆರೆ ದೇಶಗಳೊಂದಿಗೆ ಯಾವತ್ತಿಗೂ ಶಾಂತಿಯನ್ನೇ ಬಯಸುತ್ತದೆ. ಆದರೆ ಕೆಲವೊಂದು ಸಂದರ್ಭದಲ್ಲಿ ಎದುರಾಗುವ ಸನ್ನಿವೇಶಗಳು ನಮ್ಮ ಸ್ವಾಯತ್ತತೆ ಮತ್ತು ಪ್ರಾಂತೀಯ ಐಕ್ಯತೆಯನ್ನು ಕಾಪಾಡಲು ಸೈನಿಕರು ಕಠಿಣ ತ್ಯಾಗಗಳನ್ನು ಮಾಡಬೇಕಾಗುತ್ತದೆ ಎಂದರು.
ಈ ಬಾರಿ ಕೂಡ ಬಿಹಾರ ರೆಜಿಮೆಂಟ್ ನ 20 ಸೈನಿಕರು ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಬೇಕಾಯಿತು. ಈ ಸಂದರ್ಭದಲ್ಲಿ ಚೀನಾಕ್ಕೆ ಏನಾಯಿತು ಎಂದು ನಾನು ಹೇಳಲು ಇಚ್ಛಿಸುವುದಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದರು.
ಅವರು ನಿನ್ನೆ ಅಪರಾಹ್ನ ಡಾರ್ಜಿಲಿಂಗ್ ನ ಮಿಲಿಟರಿ ನೆಲೆ ತ್ರಿಶಕ್ತಿ ಕಾರ್ಪ್ಸ್ ಗೆ ಆಗಮಿಸಿದ್ದರು. ಪೂರ್ವ ಲಡಾಕ್ ನಲ್ಲಿ ಚೀನಾದೊಂದಿಗೆ ಗಡಿ ಸಂಘರ್ಷ ಮುಂದುವರಿದಿರುವ ಸಂದರ್ಭದಲ್ಲಿ ಮಿಲಿಟರಿ ಯಾವ ರೀತಿ ತಯಾರಿ ನಡೆಸಿಕೊಂಡಿದೆ ಎಂದು ಪರಾಮರ್ಶೆ ನಡೆಸಲು ಮತ್ತು ಸೈನಿಕರೊಂದಿಗೆ ದಸರಾ ಆಚರಿಸಲು ಎರಡು ದಿನಗಳ ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳ ಭೇಟಿ ನಡೆಸುತ್ತಿದ್ದಾರೆ.
ರಾಜನಾಥ್ ಸಿಂಗ್ ಅವರ ಜೊತೆಗೆ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವನೆ ಕೂಡ ಇದ್ದರು.
Advertisement